ಪರಭಾಷೆಗೆ ಹಾರಿದ ಕಿರುತೆರೆ ನಟ ರಾಘವೇಂದ್ರ: ಹೊಸ ಸೀರಿಯಲ್ ಯಾವುದು..?
ಕನ್ನಡದ ಹಲವು ನಟ-ನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಿಯಾದ ಸಂಗತಿ.
ಇನ್ನು ಕೆಲ ಕಲಾವಿದರು ಡೈರೆಕ್ಟ್ ಆಗಿ ಪರಭಾಷೆಗಳಿಗೆ ಜಂಪ್ ಆಗಿ ಬಿಡುತ್ತಾರೆ. ಒಮ್ಮೆ ಪರಭಾಷೆಯತ್ತ ಮುಖ ಮಾಡುವ ನಟ-ನಟಿಯರು ಮತ್ತೆ ಕನ್ನಡ ಭಾಷೆಯತ್ತ ಬರುವುದು ತೀರಾ ಕಡಿಮೆ. ಯಾಕೆಂದರೆ ಪರಭಾಷೆಗಳಲ್ಲಿ ಒಳ್ಳೆಯ ಸಂಭಾವನೆ ಸಿಗುತ್ತದೆ ಎಂದು ಹೇಳುತ್ತಾರೆ.
ಕೆಲವರು ನಮಗೆ ಕನ್ನಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದರೆ, ಮತ್ತಷ್ಟು ಜನ ಒಳ್ಳೆಯ ಕಥೆ ಸಿಕ್ಕರೆ ಬರುತ್ತೇವೆ ಎಂದೂ ಕೂಡ ಹೇಳುತ್ತಾರೆ. ನಾವೀಗ ಹೇಳುವುದಕ್ಕೆ ಹೊರಟಿರುವುದು ಕನ್ನಡದ ನಟ ಈಗ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟಿರುವ ವಿಚಾರವನ್ನು.

ಕನ್ನಡದಿಂದ ಪರಭಾಷೆಗೆ ಎಂಟ್ರಿ
ಕಿರುತೆರೆ ನಟ ರಾಘವೇಂದ್ರ ಅವರು ಈಗ ಪರಭಾಷೆಯಲ್ಲೂ ಮಿಂಚಲು ಪ್ರಾರಂಭಿಸಿದ್ದಾರೆ. ಹಲವು ವರ್ಷಗಳಿಂದ ಕನ್ನಡದ ಕಿರುತೆರೆಯಲ್ಲಿ ನಟಿಸುತ್ತಿರುವ ರಾಘವೇಂದ್ರ ಅವರು ಈಗ ತೆಲುಗಿಗೆ ಪಾದಾರ್ಪಣೆ ಮಾಡಿದ್ದಾರೆ. ರಾಘವೇಂದ್ರ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿ ರಾಘವೇಂದ್ರ ಅವರಿಗೆ ಹೆಸರು ತಂದುಕೊಟ್ಟ ಸೀರಿಯಲ್. ಈ ಧಾರಾವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ರಾಘವೇಂದ್ರ ನಟಿಸಿದ್ದರು. ಇದಕ್ಕೂ ಮುನ್ನ ರಾಘು ಅವರು 'ಜೀವನ ಚೈತ್ರ', 'ದೇವಯಾನಿ', 'ಮಿಸ್ಟರ್ ಆಂಡ್ ಮಿಸಸ್' ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಪತ್ನಿಯೂ ಕಿರುತೆರೆ ನಟಿ
'ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ' ಎಂಬ ಧಾರಾವಾಹಿಯಲ್ಲಿ ರಾಘವೇಂದ್ರ ಅವರು ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಕೂಡ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಂದ ಕಿರುತೆರೆ ಜರ್ನಿ ಜೊತೆಗೆ ವಯಕ್ತಿಕ ಜರ್ನಿಯನ್ನು ಶುರು ಮಾಡಿದ ಜೋಡಿ ಇವರು. ಕಿರುತೆರೆಯಲ್ಲೇ ಇಬ್ಬರೂ ಪರಿಚಿತರಾಗಿ, ಪ್ರೀತಿಸಿ ನಿಜ ಜೀವನದಲ್ಲೂ ದಂಪತಿಗಳಾದರು. ಅಮೃತಾ ರಾಮಮೂರ್ತಿ ಅವರಿಗೆ 'ಕುಲವಧು' ಸೀರಿಯಲ್ ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತು. ಇನ್ನು ಅಮೃತಾ 'ಕಸ್ತೂರಿ ನಿವಾಸ' ಧಾರವಾಹಿಯಲ್ಲೂ ನಟಿಸಿದ್ದರು. ಬಳಿಕ 'ಮನಸಾರೆ' ಧಾರಾವಾಹಿಯಿಂದ ಹೊರಬಂದ ಅಮೃತಾ ಅವರು ದೊಡ್ಡ ಬ್ರೇಕ್ ತೆಗೆದುಕೊಂಡು ತಾಯಿಯಾಗಿ ಬಡ್ತಿ ಪಡೆದರು. ಸದ್ಯ 'ಕೆಂಡಸಂಪಿಗೆ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ತೆಲುಗಿಗೆ ರಾಘವೇಂದ್ರ ಎಂಟ್ರಿ
ಇನ್ನು 'ನಮ್ಮನೆ ಯುವರಾಣಿ' ಧಾರಾವಾಹಿ ಮುಗಿದ ಮೇಲೆ ರಾಘವೇಂದ್ರ ಅವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ತೆಲುಗಿಗೆ ಎಂಟ್ರಿಕೊಟ್ಟಿದ್ದರು. ಇಷ್ಟು ದಿನ ಈ ವಿಚಾರವನ್ನು ಗುಟ್ಟಾಗಿಟ್ಟಿದ್ದ ರಾಘವೇಂದ್ರ ಅವರು ಇದೀಗ ಬಹಿರಂಗ ಪಡಿಸಿದ್ದಾರೆ. ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ತಮ್ಮ ಮೇಲೆ ಎಲ್ಲರ ಆಶೀರ್ವಾದ ಪ್ರೀತಿ ಇರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಹೊಸ ಧಾರಾವಾಹಿಯ ಪ್ರೋಮೋವನ್ನು ಕೂಡ ರಾಘವೇಂದ್ರ ಅವರು ಹಂಚಿಕೊಂಡಿದ್ದಾರೆ.

ಸಂತಸ ಹಂಚಿಕೊಂಡ ನಟ
ತೆಲುಗು ಧಾರಾವಾಹಿಯಲ್ಲಿ ರಾಘವೇಂದ್ರ ಅವರು ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. 'ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ' ಎಂಬ ಧಾರಾವಾಹಿಯ ಪ್ರೋಮೋವನ್ನು ರಾಘವೇಂದ್ರ ಹಂಚಿಕೊಂಡು, ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಇದೇ ತಿಂಗಳು ಜನವರಿ 9 ರಿಂದ ಅಂದರೆ ಮುಂದಿನ ಭಾನುವಾರದಿಂದ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಇದೇ ಮೊದಲ ಬಾರಿಗೆ ಪರಭಾಷೆಗೆ ಪಾದಾರ್ಪಣೆ ಮಾಡುತ್ತಿದ್ದು, ರಾಘವೇಂದ್ರ ಅವರಿಗೆ ಯಶಸ್ಸು ಸಿಗಲಿ ಎಂದು ಆಶಿಸೋಣ.


Click it and Unblock the Notifications











