ರೈತ ಕುಟುಂಬಕ್ಕಾಗಿ ಕಬ್ಬಿನ ಹಾಲು ಮಾರಿದ ಶ್ರೀಮುರಳಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಟೋ ಓಡಿಸಿ, ಆಟೋ ಡ್ರೈವರ್ ಒಬ್ಬರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಯವರಿಗೆ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿಯ ಸರದಿ.
ಹೌದು, ಕೆಲವೇ ಎಪಿಸೋಡ್ ಮೂಲಕ ಕರ್ನಾಟಕದ ಮನೆ ಮಾತನಾಗಿರುವ "ಸದಾ ನಿಮ್ಮೋಂದಿಗೆ" ಕಾರ್ಯಕ್ರಮ ಸಂಚಲನ ಸೃಷ್ಟಿಸಿದೆ. ಈ ಭಾನುವಾರ (29.07.18) ರಾತ್ರಿ 9ಕ್ಕೆ ಸದಾ ನಿಮ್ಮೊಂದಿಗೆ ಕನ್ನಡದಲ್ಲಿ ನಟ ಶ್ರೀಮುರಳಿ ಭಾಗಿಯಾಗಲಿದ್ದಾರೆ.
ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕಾಗಿ ಕೆಲಸ ಮಾಡಲಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಅವರ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಈ ಶೋಗೆ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಶ್ರೀಮುರಳಿ ಈ ವಾರ ಯಾರಿಗಾಗಿ ಕೆಲಸ ಮಾಡಿದ್ರು.? ಎಷ್ಟು ಹಣ ಸಹಾಯ ಮಾಡಿದ್ರು ಎಂದು ತಿಳಿಯಲು ಮುಂದೆ ಓದಿ.....

ರೈತನಿಗಾಗಿ ಬಂದ ಶ್ರೀಮುರಳಿ
ಈ ವಾರದ ಸಂಚಿಕೆಯಲ್ಲಿ ದೇಶಕ್ಕೆ ಅನ್ನವನ್ನು ಕೊಡುವ ನಮ್ಮ ರೈತನ ಕುಟುಂಬವೊಂದಕ್ಕೆ ಆಸರೆಯಾಗಲು ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾಮಾನ್ಯ ಜನರಂತೆ ಕೆಲಸ ಮಾಡಲು ಮುಂದಾಗಿದ್ದಾರೆ. ರಸ್ತೆ ಪಕ್ಕದಲ್ಲಿ ಕಬ್ಬಿನ ಹಾಲು ಮಾರಾಟ ಮಾಡಿ ರೈತ ಕುಟುಂಬಕ್ಕೆ ನೆರವಾಗಿದ್ದಾರೆ.

ರೈತ ಕುಟುಂಬಕ್ಕಾಗಿ ಕಬ್ಬಿನ ಹಾಲು ಮಾರಿದ ನಟ
ಬೆಳೆಗಾಗಿ ಮಾಡಿದಂತಹ ಸಾಲಬಾದೆಯಿಂದ ಮಾನಸಿಕ, ದೈಹಿಕವಾಗಿ ಕುಗ್ಗಿ, ಮನೆಗೆ ಆಧಾರ ಸ್ತಂಭವಾಗಿದ್ದ ಯಜಮಾನ ಆತ್ಮಹತ್ಯೆ ಮಾಡಿಕೊಂಡಾಗ ಅವರನ್ನೇ ನಂಬಿಕೊಂಡಿದ್ದ ತಾಯಿ, ಮಡದಿ ಮೂರು ಮುದ್ದು ಪುಟ್ಟ ಹೆಣ್ಣು ಮಕ್ಕಳು ಕಂಗಾಲಾಗಿದ್ದಾರೆ. ಮನೆಯ ನಿರ್ವಹಣೆಯ ಜೊತೆ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೆ ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ಈ ರೈತ ಕುಟುಂಬಕ್ಕೆ ಸಹಾಯ ಮಾಡಲು ತಾನು ರೈತನಂತೆಯೇ ದುಡಿಯಲು ರೈತರೇ ಬೆಳೆದ ಕಬ್ಬಿನಿಂದ ಹಾಲನ್ನು ಮಾರಲು ನಿರ್ಧರಿಸಿ ಶ್ರೀ ಮುರಳಿ ಅವರು ಕಬ್ಬಿನಹಾಲನ್ನು ಮಾರಲು ಮುಂದಾಗಿದ್ದಾರೆ.

ಖುಷಿಯಾದ 'ಉಗ್ರಂ' ವೀರ
ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ಮಾಡಿದ ರೋರಿಂಗ್ ಸ್ಟಾರ್ ತುಂಬ ಖುಷಿಯಾಗಿದ್ದಾರೆ. ಇಂತಹ ಒಳ್ಳೆಯ ಕೆಲಸಕ್ಕಾಗಿ ಸದಾ ನಿಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಕೂಡ ಹರ್ಷಗೊಂಡರು. ಹಾಗೆ ತಮ್ಮ ಜೀವನದ ಅದೆಷ್ಟೋ ವಿಷಯಗಳನ್ನ ಈ ಕಾರ್ಯಕ್ರಮದಲ್ಲಿ ಹಂಚಿ ಕೊಂಡಿದ್ದಾರೆ.

ಕಬ್ಬಿನ ಹಾಲು ವ್ಯಾಪರದಿಂದ ಬಂದ ಹಣವೆಷ್ಟು.?
ಒಂದು ದಿನ ಕಬ್ಬಿನ ಹಾಲನ್ನು ಮಾರಿದಂತಹ ರೋರಿಂಗ್ ಸ್ಟಾರ್ ಎಷ್ಟು ಸಂಪಾದನೆ ಮಾಡಿದ್ದಾರೆ? ಕಣ್ಣೀರಿನಿಂದ ಕಂಗಾಲಾಗಿದ್ದ ರೈತ ಕುಟುಂಬಕ್ಕೆ ಎಷ್ಟು ಹಣವನ್ನು ಸ್ಟಾರ್ ಸಂಪಾದನೆ ಮಾಡಿದ್ದಾರೆ ಎಂಬ ಎಲ್ಲ ವಿಷಯವನ್ನು ಈ ವಾರದ ಸಂಚಿಕೆಯಲ್ಲಿ ವಿಕ್ಷೀಸಬಹುದು. "ಸದಾ ನಿಮ್ಮೊಂದಿಗೆ" ಇದೇ ಭಾನುವಾರ ಉದಯ ಟಿವಿಯಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗುತ್ತದೆ.


Click it and Unblock the Notifications











