ಕೆಎಸ್ ಎಲ್ ಸ್ವಾಮಿ ಧಾರಾವಾಹಿ ಶ್ರೀ ಶಂಕರ ದಿಗ್ವಿಜಯ
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಬದುಕು ಮತ್ತು ಸಾಧನೆ ಕುರಿತಂತೆ ಕನ್ನಡದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಿರ್ಮಿಸಲಾಗುತ್ತಿರುವ ಮೆಗಾ ಧಾರಾವಾಹಿ "ಶ್ರೀ ಶಂಕರ ದಿಗ್ವಿಜಯ-ತತ್ವಮಸಿ" ಕಿರುತೆರೆಯಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಈ ಧಾರಾವಾಹಿಯನ್ನು ಇದೇ ಆಗಸ್ಟ್ 20ರಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಧಾರಾವಾಹಿಯ ಚಿತ್ರೀಕರಣವನ್ನು ಆರಂಭಿಸಲಾಗುತ್ತಿದೆ.

ಇದರ ಜೊತೆಗೆ ಶಂಕರಾಚಾರ್ಯರ ವೇದಾಂತ ತತ್ವ ಮತ್ತು ಅದ್ವೈತ ಸಿದ್ಧಾಂತವನ್ನು ವಿರೋಧಿಸುವ ಅಥವಾ ಒಪ್ಪದಿರುವವರಿಗೂ ಈ ಧಾರಾವಾಹಿಯಿಂದ ಯಾವುದೇ ನೋವು, ಮುಜುಗರ ಉಂಟಾಗುವುದಿಲ್ಲ. ಎಲ್ಲರ ಅನುಕೂಲಕ್ಕಾಗಿ ಮಾನವನ ಯಶೋಗಾಥೆಯನ್ನು ಮತ್ತು ಭಾರತೀಯ ಬದುಕಿನ ಜೀವಾಳವನ್ನು ಬಿಂಬಿಸುವುದು ಇದರ ನಿಜ ಉದ್ದೇಶವಾಗಿದೆ.
ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ವಸುದೈವ ಕುಟುಂಬಕಂ ಎಂಬ ತತ್ವವನ್ನು ಸ್ಥಿರಗೊಳಿಸುವುದು ಮತ್ತು ಮಾನವತೆಯ ಸರ್ವಾಂಗೀಣ ಕಲ್ಯಾಣಕ್ಕಾಗಿ ಭಾವನಾತ್ಮಕ, ಭೌದ್ಧಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿರೂಪಿಸುವುದು ತಂಡದ ಕಾರ್ಯೋದ್ದೇಶವಾಗಿದೆ. ಆದಾಗ್ಯೂ ಸೀಮಿತ ಸ್ಥಳಾವಕಾಶದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಬಗ್ಗೆ ಹಾಗೂ ವಿವಿಧ ರಂಗದಲ್ಲಿ ಅವರು ಮಾಡಿರುವ ಸಾಧನೆಯನ್ನು ವಿವರಿಸುವುದು ಕಷ್ಟ ಎನ್ನುತ್ತದೆ ಧಾರಾವಾಹಿ ತಂಡ.

ಯಾರ ಮನಸ್ಸಿಗೂ ನೋವಾಗದ ರೀತಿ ಶಂಕರಾಚಾರ್ಯರ ಆದರ್ಶ, ಸಂದೇಶ, ತತ್ವವನ್ನು ವಿವರಿಸುತ್ತದೆ. ಶಂಕರರು ನಾವು ತಿಳಿದಿರುವುದಕ್ಕಿಂತಲೂ ಹೇಗೆ ಮಿಗಿಲಾದವರಾಗಿದ್ದಾರೆ ಎಂಬುದನ್ನೂ ಇದು ನಿರೂಪಿಸುತ್ತದೆ. ಮಿಗಿಲಾಗಿ ಮೂಢನಂಬಿಕೆಗಳನ್ನು ದೂರಮಾಡಿ ತರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ವಸ್ತುಸ್ಥಿತಿಯನ್ನು ಮರೆಮಾಚುವ ಯಾವುದೇ ಪ್ರಯತ್ನವೂ ನಡೆದಿಲ್ಲ.
ಕ್ರಿಸ್ತಶಕ 686ರ ಸುಮಾರಿನಲ್ಲಿ ಕೇರಳದ ಮಲಬಾರ್ ಪ್ರಾಂತ್ಯದ ಕಾಲಡಿ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶಂಕರಾಚಾರ್ಯರ ಸುತ್ತ ಹೆಣೆದುಕೊಂಡಿರುವ ಸ್ವಾರಸ್ಯಕರ, ಸುಂದರ ಕಥೆಗಳಿಗೆ ಈ ಧಾರಾವಾಹಿ ಜೀವನೀಡಿದೆ. ಶಂಕರರ ಬಾಲ್ಯ, ಸನ್ಯಾಸ ಎಲ್ಲ ವಿಚಾರಗಳೂ ಇಲ್ಲಿ ವಾಸ್ತವತೆಯ ತಳಹದಿಯ ಮೇಲೆ ರೂಪುತಳೆದಿವೆ. ಶಂಕರರ ಅದ್ವೈತ ಸಿದ್ಧಾಂತದ ಮೇಲೆ ರೂಪಗೊಂಡ ವೇದಾಂತ ಸಿದ್ಧಾಂತಗಳು, ಶಂಕರರ ಭಾರತ ಪರಿಕ್ರಮಣ ಎಲ್ಲದರ ಮೇಲೂ ಬೆಳಕು ಚೆಲ್ಲಲಾಗಿದೆ.

ಸುಪ್ರಸಿದ್ಧ ಸಂಗೀತ ಸಂಯೋಜಕರಾದ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ, ಜಿಎಸ್ ಭಾಸ್ಕರ್ ಅವರ ಕ್ಯಾಮರ, ಸುರೇಶ್ ಅರಸ್ ಅವರ ಸಂಕಲನ ಇದೆ. ಪಿ. ಕೃಷ್ಣ ಮೂರ್ತಿ, ರಮೇಶ್ ಚಂದ್ರ ಹಾಗು ಶ್ರೀಮತಿ ಧನಲಕ್ಷ್ಮಿ ರವರು ಕಲೆ ಹಾಗು ಪ್ರಸಾದನದ ಜವಾಬ್ದಾರಿ ಹೊತ್ತಿದ್ದಾರೆ.
ಐಸೋಲ್ ಟ್ಯಾಲೆಂಟ್ ಕನ್ಸಲ್ಟಿಂಗ್ ಪ್ರೈ ಲಿ.ನ ದಯಾಶಂಕರ್ ಎಂ.ಎ. ಅವರು ಮಾರುಕಟ್ಟೆಯ ಕ್ರೋಡೀಕರಣದಲ್ಲಿ ಹೆಗಲು ಕೊಟ್ಟಿದ್ದಾರೆ. ಹಿರಿಯ ಪತ್ರಕರ್ತ ಹಾಗೂ ಲೇಖಕ ಕೆ.ಎನ್. ವೆಂಕಟಸುಬ್ಬರಾವ್ ಅವರು ಕಿರುತೆರೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ರವಿ ಸುಬ್ರಹ್ಮಣ್ಯಂ ಅವರು ನಿರ್ಮಾಣದ ವಿನ್ಯಾಸ ರೂಪಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











