ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!
ಯಶ್ ಹಾಕಿದ ಸವಾಲಿಗೆ ಸೈ ಎಂದ 'ಪ್ರಜಾ ಟಿವಿ'. ಇಂದು ಸಂಜೆ 7ಕ್ಕೆ ರೈತರ ಸಮಸ್ಯೆ ಕುರಿತು ಚರ್ಚಾ ಕಾರ್ಯಕ್ರಮ. ನಟ ಯಶ್ ಗೆ ಬಹಿರಂಗ ಆಹ್ವಾನ. ಪ್ರಜಾ ಟಿವಿ ಸ್ಟುಡಿಯೋದಲ್ಲಿ ಸಂಜೆ 7ಕ್ಕೆ ಯಶ್ ಗೆ ಅಗ್ನಿಪರೀಕ್ಷೆ.!
''ಯಾವುದೇ ಚಾನೆಲ್ ಆಗಲಿ, ಪ್ರೈಮ್ ಟೈಮ್ ನಲ್ಲಿ ಕೇವಲ ರೈತರಿಗೆ ಸಂಬಂಧಪಟ್ಟ ಹಲವು ವಿಚಾರಗಳನ್ನು ಕುಳಿತು ಗಂಭೀರವಾಗಿ ಚರ್ಚೆ ಮಾಡಿ. ರೈತರ ಮೇಲೆ ಕಾಳಜಿಯನ್ನು ಮಾಧ್ಯಮದವರು ಈ ರೀತಿ ತೋರಿಸಿದರಾದಲ್ಲಿ ನಾನು ಉಚಿತವಾಗಿ ಅಂಥ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ನಾನು ನನ್ನೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಹೇಗಾದರೂ ಸಮಯ ಮಾಡಿಕೊಂಡು ಬಂದೇ ಬರುತ್ತೇನೆ'' ಅಂತ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ರಾಕಿಂಗ್ ಸ್ಟಾರ್ ಯಶ್ ಸವಾಲು ಹಾಕಿದ್ದರು.
ಆ ಚಾಲೆಂಜ್ ನ ಈಗಾಗಲೇ 'ಪಬ್ಲಿಕ್ ಟಿವಿ' ಸ್ವೀಕರಿಸಿದೆ. 'ಪಬ್ಲಿಕ್ ಟಿವಿ'ಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಟ ಯಶ್ ಎಸೆದಿರುವ ಗೂಗ್ಲಿ ಸವಾಲಿಗೆ ಸೈ ಎಂದಿರುವ 'ಪ್ರಜಾ ಟಿವಿ' ಇಂದು (ಅಕ್ಟೋಬರ್ 20) ಸಂಜೆ 7 ಗಂಟೆಗೆ (ಪ್ರೈಮ್ ಟೈಮ್) ರೈತರ ಸಮಸ್ಯೆ ಕುರಿತು ಚರ್ಚಾ ಕಾರ್ಯಕ್ರಮವನ್ನ ನಿಗದಿ ಪಡಿಸಿದೆ. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಟ ಯಶ್ ರವರಿಗೆ ಬಹಿರಂಗ ಪತ್ರದ ಮೂಲಕ 'ಪ್ರಜಾ ಟಿವಿ' ಆಹ್ವಾನ ನೀಡಿದೆ. [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

'ಮಾಸ್ಟರ್ ಪೀಸ್' ಯಶ್ ಗೆ 'ಪ್ರಜಾ ಟಿವಿ' ಬರೆದಿರುವ ಪತ್ರ ಹೀಗಿದೆ....
ಪ್ರೀತಿಯ ಯಶ್,
ಹೌದು, ಕಾಯುವಿಕೆಗೂ ಅರ್ಥವಿದೆ. ಆ ಸಮಯ ಈಗ ಬಂದಿದೆ. ನೀವು ಕಾಯುವುದು ಬೇಡ. ನಿಮ್ಮ ಗೂಗ್ಲಿ ಸವಾಲನ್ನು ನಾವು ಸ್ವೀಕರಿಸುತ್ತಿದ್ದೇವೆ. ನಿಮ್ಮ ಬದ್ಧತೆಯಷ್ಟೇ ನಾವು ಬದ್ಧತೆಯನ್ನು ಕಾಯ್ದುಕೊಂಡಿದ್ದೇವೆ.
ಸಾಮಾಜಿಕ ಜವಾಬ್ದಾರಿ, ಕಳಕಳಿ ಬಗ್ಗೆ ನಮಗೂ ಅರಿವಿದೆ. ನಮಗೆ ಯಾವುದೇ ರೀತಿಯ ಮುಜುಗರವಿಲ್ಲ. ಯಾವುದೇ ಮುಲಾಜೂ ಇಲ್ಲ. ನೆಲ-ಜಲ, ಭಾಷೆ ವಿಚಾರದಲ್ಲಿ ನಾವು ಯಾವತ್ತೂ ಕಿರಾತಕ ಬುದ್ಧಿ ತೋರಿಸಿಲ್ಲ. ಡ್ರಾಮಾನೂ ಮಾಡಿಲ್ಲ. ರಾಜಾಹುಲಿಯಂತೆ ನಿಖರ ಸುದ್ದಿಯನ್ನು ನೀಡಿದ್ದೇವೆ. [ಯಶ್ ವರ್ಸಸ್ ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]
'ಪ್ರಜಾ ಟಿವಿ' ಚಾನೆಲ್ ಶುರುವಾದಾಗ ಮೊಗ್ಗಿನ ಮನಸ್ಸಾಗಿರಲಿಲ್ಲ. ನೀವೇ ನೋಡಿದ್ದೀರಾ ಅಲ್ವಾ...
ಮೊದಲ ಸಲವೇ ರೈತರ ಪರವಾಗಿ ಗಜಕೇಸರಿಯಂತೆ ನಿಂತು ಹೋರಾಟಕ್ಕೆ ನಿಂತಿದ್ದೇವೆ. ನಮ್ಮ ಹೋರಾಟ, ಬದ್ಧತೆ ನಿರಂತರವಾಗಿದೆ. ಅದು ಯಾವತ್ತಿಗೂ ಮಾಸ್ಟರ್ ಪೀಸ್. ಅದರಲ್ಲಿ ಎರಡು ಮಾತಿಲ್ಲ. ಆ ವಿಚಾರದಲ್ಲಿ ನಾವು ಲಕ್ಕಿನೇ.
ಹೋರಾಟ, ಚಳವಳಿಗಳಲ್ಲಿ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಬೆಂಕಿ ಹಚ್ಚುವುದು ನಮ್ಮ ಕೆಲಸವಲ್ಲ. ನಿಮ್ಮಂತೆ ರೈತರ ಮನೆ-ಮನದಲ್ಲಿ ಬೆಳಕು ಮೂಡಿಸುವುದೇ ನಮ್ಮ ಉದ್ದೇಶ.
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ,
ನಾವು ಟಿ.ಆರ್.ಪಿಗಾಗಿ, ಕಮರ್ಷಿಯಲ್ ಗಾಗಿ ರೊಮ್ಯಾನ್ಸ್ ಮಾಡುತ್ತಿಲ್ಲ. ಕರುನಾಡಿನ ಜಾನೂ, ನಿಮ್ಮ ಸವಾಲಿನಂತೆ ಪ್ರೈಮ್ ಟೈಮ್ ನಲ್ಲೇ ಮುಕ್ತ ಚರ್ಚೆಗೆ ನಿಮಗೆ ಆಹ್ವಾನ ನೀಡುತ್ತಿದ್ದೇವೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ, ರೈತರ ನೆಲ, ಜಲ, ಕನ್ನಡ ಭಾಷೆ, ಸಮಸ್ಯೆಗಳಿಗೆ ಪರಿಹಾರ ಹುಡುಕೋಣ.
ಅದು ಎಷ್ಟು ದಿನವಾದ್ರೂ ಆಗಲಿ, ಸಮಸ್ಯೆಗೆ ಪರಿಹಾರ ಸಿಗುವ ತನಕ ಹೋರಾಟ ನಡೆಸೋಣ. ಬರುತ್ತಿರಲ್ವಾ...ನೀವು ಹೇಳಿದಂತೆ ಈಗ ನಾವು ನಿಮಗಾಗಿ ಕಾಯುತ್ತಿದ್ದೇವೆ.
ತಪ್ಪದೆ ಸಂಜೆ 7 ಗಂಟೆಗೆ ಬನ್ನಿ....
ನಮ್ಮ ಪ್ರೈಮ್ ಟೈಮ್ ಚರ್ಚೆಯಲ್ಲಿ ಭಾಗವಹಿಸಿ...
ಇದು ನಿಮ್ಮ ಸವಾಲಿಗೆ ಪ್ರತ್ಯುತ್ತರವಲ್ಲ. ಬದಲಾಗಿ ನಮ್ಮ ಪ್ರೀತಿಯ ಆಹ್ವಾನ.
ಇಂತಿ ಸಂಪಾದಕೀಯ ಬಳಗ,
ಪ್ರಜಾ ಟಿವಿ.
ಸವಾಲು ಹಾಕುವುದು ಸುಲಭ. ಅದರಂತೆ, ನುಡಿದಂತೆ ನಡೆಯುವ ಜವಾಬ್ದಾರಿ ಈಗ ಯಶ್ ಹೆಗಲ ಮೇಲಿದೆ. ಇಂದು ಸಂಜೆ 7 ಗಂಟೆಗೆ 'ಪ್ರಜಾ ಟಿವಿ' ಸ್ಟುಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಅಗ್ನಿಪರೀಕ್ಷೆ. 'ಮಾತಿಗೆ ಬದ್ಧ' ಅಂತ ಮಾತು ಮಾತಿಗೂ ಹೇಳುವ ಯಶ್, ಸಂಜೆ 7 ಕ್ಕೆ 'ಪ್ರಜಾ ಟಿವಿ' ಸ್ಟುಡಿಯೋದಲ್ಲಿ ಪ್ರತ್ಯಕ್ಷವಾಗುತ್ತಾರಾ.? ಉತ್ತರಕ್ಕಾಗಿ 'ಪ್ರಜಾ ಟಿವಿ' ತಪ್ಪದೇ ನೋಡಿ....


Click it and Unblock the Notifications











