ಹಿರಿಯ ನಟ ಶಿವಾಜಿ ರಾವ್ ಜಾಧವ್ ಹಿನ್ನೆಲೆ-ಜೀವನ!
ಶಿವಾಜಿ ರಾವ್ ಜಾಧವ್ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ನಟ. ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದವರು. ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಪಾತ್ರಗಳ ಮೂಲಕ ಜನರ ಮನಸಲ್ಲಿ ಉಳಿಯುವ ನಟ.
ಶಿವಾಜಿ ರಾವ್ ಜಾಧವ್ ಕನ್ನಡದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸುವ ಶಿವಾಜಿ, ತಂದೆ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅದೂ ಕೂಡ ನಾಯಕಿಯ ತಂದೆ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ.
ಸಿನಿಮಾ ಹಾಗೂ ಧಾರಾವಾಹಿ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಶಿವಾಜಿ ರಾವ್, ಶೂಟಿಂಗ್ಗಾಗಿ ಮೈಸೂರಿನಿಂದ ಬೆಂಗಳೂರಿಗೆ ನಿತ್ಯ ಬಂದು ಹೋಗುತ್ತಾರೆ. ಕೂಡು ಕುಟುಂಬದಲ್ಲಿರುವ ಶಿವಾಜಿ ರಾವ್ ಅವರ ಕುಟುಂಬ ಉದ್ಯಮ ಬೇಕರಿ ನಡೆಸುವುದು.

ಶಿವಾಜಿ ರಾವ್ ಮೈಸೂರಿನವರು!
ಶಿವಾಜಿ ರಾವ್ ಜಾಧವ್ ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರ ಕುಟುಂಬದ ಉದ್ಯಮ ಬೇಕರಿ ನಡೆಸುವುದು. ಶಿವಾಜಿ ರಾವ್ ಬಿಎ ಪದವಿ ಪಡೆದ ಮೇಲೆ ತಮ್ಮ ಬೇಕರಿಯಲ್ಲೇ ಉದ್ಯೋಗ ಮಾಡುತ್ತಿದ್ದರು. ಒಮ್ಮೆ ಮಾಸ್ಟರ್ ಹಿರಣ್ಣಯ್ಯ ನಾಟಕವನ್ನು ನೋಡಿ, ನಟಿಸುವ ಆಸೆಯಾಯಿತಂತೆ. ತಮ್ಮ ಫೇವರೇಟ್ ಮಾಸ್ಟರ್ ಹಿರಣ್ಣಯ್ಯನವರನ್ನು ಅನುಕರಣೆ ಮಾಡುತ್ತಾ ನಾಟಕದಲ್ಲಿ ಇನ್ನಷ್ಟೂ ಹೆಚ್ಚು ಅಭಿರುಚಿ ಬೆಳೆಸಿಕೊಂಡರು. ಹೀಗಾಗಿ ಶಿವಾಜಿ ಅವರು ಮೈಸೂರಿನಿಂದ ನಟನೆಗಾಗಿ ಬೆಂಗಳೂರಿಗೆ ಬರಬೇಕಾಯ್ತು.

ನಾಟಕನ ಮೂಲಕ ಸಿನಿಮಾಗೆ ಎಂಟ್ರಿ!
ಬಿಡುವಿನ ವೇಳೆಯಲ್ಲಿ ಕಲಾಕ್ಷೇತ್ರಕ್ಕೆ ಹೋಗುತ್ತಿದ್ದರು. ನಂತರ ಗೆಳೆಯರೊಂದಿಗೆ ಸೇರಿ ತಮ್ಮದೇ ಆದ ಸ್ನೇಹ ಕಲಾನಿಕೇತನ ಎಂಬ ತಂಡವನ್ನು ಸಹ ಕಟ್ಟಿಕೊಂಡರು. ಈ ತಂಡದ ಮೂಲಕ ನಾಟಕ ಆಡಲು ಆರಂಭಿಸಿದರು. ನಂತರ ಶಿವಾಜಿ ಅವರು ಅಭಿನಯದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ಕೋರ್ಸ್ ಮಾಡಿದರು. ದೇವನೂರ ಮಹಾದೇವ ಅವರ ಕುಸುಬಾಲ, ದ್ಯಾವನೂರು, ಒಡಲಾಳ ಎಂಬ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಇದರ ಜೊತೆಗೆ ಕೋರ್ಸ್ ಮುಗಿದ ಬಳಿಕ ಸಿನಿಮಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದರು.

ಶಿವಾಜಿ ರಾವ್ ಸಾವಿರಾರು ಚಿತ್ರಗಳಲ್ಲಿ ನಟನೆ!
ಹಂಸಲೇಖ ಕರೆಗೆ ಓಗೊಟ್ಟು ಚಿತ್ರವೊಂದರಲ್ಲಿ ಅಭಿನಯಿಸಿದರು. ಅಲ್ಲಿಂದ ಸಿನಿ ಜರ್ನಿ ಆರಂಭಿಸಿದರು. ಜಗ್ಗು ದಾದ, ರನ್ ಆಂಟನಿ, ಮಾತಾಡ್ ಮಾತಾಡ್ ಮಲ್ಲಿಗೆ, ಗೌಡ್ರು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. ಪೋಷಕ ಪಾತ್ರಗಳೇ ಮಿಂಚಿದ ಶಿವಾಜಿ ರಾವ್ ಜಾಧವ್ ಕಿರುತೆರೆಗೂ ಎಂಟ್ರಿ ಕೊಟ್ಟರು. ಸುಮಾರು ವರ್ಷಗಳಿಂದ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಸತ್ಯ ಸೀರಿಯಲ್ನಲ್ಲಿ ನಟನೆ!
ಶಿವಾಜಿ ರಾವ್ ಜಾಧವ್ ಟಿ ಎನ್ ಸೀತಾರಾಮ್ ಅವರ ಮಾಯಾಮೃಗ, ಮಂಥನ ಸೀರಿಯಲ್ಗಳಲ್ಲಿ ನಟಿಸಿದರು. ಈ ಸೀರಿಯಲ್ ಶಿವಾಜಿ ರಾವ್ಗೆ ದೊಡ್ಡ ಬ್ರೇಕ್ ತಂದುಕೊಟ್ಟಿತು. ಬಳಿಕ ಅನಾವರಣ ಸೀರಿಯಲ್ನಲ್ಲಿ ಆರೋಗ್ಯ ಸಚಿವನ ಪಾತ್ರ ನಿರ್ವಹಿಸಿದರು. ಚಿ.ಸೌ.ಸಾವಿತ್ರಿ ಧಾರಾವಾಹಿಯಲ್ಲಿ ನಾಣಿ ಪಾತ್ರದಿಂದ ಹೆಸರು ಗಳಿಸಿದರು. ಹೀಗೆ ಒಂದಾದ ಮೇಲೆ ಒಂದರಂತೆ ಕಳೆದ 25 ವರ್ಷದಿಂದ ನಟಿಸುತ್ತಿದ್ದಾರೆ. ಇದೀಗ ಆರೂರು ಜಗದೀಶ್ ನಿರ್ದೇಶನದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಳೆದೆರೆಡು ವರ್ಷದಿಂದ ನಟಿಸುತ್ತಿದ್ದಾರೆ. ಈ ಧಾರಾವಾಹಿಯೂ ಶಿವಾಜಿ ಅವರಿಗೆ ಹೆಸರು ತಂದು ಕೊಟ್ಟಿದೆ. ಸುಬ್ಬು ಪಾತ್ರದಿಂದ ಜನಪ್ರಿಯರಾಗಿದ್ದಾರೆ.


Click it and Unblock the Notifications











