ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಶೋ 'ಸದಾ ನಿಮ್ಮೊಂದಿಗೆ'
Recommended Video

'ಚಾಲೆಂಜ್', 'ಚೋಟಾ ಚಾಂಪಿಯನ್', 'ಕಾಸಿಗೆ ಟಾಸ್', 'ಮಜಾ ಟಾಕೀಸ್'... ಅಂತಹ ಜನಪ್ರಿಯ ಕಾರ್ಯಕ್ರಮಗಳನ್ನ 'ಲೋಕೇಶ್ ಪ್ರೊಡಕ್ಷನ್ಸ್' ಮೂಲಕ ಕಿರುತೆರೆಗೆ ನೀಡಿದವರು ಸೃಜನ್ ಲೋಕೇಶ್.
ಈಗ ಇದೇ 'ಲೋಕೇಶ್ ಪ್ರೊಡಕ್ಷನ್ಸ್' ಮೂಲಕ ಉದಯ ಟಿವಿಗಾಗಿ 'ಸದಾ ನಿಮ್ಮೊಂದಿಗೆ' ಎಂಬ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ನೀಡುತ್ತಿದ್ದಾರೆ.
ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗಲು ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ 'ಸದಾ ನಿಮ್ಮೊಂದಿಗೆ' ಇದೇ ಭಾನುವಾರದಿಂದ ರಾತ್ರಿ 9ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ. ಮುಂದೆ ಓದಿರಿ..

ಸಾರ್ವಜನಿಕರಿಗೆ ಸಹಾಯ
ಪ್ರತಿ ಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೇರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ.

ಕೈ ಜೋಡಿಸಿದ ಸ್ಯಾಂಡಲ್ ವುಡ್ ತಾರೆಯರು
ಹೂವು ಮಾರುವುದು, ಎಳನೀರು ಮಾರುವುದು, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವುದು, ಆಟೋ ಓಡಿಸುವುದು, ಗೋಲಿ ಸೋಡಾ ಮಾರುವುದು, ಸೊಪ್ಪು ಮಾರುವುದು, ಪಾನಿ ಪುರಿ, ಕಬ್ಬಿನ ಹಾಲು ಮಾರುವುದು... ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್ ವುಡ್ ತಾರೆಯರು.

ಲಕ್ಷ್ಮೀ ನಿರೂಪಣೆ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮುಂಚೂಣಿಯನ್ನು ಪಂಚಭಾಷಾ ತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ 'ಜೂಲಿಲಕ್ಮೀ'ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆ ತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.

ನಟಿ ಲಕ್ಷ್ಮೀ ಏನಂತಾರೆ.?
''ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆ. ಆದರೆ ಯಾವುದೋ ಸಂದರ್ಭದಲ್ಲಿ ಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನು ಕೊಡುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡ ಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನಾರ್ಹ'' ಎನ್ನುತ್ತಾರೆ ಹಿರಿಯ ನಟಿ ಲಕ್ಷ್ಮೀ.

ಮೊದಲ ಸಂಚಿಕೆಯಲ್ಲಿ ಧ್ರುವ ಸರ್ಜಾ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಮಿಂಚಿರುವ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗ ಧ್ರುವ ಸರ್ಜಾ.

ಆಟೋ ಡ್ರೈವರ್ ಗೆ ಸಹಾಯ ಮಾಡಿದ ಧ್ರುವ ಸರ್ಜಾ
ನರೇಂದ್ರ ಕುಮಾರ್ ಎಂಬ ಒಬ್ಬ ಆಟೋ ಡ್ರೈವರ್ ಗೆ ಧ್ರುವ ಸರ್ಜಾ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ನರೇಂದ್ರ ಕುಮಾರ್ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಹೇಗಿತ್ತು ಮೊದಲ ಸಂಚಿಕೆ.?
ಆಟೋ ಓಡಿಸುವ ಮೊದಲು 'ಆಟೋರಾಜ' ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದ ಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್ ಗರ್ಭಿಣಿ ಅವರನ್ನು ಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರ ದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದ ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜಿಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್ ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆ ಆಟೋ ಹತ್ತಿದರು. ಹೀಗೆ ದಿನ ಪೂರ್ತಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲ ಕಡೆ ಆಟೋ ಓಡಿಸಿದರು. ಬಂದ ಹಣದಿಂದ ನರೇಂದ್ರ ಕುಮಾರ್ ಅವರಿಗೆ ಸ್ವಂತ ಆಟೋ ಮಾಡಿಕೊಳ್ಳುವ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾದರು.

ಸೆಲೆಬ್ರಿಟಿಗಳ ದಂಡು
ಈ ಶೋನಲ್ಲಿ ಪ್ರತಿ ವಾರವೂ ಒಬ್ಬೊಬ್ಬ ಸೆಲೆಬ್ರಿಟಿಗಳು ಬರಲಿದ್ದಾರೆ. ಅವರುಗಳಲ್ಲಿ ಶ್ರೀಮುರಳಿ, ಲವ್ಲಿ ಸ್ಟಾರ್ ಪ್ರೇಮ್, ಪ್ರಿಯಾಂಕ ಉಪೇಂದ್ರ, ಪಾರೂಲ್ ಯಾದವ್, ವಿಜಯ ರಾಘವೇಂದ್ರ, ಸೃಜನ್ ಲೋಕೇಶ್, ಮಾನ್ವಿತಾ ಹರೀಶ್, ಪ್ರಿಯಾಮಣಿ, ರಶ್ಮಿಕಾ ಮಂದಣ್ಣ, ಧನಂಜಯ್, ಚಿರಂಜೀವಿ ಸರ್ಜಾ... ಹೀಗೆ ಇನ್ನೂ ಅನೇಕರು ಭಾಗವಹಿಸಿದ್ದಾರೆ.

ಪ್ರಸಾರ ಯಾವಾಗ.?
ಆರ್ಥಿಕ ದುರ್ಬಲರಿಗೆ ಬೆಂಬಲ ನೀಡಿ, ಬಲಹೀನರಿಗೆ ಧೈರ್ಯ ತುಂಬುವ, ಶಕ್ತಿ ನೀಡುವ, ಕಷ್ಟದ ಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲೆಬ್ರಿಟಿಗಳಿಂದ ಸಾಂತ್ವನ ಹೇಳುವ ಉದಯ ಟಿವಿಯ ರಿಯಾಲಿಟಿ ಅಲ್ಲ ರಿಯಲ್ ಶೋ 'ಸದಾ ನಿಮ್ಮೊಂದಿಗೆ' ಪ್ರತಿ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.


Click it and Unblock the Notifications











