ಆರಂಭಕ್ಕೂ ಮುನ್ನವೇ 'ಬಿಗ್ ಬಾಸ್ ಕನ್ನಡ-4'ಗೆ ಎದುರಾಗಿದೆ 'ಬಿಗ್' ಸಂಕಷ್ಟ.!
'ಬಿಗ್ ಬಾಸ್ ಕನ್ನಡ-4' ಚಾಲನೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ರೆಡ್ ಕಾರ್ಪೆಟ್ ತುಳಿದು 'ಬಿಗ್ ಬಾಸ್' ಮನೆಯೊಳಗೆ ಪ್ರವೇಶ ಮಾಡುವವರು ಯಾರ್ಯಾರು ಎಂಬುದು ಈಗಾಗಲೇ ಫೈನಲ್ ಆಗಿದೆ.
ಮೊನ್ನೆತಾನೆ, 'ಬಿಗ್ ಬಾಸ್' ಕಾರ್ಯಕ್ರಮದ ರೂವಾರಿ ಪರಮೇಶ್ವರ ಗುಂಡ್ಕಲ್, ನಿರೂಪಕ ಕಿಚ್ಚ ಸುದೀಪ್ ಮಾಧ್ಯಮ ಗೋಷ್ಠಿ ನಡೆಸಿ, 'ಬಿಗ್ ಬಾಸ್ ಕನ್ನಡ-4' ವಿಶೇಷತೆಗಳ ಬಗ್ಗೆ ಮಾಹಿತಿ ಕೊಟ್ರು. ಇನ್ನೇನು, 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಬೇಕು ಅಷ್ಟೆ. ಅಷ್ಟರಲ್ಲಿ ಈ ಶೋಗೆ ವಿಘ್ನ ಎದುರಾಗಿದೆ. [ಕಿಚ್ಚ ಸುದೀಪ್ ಗೂ 'ಬಿಗ್ ಬಾಸ್' ದೊಡ್ಡ ಸವಾಲು.! ಯಾಕೆ ಗೊತ್ತಾ.?]
'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳೂ ಕೂಡ ಸಂಕಟಕ್ಕೆ ಸಿಲುಕುವಂತಾಗಿದೆ. ಮುಂದೇ ಓದಿ.....

'ಬಿಗ್ ಬಾಸ್' ನಲ್ಲಿ ಸುದೀಪ್ ಭಾಗವಹಿಸಬಾರದು.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸಬಾರದು ಅಂತ ಕನ್ನಡ ಚಿತ್ರ ನಿರ್ಮಾಪಕರು ಒತ್ತಾಯಿಸಿದ್ದಾರೆ. ನಿನ್ನೆ (ಅಕ್ಟೋಬರ್ 5) ಸಂಜೆ ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತುರ್ತು ಸಭೆ ನಡೆಸಿ, ''ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸದಂತೆ ಮನವಿ ಮಾಡಲು'' ನಿರ್ಮಾಪಕರು ಒಕ್ಕೊರಲಿನ ನಿರ್ಧಾರ ಕೈಗೊಂಡಿದ್ದಾರೆ. ['ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!]

ನಿರ್ಮಾಪಕರಿಗೆ ನಷ್ಟವಾಗುತ್ತಿದೆ.!
''ರಿಯಾಲಿಟಿ ಶೋಗಳಿಗೆ ಸಿನಿಮಾ ತಾರೆಯರು ಹೋಗುವುದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಹೀಗಾಗಿ 'ಬಿಗ್ ಬಾಸ್' ಕಾರ್ಯಕ್ರಮಕ್ಕೂ ಸುದೀಪ್ ಹೋಗಬಾರದು'' ಎಂಬುದು ನಿರ್ಮಾಪಕರ ಆಗ್ರಹ.[ಭುಗಿಲೆದ್ದ 'ರಿಯಾಲಿಟಿ ಶೋ' ವಿವಾದ: 'ಸ್ಟಾರ್'ಗಳ ವಿರುದ್ಧ ಸಾ.ರಾ.ಗೋವಿಂದು ಗರಂ]

ನಿರ್ಮಾಪಕರ ಪಾಲಿನ ಹೀರೋ
''ಸುದೀಪ್ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟ. ಅದಕ್ಕಿಂತಲೂ ಹೆಚ್ಚಾಗಿ ನಿರ್ಮಾಪಕರ ಪಾಲಿನ ಹೀರೋ. ಸುದೀಪ್ ಯಾವತ್ತೂ ನಿರ್ಮಾಪಕರ ಹಿತದೃಷ್ಟಿಯಿಂದ ಕೆಲಸ ಮಾಡುವವರು. ಎಷ್ಟೋ ಬಾರಿ ಅವರು ನಟಿಸಿದ ಸಿನಿಮಾಗಳಿಗೆ ಸಂಭಾವನೆ ಬರದಿದ್ದರೂ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟ ದೊಡ್ಡ ಮನಸ್ಸಿನ ವ್ಯಕ್ತಿ. ಇದೆಲ್ಲದರ ಜೊತೆಗೆ ಅಪಾರ ಅಭಿಮಾನಿ ಬಳಗವನ್ನು, ಪ್ರೇಕ್ಷಕರನ್ನು ಹೊಂದಿರುವವರು. ಇಂಥ ನಟ ಟಿವಿ ಪರದೆಯಲ್ಲಿ ಕಾಣಿಸಿಕೊಂಡರೆ ಜನ ಯಾವ ಕಾರಣಕ್ಕೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡೋದಿಲ್ಲ. ಹೀಗಾಗಿ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬರಲೇಬೇಕು'' ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

'ಬಿಗ್ ಬಾಸ್' ಸ್ಪರ್ಧಿಗಳು ಮನೆಯೊಳಗೆ ಹೋಗಬಾರದು!
''ಕೇವಲ ಸುದೀಪ್ ಮಾತ್ರವಲ್ಲ, ಚಿತ್ರರಂಗಕ್ಕೆ ಸಂಬಂಧಿಸಿದ ಕಲಾವಿದರೂ ಕೂಡ ಬಿಗ್ ಬಾಸ್ನಲ್ಲಿ ಪಾಲ್ಗೊಳ್ಳಬಾರದು. ಒಂದು ವೇಳೆ ಬಿಗ್ ಬಾಸ್ ಮನೆ ಪ್ರವೇಶಸಿದ್ದೇ ಆದರೆ ನಮ್ಮ ಜೀವವನ್ನು ತೆಗೆದು ನಮ್ಮ ಮೇಲೆಯೇ ನಡೆದು ಹೋಗಲಿ'' ಅಂತ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ]

ಕಿಚ್ಚನ ಮುಂದಿನ ನಡೆ ಏನು ?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೇ 'ರಿಯಾಲಿಟಿ ಶೋ'ಗಳನ್ನು ವಿರೋಧಿಸುತ್ತಿರುವುದರಿಂದ ಸುದೀಪ್ ರವರ ಮುಂದಿನ ನಡೆ ಏನು ಎಂಬುದು ಸದ್ಯದ ಪ್ರಶ್ನೆ. ನಿರ್ಮಾಪಕರ ಕಷ್ಟಕ್ಕೆ ಸದಾ ಸ್ಪಂದಿಸುವ ಸುದೀಪ್, 'ಬಿಗ್ ಬಾಸ್'ನಿಂದ ಹೊರಗುಳಿಯುತ್ತಾರಾ ಅಥವಾ ಕಲರ್ಸ್ ಕನ್ನಡ ವಾಹಿನಿಯ ನಿಯಮದ ಪ್ರಕಾರ ಎಂದಿನಂತೆ ಕಾರ್ಯಕ್ರಮನ್ನ ನಿರೂಪಣೆ ಮಾಡ್ತಾರಾ? ನೋಡೋಣ.

ಅಕ್ಟೋಬರ್ 8ಕ್ಕೆ 'ಬಿಗ್ ಬಾಸ್' ಮನೆ ಎದುರು ಪ್ರತಿಭಟನೆ !
ಅಕ್ಟೋಬರ್ 8ರಂದು ಬಿಡದಿಯಲ್ಲಿ 'ಬಿಗ್ ಬಾಸ್' ಗ್ರ್ಯಾಂಡ್ ಓಪನ್ನಿಂಗ್ ಕಾರ್ಯಕ್ರಮವನ್ನ ಚಿತ್ರೀಕರಿಸಲಾಗುತ್ತೆ. ಅವತ್ತು 'ಬಿಗ್ ಬಾಸ್' ಮನೆ ಎದುರು ನಿರ್ಮಾಪಕರೆಲ್ಲಾ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅಂದು ಅಲ್ಲಿ ಏನಾಗುತ್ತೋ ಅನ್ನೋ ಆತಂಕ ಕೂಡ ಎದುರಾಗಿದೆ.

ಶುರು ಆಗುತ್ತಾ 'ಬಿಗ್ ಬಾಸ್'?
ಈ ಎಲ್ಲಾ ಸಂಕಟ, ವಿಘ್ನಗಳನ್ನ ಎದುರಿಸಿ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಾ ಅಂತಾ ಕಾದುನೋಡುವುದಷ್ಟೇ ಸದ್ಯಕ್ಕಿರುವ ಆಪ್ಷನ್.


Click it and Unblock the Notifications











