ಸ್ಮಶಾನದಲ್ಲಿದ್ದ ಎಡೆ ತಿಂದವ ಕನ್ನಡದ ಕೋಟ್ಯಧಿಪತಿ?
ಕನ್ನಡದ ಕೋಟ್ಯಧಿಪತಿಯಲ್ಲಿ ಯಾರಾದರೂ ಬಹುಮಾನದ ಸಂಪೂರ್ಣ ಮೊತ್ತ ಒಂದು ಕೋಟಿ ರೂಪಾಯಿ ಗೆದ್ದರೆ ಪ್ರಾಯಶಃ ಆವತ್ತು ನನ್ನ ಎಕ್ಸೈಟ್ಮೆಂಟ್ ತಡೆಹಿಡಿಯುವುದು ಕಷ್ಟವಾಗಲಿದೆ ಎಂದು ಕಾರ್ಯಕ್ರಮದ ನಿರೂಪಕ ಪುನೀತ್ ರಾಜ್ ಕುಮಾರ್ ಹೇಳಿದ್ದರು.

ಇದುವರೆಗೂ ಯಾರೊಬ್ಬರೂ ಅಲ್ಲಿಯ ತನಕ ಬಂದಿರಲಿಲ್ಲ. ಐವತ್ತು ಲಕ್ಷದ ಪ್ರಶ್ನೆ ತನಕ ಸಿಹಿಕಹಿ ಚಂದ್ರು ಬಂದರಾದರೂ ಕೊನೆಗೆ ಅವರಿಂದಲೂ ಐವತ್ತು ಲಕ್ಷವನ್ನು ಗೆಲ್ಲಲಾಗಲಿಲ್ಲ. ಆದರೆ ಈಗ ಆ ಹಂತವನ್ನು ಮೀರಿ ಹೋಗಿ ಒಂದು ಕೋಟಿ ರೂಪಾಯಿ ಪ್ರಶ್ನೆ ತನಕ ಹೋಗಿ ತನ್ನ ಅದೃಷ್ಟ ಪರೀಕ್ಷೆ ಮಾಡಿನೋಡುವ ಸೌಭಾಗ್ಯ ರಾಯಚೂರಿನ ವ್ಯಕ್ತಿಯೊಬ್ಬರಿಗೆ ಲಭಿಸಿದೆ.
ಸ್ಮಶಾನದಲ್ಲಿ ಹೆಣಗಳಿಗೆ ಎಡೆ ಇಟ್ಟದ್ದನ್ನು ತಿಂದು ಬದುಕಿದ ರಾಯಚೂರು ಜಿಲ್ಲೆಯ ಪಂಪಣ್ಣ ಮಾಸ್ತರ್, ಕೋಟ್ಯಾಧಿಪತಿಯ ಕೊನೆಯ ಪ್ರಶ್ನೆಗೆ ಉತ್ತರಿಸಲು ಅಣಿಯಾಗಿದ್ದಾರೆ. ಇದು ನಿಜ. ಇದೇ ಜೂನ್ 26, 27 ಮತ್ತು 28ರ ಸಂಚಿಕೆಯನ್ನು ವೀಕ್ಷಿಸಿದವರಿಗೆ ಈ ಕೂತಹಲಕ್ಕೆ ಉತ್ತರ ದೊರೆಯಲಿದೆ.
ರಾಯಚೂರು ಮೂಲದ ಈ ಸ್ಪರ್ಧಾಳು ಪಂಪಣ್ಣ ಮಾಸ್ತರ್, ಕೋಟಿಗೆ ಕೇಳಲಾಗುವ ಪ್ರಶ್ನೆಯ ತನಕವೂ ಬಂದು ನಿಂತಿರುವುದನ್ನು ಸುವರ್ಣ ವಾಹಿನಿ ಮೂಲಗಳು ಖಚಿತಪಡಿಸಿವೆ. ಕೋಟಿ ರೂಪಾಯಿಗೆ ಕೇಳಲಾಗುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ ಪಂಪಣ್ಣ ಕನ್ನಡದ ಕೋಟ್ಯಧಿಪತಿಯ ಎಲ್ಲಾ ಹಂತಗಳನ್ನು ವಿಜಯಶಾಲಿಯಾಗಿ ಮುಗಿಸಿದ ಮೊದಲ ಸ್ಪರ್ಧಾಳು ಆಗಲಿದ್ದಾರೆ ಅನ್ನೋದನ್ನು ಗೌಪ್ಯವಾಗಿಡಲಾಗಿದೆ.
ಗುರುವಾರದ (ಜೂ 28) ಸಂಚಿಕೆ ಈ ಎಲ್ಲಾ ಕೌತುಕಕ್ಕೆ ಉತ್ತರವನ್ನು ನೀಡಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











