ಬಿಗ್ ಬಾಸ್ ಮನೆಯಲ್ಲಿ ಪುಲ್ಲಿಂಗ ಸ್ತ್ರೀಲಿಂಗ ಸಲಿಂಗ
ಬಿಗ್ ಬಾಸ್ ರಿಯಾಲಿಟಿ ಶೋನ ಒಂಬತ್ತನೇ ದಿನದ ರಸಾವಳಿ ಈಟಿವಿ ಕನ್ನಡ ವಾಹಿನಿ ವೀಕ್ಷಕರ ಪಾಲಿಗೆ ರಸವತ್ತಾಗಿತ್ತು. ಪುರುಷ ಸ್ಪರ್ಧಿಗಳೆಲ್ಲರೂ ಸ್ತ್ರೀಯರಂತೆ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಂಡು ಮಜಾ ನೀಡಿದರು.
ಪುಲ್ಲಿಂಗಿಗಳು ಸ್ತ್ರೀಲಿಂಗಿಗಳಾಗಿ ಬದಲಾದರು. ಆದರೆ ಇದು ಕೇವಲ ವಸ್ತ್ರದಲ್ಲಷ್ಟೇ ಬದಲಾವಣೆ. ಲಿಂಗದಲ್ಲಿ ಅವರು ಪುಲ್ಲಿಂಗಿಗಳೇ ಆಗಿದ್ದರು. ಈ ವಿಚಿತ್ರ ಟಾಸ್ಕನ್ನು ಬಿಗ್ ಬಾಸ್ ಕೊಟ್ಟು ಮನೆಯಲ್ಲಿ ರೋಚಕ ವಾತಾವರಣ ಸೃಷ್ಟಿಸಿದರು.
ಮಹಿಳೆಯರಂತೆ ಸೀರೆ, ರವಿಕೆ, ಬಳೆ ತೊಟ್ಟು ತಿಲಕ್ ತಿಲಕಮ್ಮನಾದರೆ ಉಳಿದವರು ಅರುಣಿ, ರಾಘಮ್ಮ, ವಿನಯಕಮ್ಮನಾಗಿ ಬದಲಾದರು. ಮಹಿಳಾ ಸ್ಪರ್ಧಿಗಳಿಗೆ ಇವರು ಸಕಲ ಸೇವೆಗಳನ್ನೂ ಮಾಡಬೇಕಾಗಿತ್ತು.

ಸಮಾಧಾನಚಿತ್ತದಿಂದಲೇ ನಿಭಾಯಿಸಿದ ಸ್ತ್ರೀಲಿಂಗಿಗಳು
ಮಹಿಳಾ ಸ್ಪರ್ಧಿಗಳಿಗೆ ಕಾಫಿ, ಕಷಾಯ ಸೇರಿದಂತೆ ಅಡುಗೆ ಮಾಡಿಕೊಡುವುದು ಅವರು ಕೇಳಿದ್ದನ್ನು ತೆಗೆದುಕೊಂಡು ಬರುವುದು ಮಾಡಬೇಕಾಯಿತು. ಇದೆಲ್ಲವನ್ನೂ ಅವರು ಸಮಾಧಾನಚಿತ್ತದಿಂದಲೇ ನಿಭಾಯಿಸಿದರು.

ಚಂದ್ರಿಕಾಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್
ಚಂದ್ರಿಕಾ ಅವರಿಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಒಂದನ್ನು ಒಪ್ಪಿಸಿದರು. ಅದೇನೆಂದರೆ ಎಲ್ಲರೂ ಮಹಿಳೆಯರ ವಸ್ತ್ರಗಳನ್ನು ತೊಟ್ಟಿದ್ದರೆ ನರೇಂದ್ರ ಬಾಬು ಶರ್ಮಾ ಅವರು ಮಾತ್ರ ಬಿಲ್ ಕುಲ್ ಎಂದರೂ ತೊಟ್ಟಿರಲಿಲ್ಲ. ಚಂದ್ರಿಕಾ ಅವರಿಗೆ ಮನವೊಲಿಸಬೇಕಾಗಿತ್ತು.

ಯಾವುದೇ ಕಾರಣಕ್ಕೂ ಸೀರೆ ತೊಡಲ್ಲ ಎಂದ ಶರ್ಮಾ
ಗುರೂಜಿ ಒಮ್ಮೆ ಸೀರೆ ಉಟ್ಟುಕೊಳ್ಳಿ. ಶಾಲು ತರಹ ಹೊದ್ದುಕೊಳ್ಳಿ ಸಾಕು ಎಂದು ಏನೇನೇ ಹೇಳಲು ಹೊರಟರು. ಆದರೆ ಶರ್ಮಾ ಅವರು ಸುತಾರಾಂ ಒಪ್ಪಿಕೊಳ್ಳಲಿಲ್ಲ. ಜೀವನದಲ್ಲಿ ಒಮ್ಮೆ ಕಾಷಾಯ ತೊಟ್ಟ ಮೇಲೆ ಮುಗಿದುಹೋಯಿತು. ಯಾವುದೇ ಕಾರಣಕ್ಕೂ ಸೀರೆ ತೊಡಲ್ಲ ಎಂದು ಖಂಡತುಂಡವಾಗಿ ಹೇಳಿದರು.

ಸೈಲೆಂಟಾಗಿ ಕಾಲ ಕಳೆದ ಬ್ರಹ್ಮಾಂಡ ಶರ್ಮಾ
ಎಲ್ಲರೂ ತಮ್ಮ ಪಾಡಿಗೆ ತಾವು ಮಹಿಳೆಯರು ಕೊಟ್ಟ ಕೆಲಸಗಳನ್ನು ಪುರುಷ 'ಸ್ತ್ರೀಲಿಂಗಿ'ಗಳು ನಿಭಾಯಿಸುತ್ತಿದ್ದರೆ ಶರ್ಮಾ ಅವರು ಸೈಲೆಂಟಾಗಿದ್ದರು. ಅವರು ತಮಗೆ ಬೇಕಾದ್ದನ್ನು ಮಾತ್ರ ತಿಂದುಕೊಂಡು ಹಾಯಾಗಿ ಕಾಲಕಳೆದರು.

ಬಾತ್ ರೂಮು ಬಾಗಿಲು ತೆಗೆದ ವಿಜಯಮ್ಮ
ವಿಜಯ್ ರಾಘವೇಂದ್ರ ಹಾಗೂ ಅರುಣ್ ಸಾಗರ್ ಅವರನ್ನು ಬಿಗ್ ಬಾಸ್ ಒಂದಷ್ಟು ಗೋಳುಹೊಯ್ದುಕೊಂಡರು. ಚಂದ್ರಿಕಾ ಹೋದಲ್ಲಿ ಬಂದಲ್ಲೆಲ್ಲಾ ಬಾಗಿಲು ತೆಗೆಯಬೇಕಾಗಿತ್ತು ವಿಜಯ್. ಬಾತ್ ರೂಮಿಗೆ ಹೋಗಿಬಂದವರಿಗೆ ಟವೆಲ್ ಕೊಡಬೇಕಾಗಿತ್ತು ಅರುಣ್.

ಜೋಕೆ ನಾನು ಬಳ್ಳಿಯ ಮಿಂಚು
ಸ್ತ್ರೀಲಿಂಗಿಗಳಾಗಿ ಬದಲಾಗಿದ್ದವರನ್ನು ಮಲೆನಾಡ ಹೆಣ್ಣ ಮೈಬಣ್ಣ, ಜೋಕೆ ನಾನು ಬಳ್ಳಿಯ ಮಿಂಚು, ಊರಿಗೊಬ್ಳೆ ಪದ್ಮಾವತಿ ಎಂದು ವಿವಿಧ ಹಾಡುಗಳನ್ನು ಹಾಡಿ ಚುಡಾಯಿಸಿದರು. ಆದರೂ ಸ್ತ್ರೀಲಿಂಗಿಗಳು ತುಟಿಪಿಟಿಕ್ ಎನ್ನದೆ ಎಲ್ಲವನ್ನೂ ಸಹಿಕೊಂಡರು.

ಹಾಸಿಗೆ ಮೇಲೆ ಸಲಿಂಗಕಾಮದ ಬಗ್ಗೆ ಮಾತು
ಮಹಿಳೆಯರೆಲ್ಲರೂ ಒಮ್ಮೆ ಮಲಗಿದಾಗ ಒಬ್ಬರ ಮೇಲೆ ಒಬ್ಬರು ಉರುಳಾಡಿ ಮಜಾ ಮಾಡಿದರು. ಈ ಸಂದರ್ಭದಲ್ಲಿ ಅಪರ್ಣಾ ಅವರು ಸುಮ್ಮನಿರಿ ಸಾಕು. ಮತ್ತೆ ಯಾರಾದರೂ ಅಯ್ಯೋ ಇದೇನಪ್ಪಾ ಸಲಿಂಗಕಾಮ ಎಂದಾರು. ಅತ್ಯಾಚಾರ ಎಂದರೂ ಎನ್ನಬಹುದು ಎಂದು ಎಚ್ಚರಿಸಿದರು.

ಜೋಗುಳ ಹಾಡಿ ಮಲಗಿಸಿದ ಸ್ತ್ರೀಲಿಂಗಿಗಳು
ಬಳಿಕ ರಾತ್ರಿ ಮಲಗುವಾಗ ಜೋಗುಳ ಹಾಡಬೇಕಾಗಿತ್ತು. ಒಂದು ಹಂತದಲ್ಲಿ ವಿಜಯ ರಾಘವೇಂದ್ರ ಅವರು ತಾಯಿಯನ್ನು ನೆನೆಸಿಕೊಂಡು ಭಾವುಕರಾದರು. ಈಗಲೂ ನನಗೆ ನಿದ್ದೆ ಬಾರದಿದ್ದರೆ ತಮ್ಮ ಹೆಂಡತಿಯೇ ತಟ್ಟಿ ಮಲಗಿಸುತ್ತಾರೆ ಎಂದೂ ಹೇಳಿಕೊಂಡರು. ಅಲ್ಲಿಗೆ ಒಂಭತ್ತನೇ ದಿನದ ಆಟ ಮುಗಿದಿದೆ.


Click it and Unblock the Notifications











