ವಾಪಸ್ ಬರಲ್ಲ ಶಿಲ್ಪಾ ಶೆಟ್ಟಿ: ಚಾನೆಲ್ಗೆ ನಷ್ಟ
ರಾಜ್ ಕುಂದ್ರಾದಿಂದ ತೀವ್ರ ಆಘಾತದಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜೀವನದಿಂದ ಹಿಂದೆ ಸರಿದಿದ್ದಾರೆ.
ರಾಜ್ ಕುಂದ್ರಾ ಬಂಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದು ಹೊರತು ಪಡಿಸಿದರೆ ಶಿಲ್ಪಾರದ್ದು ಸದ್ದೇ ಇಲ್ಲ. ಪ್ರಮುಖ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಶಿಲ್ಪಾ ಶೆಟ್ಟಿ ಆ ಸ್ಥಾನದಿಂದಲೂ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಚಾನೆಲ್ಗೆ ನಷ್ಟವಾಗಿದೆ.
ಸೋನಿ ಚಾನೆಲ್ನಲ್ಲಿ 'ಸೂಪರ್ ಡಾನ್ಸರ್' ಹೆಸರಿನ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು ಶಿಲ್ಪಾ ಶೆಟ್ಟಿ. ಉತ್ತಮ ಡಾನ್ಸರ್ ಆಗಿರುವ ಶಿಲ್ಪಾ ಈ ಶೋಗೆ ಐದು ವರ್ಷದಿಂದಲೂ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ರಾಜ್ ಕುಂದ್ರಾ ಪ್ರಕರಣದ ನಂತರ ರಿಯಾಲಿಟಿ ಶೋನಲ್ಲಿ ಶಿಲ್ಪಾ ಭಾಗವಹಿಸಿಲ್ಲ. ಹಾಗಾಗಿ ಹೊಸ ಜಡ್ಜ್ ಅನ್ನು ಸೋನಿ ಚಾನೆಲ್ ಕರೆತಂದಿದೆ.

ಶಿಲ್ಪಾ ಶೆಟ್ಟಿ ಜಾಗಕ್ಕೆ ನಟಿ ಸೊನಾಲಿ ಬೇಂದ್ರೆ ಅನ್ನು ಕರೆತರಲಾಗಿದ್ದು ಇದಕ್ಕಾಗಿ ದೊಡ್ಡ ಮೊತ್ತವನ್ನು ಚಾನೆಲ್ ವೆಚ್ಚ ಮಾಡಿದೆ. ಶಿಲ್ಪಾ ಶೆಟ್ಟಿಗೆ ನೀಡುತ್ತಿದ್ದ ಸಂಭಾವನೆಗಿಂತಲೂ ಹೆಚ್ಚಿನ ಮೊತ್ತವನ್ನು ಸೊನಾಲಿ ಬೇಂದ್ರೆಗೆ ನೀಡಲಾಗಿದೆ ಎನ್ನಲಾಗುತ್ತಿದೆ.
ಸೊನಾಲಿ ಬೇಂದ್ರೆ ಸಹ ಹಿರಿಯ ನಟಿಯಾಗಿದ್ದು ಕನ್ನಡ ಸೇರಿದಂತೆ ಬಾಲಿವುಡ್, ತೆಲುಗು, ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ನೃತ್ಯಗಾರ್ತಿಯೂ ಆಗಿರುವ ಸೊನಾಲಿ ಬೇಂದ್ರೆ ಒಳ್ಳೆಯ ಮಾತುಗಾತಿ ಸಹ. ಹಾಗಾಗಿ ಶಿಲ್ಪಾ ಶೆಟ್ಟಿಯಿಂದ ತೆರವಾಗಿರುವ ಸ್ಥಾನಕ್ಕೆ ಸೊನಾಲಿ ಬೇಂದ್ರೆಯನ್ನು ಕರೆತರಲಾಗಿದೆ.
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ. ರಾಜ್ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ವಿರುದ್ಧ ತೀವ್ರವಾದ ಟ್ರೋಲ್ಗಳು ಹಾಗೂ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಮನನೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಶಿಲ್ಪಾ ಶೆಟ್ಟಿ ಆ ನಂತರ ಮತ್ತೆ ಮೌನಕ್ಕೆ ಜಾರಿದ್ದಾರೆ.
"ಹೌದು, ಕಳೆದ ಕೆಲವು ದಿನಗಳು ನನಗೆ ತುಂಬಾ ಸವಾಲಿನ ದಿನಗಳಾಗಿವೆ. ಪ್ರತಿಯೊಂದು ವಿಚಾರದಲ್ಲೂ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಬಂದಿವೆ. ಮಾಧ್ಯಮಗಳು ನನ್ನ ಮಾನಹಾನಿ ಮಾಡುತ್ತಿವೆ. ಬಹಳಷ್ಟು ಟ್ರೋಲ್ ಮತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನನಗೆ ಮಾತ್ರವಲ್ಲ ನನ್ನ ಕುಟುಂಬಕ್ಕೂ ಸಹ" ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು. ಅದು ಮಾತ್ರವೇ ಅಲ್ಲದೆ ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕೋರ್ಟ್ ಮೆಟ್ಟಿಲನ್ನು ಸಹ ಶಿಲ್ಪಾ ಶೆಟ್ಟಿ ಏರಿದರು. ಆದರೆ ಅದರಿಂದ ಹೆಚ್ಚಿನ ಪ್ರಯೋಜನವೇನು ಆಗಲಿಲ್ಲ.
ಈ ಸಂಕಷ್ಟದ ನಡುವೆ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಅವರ ತಾಯಿಯ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ವೆಲ್ ಫೇರ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣದಡಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಲಕ್ನೋದ ಹಜರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಈ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಯನ್ನು ವಿಚಾರಣೆ ನಡೆಸಲು ಲಕ್ನೋ ಪೊಲೀಸರು ಮುಂಬೈಗೆ ಬಂದಿಳಿದಿದ್ದಾರೆ.
ರಾಜ್ ಕುಂದ್ರಾ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೆಲವರು ರಾಜ್ ಕುಂದ್ರಾಗೆ ಬೆಂಬಲ ವ್ಯಕ್ತಪಡಸಿದ್ದರೆ. ಕೆಲವು ನಟಿಯರು ರಾಜ್ ಕುಂದ್ರಾಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಗ್ಲಾಮರಸ್ ನಟಿಯರೆಂದೇ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.


Click it and Unblock the Notifications











