ಬಿಗ್ ಬಾಸ್ ನಿಂದ ಲೂಸ್ ಮಾದ ಹೊರಬಿದ್ದಿದ್ದೇಕೆ?
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಿಂದ ಇದ್ದಕ್ಕಿದ್ದಂತೆ ಲೂಸ್ ಮಾದ ಅಲಿಯಾಸ್ ಯೋಗೀಶ್ ಓಡಿಬಂದಿದ್ದಾರೆ. ಶನಿವಾರವೇ ಮನೆಯಿಂದ ಹೊರಬಿದ್ದಿರುವ ಅವರು ಸದ್ಯಕ್ಕೆ ಬೆಂಗಳೂರಿನ ಜೆಪಿ ನಗರದ ತಮ್ಮ ಮನೆಗೆ ಸುಧಾರಿಸಿಕೊಳ್ಳುತ್ತಿದ್ದಾರೆ.
ಸತತ ಎರಡು ವಾರಗಳಿಂದ ಲೂಸ್ ಮಾದ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಈಟಿವಿ ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದರು. ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿ ನಿಕಿತಾ ಜೊತೆಗೆ ಲೂಸ್ ಮಾದನಿಗೆ ಮದುವೆಯನ್ನೂ ಮಾಡಿಸಲಾಗಿತ್ತು.
ಮದುವೆ ಬಳಿಕ ಬಿಗ್ ಬಾಸ್ ಮನೆ ಅಳಿಯನಾಗಿದ್ದ ಯೋಗೀಶ್ ಮೊದಲ ರಾತ್ರಿಯೇ ನಾಪತ್ತೆಯಾಗಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ಅವರನ್ನು ಮನೆಗೆ ಕರೆತರಲಾಗಿತ್ತು. ಮನೆಯಲ್ಲಿ ಅವರು ಸ್ಪರ್ಧಿಯಲ್ಲದಿದ್ದರೂ ಅತಿಥಿಯಾಗಿ ಪ್ರವೇಶಿಸಿದ್ದರು.
ಈ ಸಲದ ವಾರದ ಕಥೆ ಕಿಚ್ಚನ ಜೊತೆಯಲ್ಲೂ ಸುದೀಪ್ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಯೋಗೀಶ್ ಅವರೇ ನೀವೇ ಇಷ್ಟಪಟ್ಟು ಈ ಮನೆಗೆ ಬಂದಿದ್ದು ಎಂಬರ್ಥದಲ್ಲಿ ಸುದೀಪ್ ಹೇಳಿದ್ದರು. ಈ ಮಾತು ಈಗೇಕೆ ಹೇಳುತ್ತಿದ್ದಾರೆ ಎಂದು ಆಗ ಯಾರಿಗೂ ಅರ್ಥವಾಗಿರಲಿಲ್ಲ.

'ಜಿಂಕೆಮರಿ' ಪ್ರಚಾರಕ್ಕಾಗಿ ಓಡಿಬಂದ ಯೋಗಿ
ಮಾರನೆ ದಿನ ನೋಡಿದರೆ ಯೋಗೀಶ್ ಮನೆಯಿಂದ ಹೊರಬಿದ್ದಿದ್ದಾರೆ. ಇದಕ್ಕೆ ಕಾರಣವಾಗಿರುವುದು 'ಜಿಂಕೆಮರಿ' ಚಿತ್ರದ ಪ್ರೊಮೋಷನ್. ಚಿತ್ರವೊಂದು ಬಿಡುಗಡೆಯಾಗುತ್ತಿದೆ ಎಂದರೆ ಪ್ರಚಾರ ಕಾರ್ಯಕ್ಕೆ ನಾಯಕ ನಟ ಬಹಳ ಮುಖ್ಯ. ಆದರೆ ಯೋಗೀಶ್ ಬಿಗ್ ಬಾಸ್ ಮನೆಯಲ್ಲಿ ತಣ್ಣಗೆ ಕುಳಿತುಬಿಟ್ಟಿದ್ದ.

ಅಲ್ಲಿಂದಲೇ ಅಪ್ಪನಿಗೆ ಶುಭಾಶಯ ಹೇಳಿದ್ದ
ಇತ್ತ ನಿರ್ಮಾಪಕರು ಕಂಗಾಲಾಗಿದ್ದರು. ಹೋಗಲಿ ಬಿಗ್ ಬಾಸ್ ಮನೆಯಲ್ಲಾದರೂ ಜಿಂಕೆಮರಿ ಚಿತ್ರದ ಪ್ರಚಾರ ನಡೆಯಿತೇ? ಅದೂ ಇಲ್ಲ. ಮನೆಯಿಂದಲೇ ತಮ್ಮ ತಂದೆಯವರಿಗೂ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು ಯೋಗೀಶ್.

ಟಿಪಿ ಸಿದ್ಧರಾಜು ಅವರೇ ಒತ್ತಡ ಹೇರಿದರಂತೆ
ಆದರೆ ಮಗ ಜೊತೆಗಿಲ್ಲ ಎಂಬ ಕಾರಣಕ್ಕೆ ಟಿ.ಪಿ.ಸಿದ್ಧರಾಜು ಅವರು ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಳ್ಳಲಿಲ್ಲವಂತೆ. ಜಿಂಕೆಮರಿ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರುವಂತೆ ಬಿಗ್ ಬಸ್ ನಿರ್ವಾಹಕರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಹೊರಗಿನ ಸಂಪರ್ಕ ಇಲ್ಲದೆ ಕಂಗಾಲಾಗಿದ್ದ
ಕಡೆಗೂ ಲೂಸ್ ಮಾದನನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಗಿದೆ. ಎರಡು ವಾರ ಮೊಬೈಲ್ ಇಲ್ಲದೆ, ಹೊರಗಿನ ಸಂಪರ್ಕವಿಲ್ಲದೆ ಲೂಸ್ ಮಾದ ಕಂಗಾಲಾಗಿದ್ದ. ಕಡೆಗೂ ಅಲ್ಲಿಂದ ಹೊರಬಿದ್ದಿದ್ದಾರೆ.

ಮನೆಯಲ್ಲಿ ಸೈಲೆಂಟ್ ಆಗಿದ್ದ ಲೂಸ್ ಮಾದ
ಇನ್ನೊಂದು ಮಾಹಿತಿಯ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ 'ಲೂಸ್ ಮಾದ' ಇದ್ದೂ ಇಲ್ಲದಂತಿದ್ದ. ಅಲ್ಲಿ ಎಲ್ಲರೂ ಒಂದಲ್ಲ ಒಂದು ಗಿಮ್ಮಿಕ್ ಗಳನ್ನು ಮಾಡಿ ಗಮನಸೆಳೆಯುತ್ತಿದ್ದರೆ ಲೂಸ್ ಮಾದ ಮಾತ್ರ ಸೈಲೆಂಟಾಗಿದ್ದ. ಅಲ್ಲಿಂದ ಹೊರಬೀಳಲು ಇದೂ ಒಂದು ಕಾರಣವಾಗಿರಹುದೇನೋ?

ನಿಕಿತಾ ಇರುವಷ್ಟು ದಿನ ಇರಬೇಕಾಗಿತ್ತು
ಬಿಗ್ ಬಾಸ್ ನಿಯಮಗಳ ಪ್ರಕಾರ ನಿಕಿತಾ ಅವರು ಎಷ್ಟು ದಿನ ಮನೆಯಲ್ಲಿರುತ್ತಾರೋ ಅಷ್ಟು ದಿನ ಯೋಗೀಶ್ ಇರಬೇಕಾಗಿತ್ತು. ನಿಕಿತಾರನ್ನು ನಾಮಿನೇಟ್ ಮಾಡಿದರೆ ಯೋಗೀಶ್ ಸಹ ನಾಮಿನೇಟ್ ಆಗುತ್ತಿದ್ದ. ನಿಕಿತಾ ಹೊರಬಿದ್ದರೆ ಯೋಗಿ ಸಹ ಹೊರಬರಬೇಕಾಗಿತ್ತು. ಈಗ ಅದಕ್ಕೂ ಮೊದಲೆ ಹೊರಬಂದಿದ್ದಾರೆ. ಅದೇನು ಕಥೆನೋ ಏನೋ.


Click it and Unblock the Notifications











