'ಸರಿಗಮಪ'ದಲ್ಲಿ ಮಕ್ಕಳ ಜೊತೆಗೆ ಹಾಡು ಹಾಡಿದ ಅಪ್ಪ ಅಮ್ಮಂದಿರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ ಸೀಸನ್ 14' ಕಾರ್ಯಕ್ರಮ ದೊಡ್ಡ ಜನಪ್ರಿಯತೆ ಗಳಿಸಿದೆ. ಈ ಕಾರ್ಯಕ್ರಮದಲ್ಲಿ ಹಾಡುವ ಪ್ರತಿ ಮಕ್ಕಳು ಸಹ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದಾರೆ. ಇಷ್ಟು ದಿನ ಬರೀ ಮಕ್ಕಳ ಹಾಡುಗಳನ್ನು ಕೇಳಿದ್ದ ವೀಕ್ಷರಿಗೆ ಈಗ ಮತ್ತೊಂದು ವಿಶೇಷತೆ ಕಾದಿದೆ.
ಈ ವಾರ 'ಸರಿಗಮಪ' ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ಅವರ ತಂದೆ ತಾಯಿಯರು ಸಹ ಹಾಡಲಿದ್ದಾರೆ. ಪ್ರತಿ ಸಂಚಿಕೆಯಲ್ಲಿಯೂ ಹೊಸತನವನ್ನು ಹೊತ್ತು ತರುವ ಜೀ ಕನ್ನಡ ತಂಡ ಮತ್ತೆ ಅದನ್ನು ಮುಂದುವರೆಸಿದೆ. ಕಾರ್ಯಕ್ರಮದ ಸ್ಪರ್ಧಿಗಳಾದ ಜ್ಞಾನೇಶ್, ತೇಜಸ್ ಶಾಸ್ತಿ, ಅಭಿಜಾತ್ ಭಟ್, ಲಕ್ಷ್ಮಿ, ಅಂಕಿತಾ ಸೇರಿದಂತೆ ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯರ ಜೊತೆಗೆ ಹಾಡು ಹಾಡಿದ್ದಾರೆ. ಹಂಸಲೇಖ, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಮಕ್ಕಳ ಜೊತೆಗೆ ಹಾಡಿದ ಅಪ್ಪ ಅಮ್ಮಂದಿರ ಹಾಡನ್ನು ಎಂಜಾಯ್ ಮಾಡಿದರು.

ಈಗಾಗಲೇ ಈ ಸಂಚಿಕೆಯ ಪ್ರೋಮೋ ಜೀ ಕನ್ನಡ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಲಭ್ಯವಿದೆ. ಪ್ರೋಮೋ ನೋಡಿರುವ ಸಾಕಷ್ಟು ವೀಕ್ಷಕರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕಾರ್ಯಕ್ರಮವನ್ನು ನೋಡುವ ತವಕದಲ್ಲಿ ಇದ್ದಾರೆ. ಅಂದಹಾಗೆ, ಸರಿಗಮಪ ಕಾರ್ಯಕ್ರಮದ ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.


Click it and Unblock the Notifications











