ತೆರೆಮೇಲೆ ಬಜಾರಿ, ಅದೇ ಜೀವನದಲ್ಲಿ ಕಷ್ಟ ಜೀವಿ ನನ್ನ ತಾಯಿ ಎಂದ ನಟಿ ಅಪೂರ್ವಶ್ರೀ ಮಗಳು

ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಇದ್ದರೂ, ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟಿ ಅಪೂರ್ವಶ್ರೀ ಅವರು ಜನರಿಗೆ ಚಿರಪರಿಚಿತರಾದರು.
ದಶಕಗಳಿಂದ ಬಣ್ಣದ ಲೋಕದಲ್ಲಿರುವ ಅಪೂರ್ವಶ್ರೀ ಅವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ಮಗಳ ಭವಿಷ್ಯಕ್ಕಾಗಿ ಒಬ್ಬರೇ ಹೋರಾಡಿದ ಅಪೂರ್ವ ಅವರಿಗೆ ಮಗಳೇ ನಟಿಸುವುದಕ್ಕೆ ಪ್ರೋತ್ಸಾಹವನ್ನು ಕೂಡ ನೀಡುತ್ತಿದ್ದಾರೆ. ಮಧ್ಯಮ ವರ್ಗದ ಅಪೂರ್ವಶ್ರೀ ಅವರು ಒಂದೇ ಟೇಕ್ ನಲ್ಲಿ ತಮ್ಮ ಶಾಟ್ ಮುಗಿಸಿ ಬಿಡುತ್ತಿದ್ದರಂತೆ.
ತುಂಬಾ ಕಷ್ಟ ಪಟ್ಟು ಸಿನಿಮಾ ಇಂಡಸ್ಟ್ರಿಗೆ ಬಂದು ಇವತ್ತು ಇಷ್ಟರ ಮಟ್ಟಕ್ಕೆ ಹೆಸರು ಮಾಡಿರುವ ಅಪೂರ್ವಶ್ರೀ ಅವರು ಅಂಬರೀಷ್, ಶಶಿಕುಮಾರ್, ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ನಟನೆಯ ಕಾಮಿಡಿ ಚಿತ್ರವೊಂದು ರಿಲೀಸ್ ಆಗಿತ್ತು.

ಓದು ಬರಹ ಬಿಟ್ಟು ನಟಿಸೋಕೆ ಶುರು
ಅಪೂರ್ವಶ್ರೀ ಅವರ ಹುಟ್ಟೂರು ಮೈಸೂರು. ಬೆಳೆದಿದ್ದು ಮಂಡ್ಯ. ಈಗ ಇರೋದು ಬೆಂಗಳೂರಿನಲ್ಲಿ. ಇವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಓದ್ಯಾಕೆ ಎಂದು ಶಾಲೆಗೆ ಕಳಿಸಿರಲಿಲ್ಲವಂತೆ. ಪ್ರಪಂಚದ ಬಗ್ಗೆ ಏನೂ ತಿಳಿಯದ ಅಪೂರ್ವಶ್ರೀ ಅವರು ಕಂಡ ಕನಸು ಕಲಾವಿದೆಯಾಗಬೇಕು ಎಂದು. ಟಿವಿಯಲ್ಲಿ ಬರಬೇಕು, ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದ ಅಪೂರ್ವಶ್ರೀ ಅವರು 11 ವರ್ಷವಿದ್ದಾಗ ಬನಶಂಕರಿಯಲ್ಲಿ ಸಿನಿಮಾ ಶೂಟಿಂಗ್ ನೋಡುತ್ತಿದ್ದರು. ದಿನವಿಡೀ ಶೂಟಿಂಗ್ ನೋಡುತ್ತಿದ್ದ ಅಪೂರ್ವಶ್ರೀ ಅವರನ್ನು ಅಲ್ಲಿದ್ದವರೊಬ್ಬರು ಯಾಕೆ ಶಾಲೆಗೆ ಹೋಗೋದು ಬಿಟ್ಟು ಇಲ್ಲಿದ್ಯ ಅಂತ ಕೇಳಿದ್ದೇ ತಡ ಪಟ ಪಟ ಅಂತ ಮಾತನಾಡಿ, ನಟಿಸಲು ಅವಕಾಶವನ್ನೂ ಗಿಟ್ಟಿಸಿಕೊಂಡು ಬಿಟ್ಟರು. ಓದು ಬರಹ ಬಿಟ್ಟು 1992ರಲ್ಲಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ತಮ್ಮ ನಟನೆಯ ಬಗ್ಗೆ ಹೆಚ್ಚೆಚ್ಚು ಕಾಳಜಿಯನ್ನು ಹೊಂದಿದ್ದಾರೆ.

ಆರ್ಕೆಸ್ಟ್ರಾಗಳಲ್ಲೂ ಮಿಂಚಿದ ನಟಿ
ಅಪೂರ್ವಶ್ರೀ ಅವರ ಮೊದಲ ಚಿತ್ರ ಮಲ್ಲಿಗೆ ಹೂವೇ. ಒಂದೇ ಟೇಕ್ನಲ್ಲಿ ಡೈಲಾಗ್ ಹೇಳಿ ಮುಗಿಸುತ್ತಿದ್ದ ಅಪೂರ್ವಶ್ರೀ ಅವರು ನಟಿಸುವುದನ್ನು ಕರಗತ ಮಾಡಿಕೊಂಡಿದ್ದರು. ಸುಂದರಿ ಗಂಡ ಸದಾನಂದ, ದಾಸ, ಜಾಕಿ, ಅಣ್ಣಬಾಂಡ್, ಕಲ್ಪನಾ, ಮಿಲನ, ಸುಂಟರಗಾಳಿ, ಗಾಜಿನ ಮನೆ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇದರ ಜೊತೆಗೆ ಮಂಜುಳಾ ಗುರುರಾಜ್ ಅವರ ಜೊತೆಗೆ ಆರ್ಕೆಸ್ಟ್ರಾಗಳಲ್ಲಿ ಸುಮಾರು 5-6 ವರ್ಷಗಳ ಕಾಲ ಡ್ಯಾನ್ಸ್ ಮಾಡುತ್ತಿದ್ದರು. ಪಾಪ ಪಾಂಡು, ಲಕುಮಿ, ನಮ್ಮನೆ ಯುವರಾಣಿ, ಅರಗಿಣಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂತರ ಮದುವೆ ಮಕ್ಕಳು ಎಂದು ಮನೆಯನ್ನು ಸೇರಿದವರು ಎಂಟು ವರ್ಷಗಳ ಬಳಿಕ ಮತ್ತೆ ನಟನೆಯತ್ತ ಮುಖ ಮಾಡಿದರು.

ಅವಕಾಶಗಳಿಗಾಗಿ ಕಾಯುತ್ತಿರುವ ನಟಿ
ಇನ್ನು ಇತ್ತೀಚೆಗಷ್ಟೇ ಅಪುರ್ವಶ್ರೀ ಅವರು ಈಗ ಕ್ರಿಟಿಕಲ್ ಕೀರ್ತನೆಗಳು ಎಂಬ ಕಂಗ್ಲೀಷ್ ಹೆಸರಿರುವ ವಿಭಿನ್ನ ಕಥೆಯುಳ್ಳ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪುಷ್ಪಾ ಪಾತ್ರದಲ್ಲಿ ಸದ್ಯ ಅಪೂರ್ವಶ್ರೀ ಅವರು ಮಿಂಚುತ್ತಿದ್ದಾರೆ. ಇದರಲ್ಲಿನ ಪುಷ್ಪಾ ಪಾತ್ರದಿಂದ ಅಪೂರ್ವ ಅವರು ಫೇಮಸ್ ಆಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸಿಕ್ಕ ನೇಮ್-ಫೇಮ್ ಈ ಹಿಂದೆ ಸಿಕ್ಕಿರಲಿಲ್ಲ ಎಂದು ಸ್ವತಃ ಅಪೂರ್ವ ಅವರೇ ಹೇಳೀದ್ದಾರೆ. ಇನ್ನು ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿದ್ದು, ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ.

ಅಮ್ಮನ ಬಗ್ಗೆ ಭಾವುಕಳಾಗಿ ಮಾತನಾಡಿದ ಮಗಳು
ಇಷ್ಟು ವರ್ಷ ಏನೇ ಕಷ್ಟವಿದ್ದರೂ ಯಾರ ಬಳಿಯೂ ಹಂಚಿಕೊಳ್ಳದ ಅಪೂರ್ವ ಅವರ ಪುತ್ರಿ ರಾಜ್ವಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಅಮ್ಮನನ್ನು ಅಪ್ಪ ತುಂಬಾ ಹಿಂದೆಯೇ ಬಿಟ್ಟು ಹೋದರು. ಹಾಗಿದ್ದರೂ ಅಮ್ಮ ನನ್ನನ್ನು ಚೆನ್ನಾಗಿ ಸಾಕಿ ಬೆಳೆಸಿದ್ದಾಳೆ. ಅವಳಿಗೆ ಸಂಬಂಧಿಕರಿಂದ ಯಾವುದೇ ಸಪೋರ್ಟ್ ಸಿಗಲಿಲ್ಲ. ಆದರೆ ಜೊತೆ ಜೊತೆಯಲಿ ಧಾರಾವಾಹಿ ಇಂದಾಗಿ ಅಮ್ಮ ಖುಷಿಯಾಗಿದ್ದಾಳೆ. ರೀಲ್ ಜೊತೆಗೆ ರಿಯಲ್ ಲೈಫ್ ನಲ್ಲೂ ಅಮ್ಮ ಬೆಸ್ಟ್ ಎಂದು ಹೇಳಿದ್ದಾರೆ.


Click it and Unblock the Notifications











