ಬಿಗ್ಬಾಸ್ ಮನೆಗೆ ಹೋಗಲು ತಯಾರಿದ್ದೇನೆ ಎಂದ ಮಾಜಿ ಸಚಿವ
'ಬಿಗ್ಬಾಸ್ ಮನೆಗೆ ಒಬ್ಬ ರಾಜಕಾರಣಿ ಬರುತ್ತಾರೆ' ಎಂದು ಬಿಗ್ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದರು. ಆದರೆ ನಿನ್ನೆ ಮನೆಗೆ ಬಂದ ಸದಸ್ಯರಲ್ಲಿ ಪೂರ್ಣ ಪ್ರಮಾಣದ ರಾಜಕಾರಣಿ ಯಾರೂ ಇರಲಿಲ್ಲ.
ಆದರೆ ಈಗ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರು, 'ನಾನು ಬಿಗ್ಬಾಸ್ಗೆ ಹೋಗಲು ಆಸಕ್ತಿ ಹೊಂದಿದ್ದೇನೆ' ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.
ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ 'ಹಳ್ಳಿ ಹಕ್ಕಿ' ಎಚ್.ವಿಶ್ವನಾಥ್ ಅವರು 'ನಾನು ಬಿಗ್ಬಾಸ್ ಮನೆಗೆ ಹೋಗಲು ಆಸಕ್ತನಾಗಿದ್ದೇನೆ. ಒಂದು ವೇಳೆ ಅವರು ಕರೆದರೆ ನಾನು ಖಂಡಿತವಾಗಿಯೂ ಬಿಗ್ಬಾಸ್ ಮನೆಗೆ ಹೋಗುತ್ತೇನೆ' ಎಂದಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ ಅವರು, 'ಈ ಹಿಂದೆ ಆಯೋಜಕರು ನನ್ನನ್ನು ಬಿಗ್ಬಾಸ್ ಮನೆಗೆ ಆಹ್ವಾನಿಸಿದ್ದರು. ಆದರೆ ಆಗ ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಬಿಗ್ಬಾಸ್ ಗೆ ಹೋಗಿರಲಿಲ್ಲ. ಆದರೆ ಈಗ ನಾನು ತಯಾರಿದ್ದೇನೆ' ಎಂದಿದ್ದಾರೆ ಎಚ್.ವಿಶ್ವನಾಥ್.
'ಬಿಗ್ಬಾಸ್ ಮನೆಗೆ ಹೋಗಿ ಪ್ರಸ್ತುತ ರಾಜಕಾರಣದಲ್ಲಿ ಕಿಚ್ಚು ಹತ್ತುವಂತೆ ಮಾಡುತ್ತೇನೆ ಎಂದಿರುವ ಎಚ್.ವಿಶ್ವನಾಥ್. ಅಲ್ಲಿನ ಸ್ಪರ್ಧಿಗಳಿಗೆ ರಾಜಕಾರಣದ ಪಾಠ ಮಾಡುತ್ತೇನೆ. ಬಿಗ್ಬಾಸ್ ವೇದಿಕೆಯನ್ನು ಕ್ರಿಯಾಶೀಲವಾಗಿ ಬಳಿಸಿಕೊಳ್ಳುವ ಇರಾದೆಯೂ ನನಗೆ ಇದೆ. ನನ್ನ ಆಪ್ತರು ಸಹ ಬಿಗ್ಬಾಸ್ ಗೆ ಹೋಗುವಂತೆ ನನಗೆ ಸಲಹೆ ನೀಡಿದ್ದಾರೆ' ಎಂದಿದ್ದಾರೆ ವಿಶ್ವನಾಥ್.
'ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪ ಬರುತ್ತಿವೆ, ಹೀಗಾಗಿ ಹೆಚ್ಚು ದಿನ ಬಿಗ್ಬಾಸ್ ಮನೆಯಲ್ಲಿ ಇರಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಸಹ ಪಾಲ್ಗೊಳ್ಳಬೇಕಿದೆ' ಎಂದಿದ್ದಾರೆ ಎಚ್.ವಿಶ್ವನಾಥ್.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕುಸಿಯುವಲ್ಲಿ ಎಚ್.ವಿಶ್ವನಾಥ್ ಅವರೂ ಸಹ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ನಡೆದ ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್ ಅವರನ್ನು ಈಗ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ತಮ್ಮನ್ನು ಸಚಿವರನ್ನಾಗಿ ಮಾಡದ ಕಾರಣ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿದ್ದಾರೆ ವಿಶ್ವನಾಥ್.


Click it and Unblock the Notifications











