ಟೀಚರ್ ಮಾಡಿದ ಎಡವಟ್ಟು: ಈಡೇರಲಿಲ್ಲ ವಿದ್ಯಾರ್ಥಿನಿ ವರಲಕ್ಷ್ಮಿ ಕನಸು.!
ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
- ಇದು ಗುರುವನ್ನು ಸ್ತುತಿಸುವ ಶ್ಲೋಕ.
ಮುಂದೆ ಗುರಿ, ಹಿಂದೆ ಗುರು ಎದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತಿದೆ. ಅದರಂತೆ ಮಕ್ಕಳಿಗೆ ತಮ್ಮ ಶಿಕ್ಷಕರೇ ಗುರುಗಳು.
ಶಾಲೆಯಲ್ಲಿ ತಮ್ಮನ್ನು ತಿದ್ದಿ ತೀಡುವ ಮೇಷ್ಟ್ರು ಕಂಡ್ರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಅಕ್ಕರೆ-ಗೌರವ. ವಿದ್ಯೆ ನೀಡುವ, ಬುದ್ಧಿ ಕಲಿಸುವ ಶಿಕ್ಷಕರಿಗೆ ಸರ್ವವೂ ಅರಿತಿದೆ ಎಂಬ ಮನೋಭಾವ ವಿದ್ಯಾರ್ಥಿಗಳಿಗಿದೆ. ಹೀಗಾಗಿ, ಶಿಕ್ಷಕರ ಮೇಲೆ ವಿಧೇಯ ವಿದ್ಯಾರ್ಥಿಗಳಿಗೆ ಅಪಾರ ನಂಬಿಕೆ.
ಗುರು-ಶಿಷ್ಯ, ಶಿಕ್ಷಕ-ವಿದ್ಯಾರ್ಥಿ ನಡುವಿನ ಅನುಬಂಧ-ನಂಬಿಕೆ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ 'ಕನ್ನಡದ ಕೋಟ್ಯಧಿಪತಿ' ವೇದಿಕೆ. ಟೀಚರ್ ಮೇಲಿನ ಅಪಾರವಾದ ನಂಬಿಕೆಯಿಂದ ವಿದ್ಯಾರ್ಥಿನಿ ವರಲಕ್ಷ್ಮಿ ಹಿಂದೆ ಮುಂದೆ ಯೋಚಿಸದೆ ಉತ್ತರ ಲಾಕ್ ಮಾಡಿಬಿಟ್ಟಳು. ದುರಾದೃಷ್ಟ ಅಂದ್ರೆ, ಶಿಕ್ಷಕಿ ಕೊಟ್ಟಿದ್ದ ಉತ್ತರ ತಪ್ಪಾಗಿತ್ತು. ಅಲ್ಲಿಯವರೆಗೂ ಲಕ್ಷ ಗೆದ್ದಿದ್ದ ವರಲಕ್ಷ್ಮಿ, ಟೀಚರ್ ಕೊಟ್ಟ ಒಂದೇ ಒಂದು ತಪ್ಪು ಉತ್ತರದಿಂದ ಏಕ್ದಂ ಹತ್ತು ಸಾವಿರಕ್ಕೆ ಇಳಿಯಬೇಕಾಯಿತು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಏಳನೇ ಕ್ಲಾಸ್ ಹುಡುಗಿ ವರಲಕ್ಷ್ಮಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಸಾರವಾದ 'ಕನ್ನಡದ ಕೋಟ್ಯಧಿಪತಿ' ವಿಶೇಷ ಸಂಚಿಕೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಬೊಮ್ಮನ ಹಳ್ಳಿಯಲ್ಲಿ ಏಳನೇ ಕ್ಲಾಸ್ ಓದುತ್ತಿರುವ ಮಂಡ್ಯದ ಹುಡುಗಿ ವರಲಕ್ಷ್ಮಿ ಕೂಡ ಪಾಲ್ಗೊಂಡಳು. ಮೊದಲ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆಯಲ್ಲಿ ಅತಿ ವೇಗವಾಗಿ ಸರಿಯಾದ ಉತ್ತರ ಕೊಟ್ಟು ಹಾಟ್ ಸೀಟ್ ಮೇಲೆ ಕೂರುವ ಅವಕಾಶ ಸಿಕ್ಕಿದ್ದು ಇದೇ ವರಲಕ್ಷ್ಮಿಗೆ.

ಪ್ರತಿಭಾವಂತ ಹುಡುಗಿ ವರಲಕ್ಷ್ಮಿ
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು 'ಕನ್ನಡದ ಕೋಟ್ಯಧಿಪತಿ' ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ.

ವರಲಕ್ಷ್ಮಿ ಆಸೆ ಏನಾಗಿತ್ತು.?
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ ವರಲಕ್ಷ್ಮಿಗಿತ್ತು. ಕೋಟಿ ಗೆಲ್ಲದೇ ಹೋದರೂ, 25 ಲಕ್ಷವಾದರೂ ಗೆಲ್ಲಬೇಕು ಎಂಬ ಹಠ ಆಕೆಯಲ್ಲಿತ್ತು. ಗೆಲ್ಲುವ ಹಣದಲ್ಲಿ ತನ್ನ ವಿದ್ಯಾಭ್ಯಾಸಕ್ಕೆ ಮತ್ತು ರಾಗಿ ಬೆಳೆಯುವ ತನ್ನ ತಂದೆಯ ವ್ಯವಸಾಯಕ್ಕೆ ಸಹಾಯ ಮಾಡುವ ಆಲೋಚನೆ ಹೊಂದಿದ್ದಳು. ಜೊತೆಗೆ ತಾನು ಓದುವ ಶಾಲೆಯಲ್ಲಿ ಕ್ಲಾಸ್ ರೂಮ್ ಕಟ್ಟಿಸುವ ಇಚ್ಛೆ ಕೂಡ ಆಕೆಯಲ್ಲಿತ್ತು.

ನಾನ್ ಸ್ಟಾಪ್ ಆಗಿ ಓಡಿದ ವರಲಕ್ಷ್ಮಿ
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಒಂಬತ್ತು ಪ್ರಶ್ನೆಗಳಿಗೆ ಸತತವಾಗಿ ಸರಿಯಾದ ಉತ್ತರ ನೀಡುತ್ತ 160,000 ರೂಪಾಯಿಗಳನ್ನು ವರಲಕ್ಷ್ಮಿ ಗಳಿಸಿದ್ದರು. ಅಚ್ಚರಿ ಅಂದ್ರೆ, ಈ ಒಂಬತ್ತು ಪ್ರಶ್ನೆಗಳಿಗೆ ಯಾವುದೇ ಲೈಫ್ ಲೈನ್ ಬಳಸದೆ, ಎಲ್ಲಾ ಪ್ರಶ್ನೆಗಳಿಗೂ ಪಟ ಪಟ ಅಂತ ವರಲಕ್ಷ್ಮಿ ಉತ್ತರ ಕೊಟ್ಟಿದ್ದಳು.

ವರಲಕ್ಷ್ಮಿಗೆ ಕೈಕೊಟ್ಟ ಪ್ರಶ್ನೆ
ನಾನ್ ಸ್ಟಾಪ್ ಆಗಿ ಆಡಿಕೊಂಡು ಬಂದ ವರಲಕ್ಷ್ಮಿಗೆ ಸ್ಪೀಡ್ ಬ್ರೇಕರ್ ಆಗಿದ್ದು ಹತ್ತನೇ ಪ್ರಶ್ನೆ. 320,000 ರೂಪಾಯಿಗೆ ಕೇಳಲಾದ ಪ್ರಶ್ನೆ ಹೀಗಿತ್ತು -
* ಈ ಕೆಳಗಿನವುಗಳಲ್ಲಿ ಯಾವ ಸ್ಥಳವು ಬಂಗಾಳ ಕೊಲ್ಲಿಯ ಕರಾವಳಿ ಪ್ರದೇಶದಲ್ಲಿದೆ?
ಅಜಂತಾ, ತಂಜಾವೂರು, ಕೊನಾರ್ಕ್, ಉಜ್ಜಯನಿ
- ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ವರಲಕ್ಷ್ಮಿ ಮೊಟ್ಟ ಮೊದಲ ಬಾರಿಗೆ ಲೈಫ್ ಲೈನ್ ಬಳಸಿದಳು. ಹಾಗ್ನೋಡಿದ್ರೆ, ವರಲಕ್ಷ್ಮಿ 'ಆಡಿಯನ್ಸ್ ಪೋಲ್' ಬಳಸಬಹುದಿತ್ತು. ಆದ್ರೆ, ಆಕೆ 'ಫೋನ್ ಎ ಫ್ರೆಂಡ್' ಆಯ್ಕೆ ಮಾಡಿಕೊಂಡಳು. ತನಗೆ ಸೋಷಿಯಲ್ ಮತ್ತು ಸೈನ್ಸ್ ಹೇಳಿಕೊಡುವ ಗೌರಮ್ಮ ಟೀಚರ್ ಗೆ ವರಲಕ್ಷ್ಮಿ ಫೋನ್ ಮಾಡಿದಳು. ಆ ಕಡೆಯಿಂದ ಶಿಕ್ಷಕಿ ಗೌರಮ್ಮ 'ತಂಜಾವೂರು' ಎಂದು ಉತ್ತರಿಸಿದರು. ಇನ್ನೊಂದು ಬಾರಿ ವರಲಕ್ಷ್ಮಿ ಪ್ರಶ್ನೆ ಕೇಳುವಷ್ಟರಲ್ಲಿ ಮೂವತ್ತು ಸೆಕೆಂಡ್ ಮುಗಿದಿತ್ತು, ಫೋನ್ ಕಟ್ ಆಯ್ತು.

ಪುನೀತ್ ಕೊಟ್ಟ ಸೂಚನೆ ಅರ್ಥ ಆಗಲಿಲ್ಲ.!
''ಡೌಟ್ ಇದ್ದರೆ, ಇನ್ನೊಂದು ಲೈಫ್ ಲೈನ್ ಬಳಸಬಹುದು.. ಟೈಮ್ ಇದೆ.. ಇನ್ನೂ ಎರಡು ಲೈಫ್ ಲೈನ್ ಇದೆ'' ಅಂತ ಪದೇ ಪದೇ ಪುನೀತ್ ರಾಜ್ ಕುಮಾರ್ ಹೇಳುತ್ತಿದ್ದರು. ಈ ಸೂಚನೆಯನ್ನು ಅರ್ಥ ಮಾಡಿಕೊಳ್ಳದ ವರಲಕ್ಷ್ಮಿ, ಶಿಕ್ಷಕಿ ಗೌರಮ್ಮ ಮೇಲೆ ನಂಬಿಕೆ ಇಟ್ಟು 'ತಂಜಾವೂರು' ಲಾಕ್ ಮಾಡಿಬಿಟ್ಟಳು. ದುರಾದೃಷ್ಟ ಅಂದ್ರೆ, ಅದು ತಪ್ಪು ಉತ್ತರ. ಸರಿಯಾದ ಉತ್ತರ 'ಕೊನಾರ್ಕ್'. 320,000 ವರೆಗೂ ಯಾವುದೇ ಲೈಫ್ ಲೈನ್ ಬಳಸದೇ ಬಂದಿದ್ದ ವರಲಕ್ಷ್ಮಿ ಏಕ್ದಂ ಹತ್ತು ಸಾವಿರಕ್ಕೆ ಕುಸಿದು ಬಿಟ್ಟಳು. ಅಲ್ಲಿಗೆ, ತಂದೆಗೆ ಸಹಾಯ ಮಾಡುವ ಆಸೆ, ಕ್ಲಾಸ್ ರೂಮ್ ಕಟ್ಟಿಸುವ ಕನಸು.. ಎರಡೂ ಕನಸಾಗಿಯೇ ಉಳಿಯಬೇಕಾಯಿತು. ಟೀಚರ್ ಮಾಡಿದ ಒಂದೇ ಒಂದು ಎಡವಟ್ಟಿನಿಂದ ವರಲಕ್ಷ್ಮಿ ಆಸೆ ಈಡೇರದೇ ಹೋಯಿತು.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್


Click it and Unblock the Notifications











