ಕಿರುತೆರೆ ನಟ ಶ್ರೀಮಹದೇವ್ ಸಿನಿಮಾಗಳಲ್ಲಿ ಬ್ಯುಸಿ!
ಕಿರುತೆರೆಯ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಶ್ರೀ ಮಹದೇವ್ ಈಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳು, ಆಲ್ಬಂ ಸಾಂಗಗಳಲ್ಲಿ ಕಾಣಿಸಿಕೊಲಳ್ಳುತ್ತಿರುವ ಶ್ರೀ ಮಹದೇವ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಧಾರಾವಾಹಿಗಳ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮಹದೇವ್ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ..?
ಶ್ರೀ ಮಹದೇವ್ ಅವರ ನಟನೆಯನ್ನು ನೋಡಿದ ಪ್ರತಿಯೊಬ್ಬರೂ, ತಮಗೂ ಇಂಥಹ ಲವರ್, ಗಂಡ, ಮಗ, ಸಹೋದರ ಅಳಿಯ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳದವರಿಲ್ಲ. ಅದ್ಭುತವಾಗಿ ನಟಿಸುವ ಶ್ರೀ ಮಹದೇವ್ ಎಲ್ಲರ ಮನ ಸೆಳೆಯುತ್ತಾರೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮನೆಮಾತಾಗಿರುವ ಮಹದೇವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಚಿಟ್ಟೆ ಹೆಜ್ಜೆ ಎಂಬ ಧಾರಾವಾಹಿ ಮೂಲಕ. ನಂತರದ ದಿನಗಳಲ್ಲಿ ತಮ್ಮ ಅಭಿನಯದಿಂದಲೇ ಫೇಮಸ್ ಆಗಿರುವ ಮಹದೇವ್, ಸಿನಿಮಾ ರಂಗಕ್ಕೂ ಎಂಟ್ರಿಕೊಟ್ಟರು. ಇದೀಗ ಮಹದೇವ್ ನಟನೆಯ ಮತ್ತೊಂದು ಚಿತ್ರ ತೆರೆಗೆ ಬರುತ್ತಿದೆ.

ವಿನು ಬಳಂಜ ನಿರ್ದೇಶನದ 'ಚಿಟ್ಟೆ ಹೆಜ್ಜೆ' ಧಾರಾವಾಹಿ ಮೂಲಕ ಮಹದೇವ್ ಅವರು ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟರು. ಈ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಮಹದೇವ್ ನಟಿಸಿದ್ದರು. ಬಳಿಕ ಜೀ ಕನ್ನಡದಲ್ಲಿ ಮೂಡಿ ಬಂದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಜನಪ್ರಿಯರಾದರು. ಬಳಿಕ ಸುವರ್ಣ ವಾಹಿನಿಯಲ್ಲಿ ನೀಲಿ ಧಾರಾವಾಹಿಯಲ್ಲಿ ವಿಭಿನ್ನ ಶೈಲಿಯಲ್ಲಿ ನಟಿಸಿ ಗಮನ ಸೆಳೆದರು.
ಬಾಲ್ಯದಿಂದಲೂ ನಟನೆಯ ಮೇಲೆ ಒಲವಿದ್ದ ಮಹದೇವ್ ಮೂಲತಃ ಮೈಸೂರಿನವರು. ನಟನೆ ಕುರಿತು ಯಾವುದೇ ತರಬೇತಿ ಪಡೆಯದೆ, ಸಾಫ್ಟ್ ವೇರ್ ಹುದ್ದೆಯಲ್ಲಿದ್ದ ಇವರು ಸೀದಾ ಕಿರುತೆರೆಗೆ ಬಂದು ಬಳಿಕ ನಟಿ ಮೇಘನಾ ರಾಜ್ ಅಭಿನಯದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ನಟಿಸಿದರು. ಇದೀಗ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದರಲ್ಲೂ ಕೂಡ ನಾಯಕ ನಟನಾಗಿ ಶ್ರೀ ಮಹದೇವ್ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೇ 'ಪದವಿಪೂರ್ವ' ಎಂಬ ಸಿನಿಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಲೆಟ್ಸ್ ಬ್ರೇಕಪ್ ಹಾಗೂ ಹೊಂದಿಸಿ ಬರೆಯಿರಿ ಚಿತ್ರದಲ್ಲೂ ನಟಿಸಿದ್ದಾರೆ.

ಶ್ರೀ ಮಹದೇವ್ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್ ಸಜ್ಜಾಗಿವೆ. ಗಜಾನನ & ಗ್ಯಾಂಗ್ ಚಿತ್ರ ಇದೇ ಜೂನ್ 3ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಮಹದೇವ್ ಅವರು ಟಫ್ ಆಗಿರುವ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಅಭಿಷೇಕ್ ಶೆಟ್ಟಿ ಚಿತ್ರವನ್ನು ನಿರ್ದೇಶಿಸಿದ್ದು, ಪ್ರದ್ಯುತನ್ ಸಂಗೀತ ಸಂಯೋಜಿಸಿದ್ದಾರೆ. ಉದಯ ಲೀಲ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದ್ದು, ವಿಜೆಟ್ ಚಂದ್ರ ಸಂಕಲನವಿದೆ. ಇನ್ನು ಈ ಚಿತ್ರವನ್ನು ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ ನಿರ್ಮಾಪಕರಾಗಿದ್ದಾರೆ. ಈ ಚಿತ್ರದಲ್ಲಿ ನಾಟ್ಯ ರಂಗ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ.
ಶ್ರೀ ಮಹದೇವ್ ಅವರು ಮೊದಲ ಬಾರಿಗೆ ಆಲ್ಬಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಸಾಟರ್ಡೇ ನೈಟಲಿ ಎಂಬ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ರಿಲೀಸ್ ಆಯ್ತು. ಈ ಹಾಡು ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಮೂಲಕ ಲಾಂಚ್ ಆಗಿದೆ. ಇನ್ನು ಬೆಂಗಳೂರಿನ ಎಂಜಿ ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಈ ಆಲ್ಬಂ ಸಾಂಗ್ ಅನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಾಡಿಗೆ ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಅವರ ಛಾಯಾಗ್ರಹಣವಿದೆ. ಶ್ರೇಯಸ್ ಭೈರವ್ ನೃತ್ಯ ನಿರ್ದೇಶನ ಮಾಡಿದ್ದು, ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ. ಇನ್ನು ಶ್ರೀ ಮಹದೇವ್ ಜೊತೆಗೆ ಪೂಜಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


Click it and Unblock the Notifications











