ಜಾಹಿರಾತಿಗೆ ಧರ್ಮದ ನಂಟು ಕಟ್ಟಿದ ನೆಟ್ಟಿಗರು: ಟಾಟಾ ವಿರುದ್ಧವೂ ಆಕ್ರೋಶ
ಕಲೆ ಧರ್ಮಾತೀತವಾದುದು ಎಂಬುದೇ ಎಲ್ಲರ ನಂಬಿಕೆ. ಆದರೆ ಇತ್ತೀಚೆಗೆ ಕಲೆಯೇ ಧರ್ಮಾಂಧತೆಗೆ ಮೊದಲ ತುತ್ತಾಗುತ್ತಿದೆ.
ಒಂದು ನಿಮಿಷದ ಜಾಹೀರಾತನ್ನೂ ಸಹಿಸದ ಸ್ಥಿತಿಗೆ ಭಾರತದ ಬಹುಪಾಲು ಮಂದಿ ಬಂದು ನಿಂತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ 'ತನಿಷ್ಕ್' ಜಾಹೀರಾತಿನ ವಿರುದ್ಧ ಎದ್ದಿರುವ ಸಿಟ್ಟು. ನಟಿ ಕಂಗನಾ ರಣೌತ್ ಸಹ ಜಾಹೀರಾತಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದ ಖ್ಯಾತ ಆಭರಣ ಬ್ರ್ಯಾಂಡ್ ತನಿಷ್ಕ್ ಇತ್ತೀಚೆಗೆ ಒಂದು ಜಾಹೀರಾತು ಪ್ರಸಾರ ಮಾಡಿತ್ತು. ಆದರೆ ಆ ಜಾಹೀರಾತು 'ಲವ್ ಜಿಹಾದ್' ಗೆ ಪ್ರೇರೇಪಣೆ ನೀಡುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು. ತನಿಷ್ಕ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿದರು. ತರುವಾಯ, ಸಂಸ್ಥೆಯು ಜಾಹೀರಾತನ್ನು ಹಿಂಪಡೆದಿದೆ.

ಜಾಹೀರಾತಿನಲ್ಲಿ ಇರುವುದೇನು?
ಸೃಜನಾತ್ಮಕ ದೃಷ್ಟಿಕೋನದಿಂದ ನೋಡಿದಲ್ಲಿ ಜಾಹೀರಾತು ಸುಂದರವಾಗಿತ್ತು. ಮುಸ್ಲಿಂ ಮನೆಯ ಹಿಂದು ಸೊಸೆಗೆ ಹಿಂದು ಸಂಪ್ರದಾಯದಂತೆ ಸೀಮಂತ ಮಾಡುವ ದೃಶ್ಯ ಜಾಹೀರಾತಿನಲ್ಲಿದೆ. ಜಾಹೀರಾತಿನ ಕೊನೆಯಲ್ಲಿ ಮುಸ್ಲಿಂ ಮನೆಯ ಅತ್ತೆ ಹಿಂದು ಸೊಸೆಗೆ ತನಿಷ್ಕ್ ನ ಚಿನ್ನದ ಸರ ನೀಡುತ್ತಾಳೆ.

ಜಾಹಿರಾತಿಗೆ ತೀವ್ರ ವಿರೋಧ
ಆದರೆ ಈ ಜಾಹಿರಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಲವ್ ಜಿಹಾದ್ ಗೆ ಪ್ರೇರೇಪಣೆ ನೀಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ತನಿಷ್ಕ್ ಅನ್ನು ನಿಷೇಧಿಸುವಂತೆಯೂ ಕರೆ ನೀಡಲಾಗಿದೆ. ಜಾಹೀರಾತನ್ನು ಬೆಂಬಲಿಸಿ ಸಹ ಹಲವರು ಟ್ವೀಟ್ ಮಾಡಿದ್ದಾರೆ.

ಜಾಹೀರಾತು ಹಿಂಪಡೆದ ತನಿಷ್ಕ್
ವಿರೋಧ ವ್ಯಕ್ತವಾದ ಕಾರಣ ತನಿಷ್ಕ್ ಜಾಹೀರಾತನ್ನು ಸಂಸ್ಥೆಯು ಹಿಂಪಡೆದಿದೆ. ಟಾಟಾ ಸಮೂಹ ಸಂಸ್ಥೆಯ ಭಾಗವಾದ ತನಿಷ್ಕ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, 'ಏಕತ್ವಂ' ಹೆಸರಿನಲ್ಲಿ ಈ ಜಾಹೀರಾತು ಪ್ರಕಟಿಸಲಾಗಿತ್ತು, ಆದರೆ ಈ ಜಾಹೀರಾತು ನಮ್ಮ ಸಿಬ್ಬಂದಿ, ಅಂಗಡಿ ಸಿಬ್ಬಂದಿ ಪಾಲುದಾರರಿಗೆ ಸಮಸ್ಯೆ ಆಗುತ್ತದೆಂದು ಜಾಹೀರಾತು ಹಿಂಪಡೆಯುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ರತನ್ ಟಾಟಾ ಮೇಲೂ ಆಕ್ರೋಶ
ಟಾಟಾ ಸಂಸ್ಥೆ ಮಾಲೀಕ ರತನ್ ಟಾಟಾ ವಿರುದ್ಧವೂ ಸಹ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ರತನ್ ಟಾಟಾ ಅವರನ್ನು ದೇಶದ್ರೋಹಿ ಎಂದಿದ್ದಾರೆ. ಇನ್ನು ಕೆಲವರು ರತನ್ ಟಾಟಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ.


Click it and Unblock the Notifications











