ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿ
ಲಾಕ್ ಡೌನ್ ಅವಧಿಯಲ್ಲಿ ಅನೇಕ ಧಾರಾವಾಹಿಗಳು ಸ್ಥಗಿತಗೊಂಡಿವೆ. ಹಾಗೆಯೇ ಧಾರಾವಾಹಿ ಚಿತ್ರೀಕರಣದ ಮೇಲಿನ ನಿಬಂಧನೆಗಳಿಂದ ಹಲವಾರು ಕಲಾವಿದರು, ತಂತ್ರಜ್ಞರು ಕೆಲಸವಿಲ್ಲದಂತಾಗಿದೆ. ಈಗ ಬಹುತೇಕ ಎಲ್ಲ ವಾಹಿನಿಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳೂ ಪ್ರಸಾರ ಆರಂಭವಾಗಿದೆ. ಇದರಿಂದಾಗಿ ತಾವು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ ಎಂದು ಧಾರಾವಾಹಿ ಕಲಾವಿದರು ಅಲವತ್ತುಕೊಂಡಿದ್ದಾರೆ.
ಸಚಿವ ಆರ್. ಅಶೋಕ್ ಅವರನ್ನು ಭಾನುವಾರ ಭೇಟಿ ಮಾಡಿದ ಟಿವಿ ಕಲಾವಿದರ ಅಸೋಸಿಯೇಷನ್ ಸದಸ್ಯರು ಡಬ್ಬಿಂಗ್ ಧಾರಾವಾಹಿಗಳನ್ನು ನಿಷೇಧಿಸುವಂತೆ ಮನವಿ ಮಾಡಿದರು. ಕರ್ನಾಟಕದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ಸಿಗಬೇಕು, ಟಿವಿ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಂಸ್ಕೃತಿಯ ರೂವಾರಿಗಳು. ಅವರು ನೆಲೆ ಕಳೆದುಕೊಳ್ಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂದೆ ಓದಿ...

ಆರ್. ಅಶೋಕ್ಗೆ ಮನವಿ ಸಲ್ಲಿಕೆ
'ದೂರದರ್ಶನ ಮಾಧ್ಯಮದ ಕಲಾವಿದರ ಅಸೋಸಿಯೇಷನ್ ರವರು ನನ್ನ ಕಚೇರಿಗೆ ಭೇಟಿ ನೀಡಿ ಕನ್ನಡಕ್ಕೆ ಇತರ ಭಾಷೆಯ ಧಾರಾವಾಹಿಗಳನ್ನು ಡಬ್ ಮಾಡುವುದನ್ನು ನಿಷೇಧಿಸಲು ಮತ್ತು ಕೊರೋನಾ ವೈರಸ್ ಭೀತಿಯಿಂದಾಗಿ ಹಿರಿಯ ಕಲಾವಿದರು (60 ವರ್ಷಕ್ಕಿಂತ ಮೇಲ್ಪಟ್ಟ) ಧಾರಾವಾಹಿಗಳಲ್ಲಿ ನಟಿಸುವ ನಿಷೇಧವನ್ನು ತೆಗೆದುಹಾಕುವಂತೆ ಮನವಿ ಕೋರಿದ್ದಾರೆ' ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಡಬ್ಬಿಂಗ್ ಧಾರಾವಾಹಿ ಮಹಾ ಭೋಜನ
ಡಬ್ಬಿಂಗ್ ವೈರಸ್ ಕೊರೊನಾ ವೈರಸ್ಗಿಂತ ಅಪಾಯಕಾರಿ. ಕೊರೊನಾ ಮಹಾಮಾರಿ ತಂದ ಸಂಕಷ್ಟದ ದಿನಗಳು ಕನ್ನಡ ಮನರಂಜನಾ ವಾಹಿನಿಗಳ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಅನಿವಾರ್ಯವಾಗಿ ಕೆಲವು ಡಬ್ಬಿಂಗ್ ಧಾರಾವಾಹಿಗಳನ್ನು ಅವು ಪ್ರಸಾರ ಮಾಡಿದವು. ಈಗ ಡಬ್ಬಿಂಗ್ ಧಾರಾವಾಹಿಗಳ ಮಹಾ ಭೋಜನ ನೀಡಲು ಅವು ಮುಂದಾಗಿವೆ ಎಂದು ನಿರ್ದೇಶಕ ಬಿಎಸ್ ಲಿಂಗದೇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಬ್ಬಿಂಗ್ ಧಾರಾವಾಹಿಗಳ ಪಾಲು
ಕನ್ನಡಕ್ಕೆ ಡಬ್ ಆಗುವ ಕಾರ್ಯಕ್ರಮಗಳು ಶೈಕ್ಷಣಿಕ ಮಾಹಿತಿಗೆ ಮಾತ್ರವೇ ಸೀಮಿತವಾಗಿರಲಿ. ಮಾಲ್ಗುಡಿ ಡೇಸ್ ಮತ್ತು ಮಹಾಭಾರತದಂತಹ ಜನಪ್ರಿಯ ಕಾರ್ಯಕ್ರಮಗಳು ಪ್ರಸಾರವಾದ ಬಳಿಕ ಇತರೆ ಡಬ್ಬಿಂಗ್ ಧಾರಾವಾಹಿಗಳೂ ಪ್ರಸಾರವಾಗುತ್ತಿವೆ. ಟೆಲಿವಿಷನ್ ಕಾರ್ಯಕ್ರಮಗಳ ಪ್ರೈಮ್ ಸ್ಲಾಟ್ಗಳು ಡಬ್ಬಿಂಗ್ ಧಾರಾವಾಹಿಗಳ ಪಾಲಾಗುತ್ತಿವೆ ಎಂದು ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಆರೋಪಿಸಿದ್ದಾರೆ.

ಡಬ್ಬಿಂಗ್ಗೆ ಕಡಿವಾಣ ಹಾಕಿ
ಈಗಾಗಲೇ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ಮತ್ತಷ್ಟು ಕಷ್ಟ ಎದುರಾಗಿದೆ. ಡಬ್ಬಿಂಗ್ ಧಾರಾವಾಹಿಗಳ ಪ್ರಸಾರ ಆರಂಭವಾದಾಗಿನಿಂದ ಸುಮಾರು 35 ಒರಿಜಿನಲ್ ಧಾರಾವಾಹಿಗಳು ಅಂತ್ಯಗೊಂಡಿವೆ. ಡಬ್ಬಿಂಗ್ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ
ಈ ನಡೆಗೆ ಡಬ್ಬಿಂಗ್ ಪರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಸಿಐ ಮತ್ತು ಸುಪ್ರೀಂಕೋರ್ಟ್ ಡಬ್ಬಿಂಗ್ ಪರ ತೀರ್ಪು ನೀಡಿದೆ. ಡಬ್ಬಿಂಗ್ ವಿರೋಧಿ ನೀತಿ ಅನುಸರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿವೆ. ಡಬ್ಬಿಂಗ್ ನಮ್ಮ ಹಕ್ಕು ಮತ್ತು ಇದು ಕನ್ನಡ ಪರ. ದುಡ್ಡು ಕೊಟ್ಟು ಸೇವೆ ಪಡೆಯುವ ಗ್ರಾಹಕನು ತಾನು ಯಾವ ಕಾರ್ಯಕ್ರಮ ನೋಡಬೇಕು ಎಂದು ತೀರ್ಮಾನಿಸುವ ಹಕ್ಕು ಹೊಂದಿದ್ದಾನೆ. ಅದನ್ನು ಹತೋಟಿ ಕೂಟ ನಿರ್ಧರಿಸುವಂತಿಲ್ಲ ಎಂದು ಗಣೇಶ್ ಚೇತನ್ ಹೇಳಿದ್ದಾರೆ. ಡಬ್ಬಿಂಗ್ ಪರ ಜೂನ್ 16ರಂದು ಸಂಜೆ ಟ್ವಿಟ್ಟರ್ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ.


Click it and Unblock the Notifications











