'ಸಿ.ಐ.ಡಿ ಕರ್ನಾಟಕ' ಜತೆ ಕೈಜೋಡಿಸಿದ ನಟಿ ಸಂಜನಾ
ಬರೀ ಫ್ಯಾಮಿಲಿ ಡ್ರಾಮಾಗಳನ್ನೇ ನೋಡಿ ಬೇಸತ್ತಿರುವ ಕಿರುತೆರೆ ವೀಕ್ಷಕರಿಗೆ ಕ್ರೈಂ ಎಪಿಸೋಡ್ ಗಳು ಜನಜಾಗೃತಿ ಮಾಡಿಸುವುದರ ಜೊತೆಗೆ ಬಂದದ್ದು ಕಾತುರತೆ, ಕುತೂಹಲಗಳನ್ನು ಹುಟ್ಟು ಹಾಕುವಲ್ಲಿ ಸಫಲವಾಗಿವೆ. ನಡೆದಿರತಕ್ಕಂಥ ಘಟನೆಗಳು, ಅವುಗಳನ್ನು ಭೇದಿಸುವಲ್ಲಿ ಪೊಲೀಸರು ಪಟ್ಟಶ್ರಮ ಇವುಗಳನ್ನೆಲ್ಲ ಕ್ರೈಂ ಎಪಿಸೋಡ್ ಗಳಲ್ಲಿ ಈಗಾಗಲೇ ತೋರಿಸಲಾಗಿದೆ. ಆದರೆ ನಡೆದಿರತಕ್ಕಂಥ ಘಟನೆಗೆ ಸಿನಿಮೀಯ ಟಚ್ ಕೊಟ್ಟು ನಿರ್ಮಿಸಿದಂಥ "ಸಿ.ಐ.ಟಿ.ಕರ್ನಾಟಕ" ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲೊಂದಾಗಿದೆ.
ಈಗಾಗಲೇ 25 ಕಂತುಗಳನ್ನು ಪೂರೈಸಿರುವ ಈ ಧಾರಾವಾಹಿಯನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ಕಲಾಗಂಗೋತ್ರಿ ಮಂಜು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಐದಾರು ಕಂತುಗಳ ನಂತರ ಕಾರಣಾಂತರಗಳಿಂದ ದೂರ ಸರಿದರು. ಈಗಾಗಲೇ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅಭಿನಯಿಸಿದ್ದು ಇತ್ತೀಚೆಗೆ ಬೆಡಗಿ, ಸ್ಯಾಂಡಲ್ವುಡ್ ತಾರೆ ಸಂಜನಾ ಈ ಲೀಸ್ಟ್ ಗೆ ಹೊಸ ಸೇವೆಯಾಗಿದ್ದಾರೆ. [ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕಿರುತೆರೆಗೆ ಎಂಟ್ರಿ]
ಸಿ.ಐ.ಟಿ. ಇನ್ಸ್ ಪೆಕ್ಟರ್ ಚಾರ್ಮಿಯಾಗಿ ವೀಣಾ ಪೊನ್ನಪ್ಪ, ತೇಜ ಪೊನ್ನಪ್ಪ, ಭಜರಂಗಿಯಲ್ಲಿ ಗಮನ ಸೆಳೆದ ಪಾತ್ರ ಮಾಡಿದ ಲೋಕೇಶ್, ಹೇಮಂತ್ ಹಾಗೂ ಅಂಜಲಿ ಸಿ.ಐ.ಡಿ. ಕರ್ನಾಟಕ ತಂಡದ ಅಧಿಕಾರಿಗಳಾಗಿ ಅಭಿನಯಿಸಿದ್ದಾರೆ. ನೈಜ ಹಾಗೂ ಕಾಲ್ಪನಿಕ ಘಟನೆಗಳನ್ನು ಆಧರಿಸಿ ಸಿನಿಮ್ಯಾಟಿಕ್ ಆಗಿ ಕುತೂಹಲಭರಿತವಾಗಿ ಸ್ಕ್ರಿಪ್ಟ್ ರಚಿಸುವಲ್ಲಿ ಚಂದ್ರ ಬಾರ್ಕೂರ್ ಗೆದ್ದಿದ್ದಾರೆಂದೇ ಹೇಳಬಹುದು.ನಿರ್ದೇಶಕ ನಂದಕಿಶೋರ್ ಕೂಡ ಈಗಾಗಲೇ ಹಲವಾರು ಬಗೆಯ ಧಾರವಾಹಿಗಳನ್ನು ಡೈರೆಕ್ಟ್ ಮಾಡಿ ಸಕ್ಸಸ್ ಆದವರು. ಕಳೆದ ವಾರ ನಗರ ಹೊರವಲಯದಲ್ಲಿರುವ ರಮ್ಯ ರೆಸಾರ್ಟ್ಸ್ ಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು.
ಇದೇ ಸಂದರ್ಭದಲ್ಲಿ ಈ ಧಾರವಾಹಿ ತಂಡ ಪತ್ರಕರ್ತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿತು. ಆರಂಭದಲ್ಲಿ ಜೀ ವಾಹಿನಿ 30 ಕಂತುಗಳಿಗಷ್ಟೇ ಎಂದು ಸೀಮಿತಗೊಳಿಸಿತ್ತು. ಆದರೆ ಇದು ಪಡೆದುಕೊಂಡಿರುವ ಜನಪ್ರಿಯತೆಯನ್ನು ಲೆಕ್ಕ ಹಾಕಿ ಮತ್ತಷ್ಟು ಕಂತುಗಳಿಗೆ ಅವಕಾಶ ನೀಡಬಹುದೆಂಬ ನಿರೀಕ್ಷೆ ಈ ತಂಡದ್ದು.
ಈ ಧಾರಾವಾಹಿಗೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿರುವ ಚಂದ್ರ ಬಾರ್ಕೂರು ಇನ್ನೂ ಒಂದಷ್ಟು ರೋಮಾಂಚಕ ಎಳೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಹೀಗೂ ನಡೆಯಬಹುದು ಎಂಬುದನ್ನು ಜನರಿಗೆ ತೋರಿಸುವಲ್ಲಿ 'ಸಿ.ಐ.ಟಿ. ಕರ್ನಾಟಕ' ಗೆದ್ದಿದೆ ಎಂದೇ ಹೇಳಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications












