ಕಿರುತೆರೆ ಪ್ರೇಕ್ಷಕರಿಗಾಗಿ ಮತ್ತೊಮ್ಮೆ ಬರ್ತಿದೆ 'ಅಮೃತವರ್ಷಿಣಿ'
ಅಮೃತವರ್ಷಿಣಿ ...ಈ ಧಾರಾವಾಹಿ ಯಾರಿಗೆ ತಾನೆ ನೆನಪಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅತ್ಯಂತ ಯಶಸ್ವಿಯಾಗಿ 1500 ಸಂಚಿಕೆಗಳನ್ನು ಪೂರೈಸಿದ ಸೂಪರ್ ಹಿಟ್ ಧಾರಾವಾಹಿ. ಇದೀಗ ಸುವರ್ಣ ವಾಹಿನಿ ಮತ್ತೆ ಅಮೃತವರ್ಷಿಣಿಯನ್ನು ವೀಕ್ಷಕರ ಮಡಿಲಿಗೆ ಅರ್ಪಿಸಲು ಸಜ್ಜಾಗಿದೆ. ಆದರೆ ಈ ಬಾರಿ ಹೊಸ ಕತೆಯೊಂದಿಗೆ.
ಇದೇ ನವೆಂಬರ್ 12ರಿಂದ ರಾತ್ರಿ 9:00 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಹೊಸ ಅಮೃತವರ್ಷಿಣಿ ಶುರುವಾಗುತ್ತಿದೆ. ಮಹತಿ ಕಂಬೈನ್ಸ್ ಬ್ಯಾನರ್ ಅಡಿ ಸುರೇಶ್ ನಿರ್ಮಿಸುತ್ತಿರುವ ಈ ಧಾರಾವಾಹಿಯನ್ನು ಅನಿಲ್ ಕೋರಮಂಗಲ ನಿರ್ದೇಶಿಸುತ್ತಿದ್ದಾರೆ.
ಚೇತನ ವಸಿಷ್ಟ ಕತೆ -ಚಿತ್ರಕತೆಗೆ ಸುಂದರ್ ಸಂಭಾಷಣೆ ಬರೆದಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ ಮತ್ತು ಅನುಭವಿ ಸಂಕಲನಕಾರರಾದ ರಾಜು ಆರ್ಯನ್ ಸಂಕಲನ ಕಾರ್ಯವನ್ನು ಮಾಡಿದ್ದಾರೆ. ಈ ಧಾರಾವಾಹಿಯ ಮತ್ತೊಂದು ಆಕರ್ಷಣೆ ವಾಸುಕಿ ವೈಭವ್ ಅವರ ಸಂಗೀತ. ರಾಮಾ ರಾಮಾ ರೇ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರಗಳಿಗೆ ಅದ್ಭುತ ಸಂಗೀತ ಒದಗಿಸಿ ಮನೆಮಾತಾಗಿರುವ ವಾಸುಕಿ ವೈಭವ್ ಅಮೃತವರ್ಷಿಣಿಗೆ ಸಂಗೀತ ಒದಗಿಸಿದ್ದಾರೆ.

ಅವಳಿ ಜವಳಿ ಸಹೋದರಿಯರ ಸುಮಧುರ ಬಾಂಧವ್ಯವನ್ನು ಸಾರುವ ಭಾವನಾತ್ಮಕ ಕತೆಯನ್ನು ಹೊಂದಿದೆ ಅಮೃತವರ್ಷಿಣಿ. ತಾರಾಗಣದಲ್ಲಿ ರಚಿತ ಗೌಡ, ಮೋಹನ್ ರಾಜ್, ಜ್ಯೋತಿ, ಅಮೃತ ರಾವ್, ನಂದಿನಿ ವಿಠ್ಠಲ್, ಬೇಬಿ ದ್ಯುತಿ, ಅಕ್ಷತ ದೇಶಪಾಂಡೆ ನಟಿಸುತ್ತಿದ್ದಾರೆ.
ಅಮೃತವರ್ಷಿಣಿ ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ, ಈಗ ಅದರ ಶೀರ್ಷಿಕೆಯನ್ನು ಮತ್ತೊಮ್ಮೆ ಹೊಸ ಕಥೆಗೆ ಬಳಸಲಾಗಿದೆ. 2018ನೇ ಸಾಲಿನಲ್ಲಿ ಸ್ಟಾರ್ ಸುವರ್ಣ ವಾಹಿನಿ ಅನೇಕ ಸದಭಿರುಚಿಯ ಧಾರವಾಹಿಗಳನ್ನ ನೀಡಿದೆ, ಆ ಹಾದಿಯಲ್ಲಿ ಮುಂದುವರಿಯುತ್ತಾ, ಮತ್ತೊಂದು ಸುಮಧುರ ಬಾಂಧವ್ಯದ, ಕೌಟುಂಬಿಕ ಕಥೆಯನ್ನು ವೀಕ್ಷಕರ ಮುಂದಿಡಲಿದೆ.
ಮಕ್ಕಳ ಮುದ್ದುತನ ಮುಗ್ಧತನ ವೀಕ್ಷಕರನ್ನು ಖಂಡಿತ ಮುದಗೊಳಿಸಲಿದೆ ಎಂಬ ನಂಬಿಕೆಯಿದೆ ಎಂದು ಸುವರ್ಣ ವಾಹಿನಿ ಬಿಸಿನೆಸ್ ಹೆಡ್ ಸಾಯಿ ಪ್ರಸಾದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಮೃತವರ್ಷಿಣಿ ಇದೇ ನವೆಂಬರ್ 12ರಿಂದ ಸೋಮ - ಶನಿ ರಾತ್ರಿ 9:00 ಗಂಟೆಗೆ ಪ್ರಸಾರವಾಗಲಿದೆ.


Click it and Unblock the Notifications











