ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನ ಪಡೆದ ಮೊದಲ ಕನ್ನಡತಿ ನಟಿ ಶ್ವೇತಾ ಪ್ರಸಾದ್!
ಸಿನಿಮಾ ಹಾಗೂ ಕಿರುತೆರೆ ತಾರೆಯರು ವಿದೇಶಗಳಿಗೆ ಆಗಾಗ ಪ್ರವಾಸ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಬಾಲಿವುಡ್ ನಟಿಯರು ದಿಢೀರನೇ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದು ಅವರೇ ಪ್ರವಾಸ ಕೈಕೊಂಡಿರುತ್ತಾರೆ. ಇನ್ನೊಂದು ಆ ದೇಶದ ಹೊಟೇಲ್ಗಳು, ರೆಸ್ಟೋರೆಂಟ್ಗಳು ಅವರನ್ನು ಕರೆಸಿಕೊಂಡಿರುತ್ತವೆ.
ಈಗ ಕನ್ನಡದ ನಟಿಯೊಬ್ಬರಿಗೆ ಸೌದಿ ಅರೇಬಿಯಾ ದೇಶದ ಪ್ರವಾಸೋದ್ಯಮ ಪ್ರಾಧಿಕಾರ ವಿಶೇಷ ಅತಿಥ್ಯವನ್ನು ನೀಡಿದೆ. ಅವರೇ ಶ್ವೇತಾ ಪ್ರಸಾದ್. ಈಗಾಗಲೇ ಕನ್ನಡದ ಹಲವು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಇವರು ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ಪ್ರವಾಸ ಮುಗಿಸಿ ಬಂದಿದ್ದಾರೆ.

ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಆತಿಥ್ಯ
ಕನ್ನಡ ನಟಿ ಶ್ವೇತಾ ಪ್ರಸಾದ್ 'ಶ್ರೀರಸ್ತು ಶುಭಮಸ್ತು', 'ರಾಧಾ ರಮಣ' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್ಗೂ ಎಂಟ್ರಿ ಕೊಟ್ಟಿದ್ದಾರೆ. ಶ್ವೇತಾ ಪ್ರಸಾದ್ಗೆ 'ರಾಧಾ ರಮಣ' ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಕಿರುತೆರೆಯಲ್ಲಿ 'ರಾಧಾ ಮಿಸ್' ಎಂದೇ ಚಿರಪರಿಚಿತರಾಗಿರುವ ಶ್ವೇತಾ ಪ್ರಸಾದ್ರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ವಿಶೇಷ ಆತಿಥ್ಯ ನೀಡಿದೆ.

ಸೌದಿ ಆತಿಥ್ಯ ಪಡೆದ ಮೊದಲ ಕನ್ನಡತಿ
ಶ್ವೇತಾ ಪ್ರಸಾದ್ ಸೌದಿ ಅರೇಬಿಯಾದಲ್ಲಿ ಸುಮಾರು ದಿನ ಕಾಲ ಪ್ರವಾಸ ಮಾಡಿದ್ದಾರೆ. ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಪ್ರವಾಸೋಧ್ಯಮವನ್ನು ಬೆಳೆಸುವ ದೃಷ್ಟಿಯಿಂದ ಬೇರೆ ಬೇರೆ ದೇಶದ ತಾರೆಯರನ್ನು ತನ್ನ ದೇಶಕ್ಕೆ ಆಹ್ವಾನ ನೀಡುತ್ತಿದೆ. ಸುಮಾರು ಆರು ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾ ಪ್ರವಾಸಿ ಸ್ಥಳಗಳನ್ನು ಪರಿಚಯಿಸುತ್ತಿದೆ. ಹೀಗಾಗಿ ನಟಿ ಶ್ವೇತಾ ಪ್ರಸಾದ್ಗೂ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದ ಆಹ್ವಾನ ನೀಡಿತ್ತು. ಈಗ ಆ ಆರು ದಿನಗಳ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ಬಂದಿದ್ದಾರೆ. ಅಂದ್ಹಾಗೆ ಕರ್ನಾಟಕದಿಂದ ಈ ಆಹ್ವಾನ ಪಡೆದ ಶ್ವೇತಾ ಪ್ರಸಾದ್ ಮೊದಲ ಕನ್ನಡಿಗರಾಗಿದ್ದಾರೆ.

ಶ್ವೇತಾ ಪ್ರಸಾದ್ ಫುಲ್ ಖುಷ್
ಸೌದಿ ಅರೇಬಿಯಾ ನೀಡಿದ ಆಹ್ವಾನಕ್ಕೆ ಶ್ವೇತಾ ಪ್ರಸಾದ್ ಖುಷಿಯಾಗಿದ್ದಾರೆ. "ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನ ನೀಡಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನ ಪಡೆದವವರಲ್ಲಿ ನಾನು ಮೊದಲಿಗಳು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋಧ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ." ಎಂದು ಶ್ವೇತಾ ಪ್ರಸಾದ್ ಹೇಳಿದ್ದಾರೆ.

ಸೌದಿ ಅರೇಬಿಯಾ ಪ್ರವಾಸ ಹೇಗಿತ್ತು?
ಶ್ವೇತಾ ಪ್ರಸಾದ್ ಸೌದಿ ಅರೇಬಿಯಾದ ರಿಯಾದ್, ಅಲುಲಾ, ಜೆಡಾ ಸೇರಿದಂತೆ ಮೂರು ಹೆಸರಾಂತ ನಗರಗಳಿಗೆ ಭೇಟಿ ಕೊಟ್ಟಿದ್ದರು. ರಿಯಾದ್ನಲ್ಲಿ ಸೌದಿ ಅರೇಬಿಯಾದ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್ಗೂ ವಿಸಿಟ್ ಹಾಕಿದ್ದಾರೆ. "ಅವರ ಆಹಾರ, ಆತಿಥ್ಯ ಎಲ್ಲವೂ ತುಂಬಾ ಚೆನ್ನಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ ದಿ ಲೈನ್ ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಹೆಣ್ಣು ಮಕ್ಕಳು ಬುರ್ಖಾ ಧರಿಸುತ್ತಾರೆ. ಹೊರಗಡೆ ಓಡಾಡುವುದಿಲ್ಲ ಎಂದುಕೊಂಡಿದ್ದೆ. ಆದರೆ, ಅಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಓಡಾಡಿಕೊಂಡು ಇದ್ದಾರೆ. ಜೊತೆಗೆ ಭಾರತೀಯರ ಮೇಲೆ ಅಲ್ಲಿನವರು ವಿಶೇಷವಾದ ಪ್ರೀತಿಯನ್ನು ಹೊಂದಿದ್ದಾರೆ" ಎಂದು ಶ್ವೇತಾ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











