'ಕಲರ್ಸ್ ಕನ್ನಡ'ದಲ್ಲಿ ಹೊಸ ಡ್ಯಾನ್ಸ್ ಶೋ 'ತಕಧಿಮಿತ': ಇದೇ ವಾರದಿಂದ ಪ್ರಾರಂಭ
ಭಿನ್ನ-ವಿಭಿನ್ನ ಸೀರಿಯಲ್ ಗಳು, ರಿಯಾಲಿಟಿ ಶೋಗಳನ್ನು ನೀಡುತ್ತಾ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಅದೇ 'ತಕಧಿಮಿತ'.
'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ ಶ್ರುತಿ ಪ್ರಕಾಶ್, 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿ ಕಾರುಣ್ಯ ರಾಮ್, 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಆದಂ ಪಾಶಾ ಸೇರಿದಂತೆ ಕಿರುತೆರೆ ನಟ-ನಟಿಯರು 'ತಕಧಿಮಿತ' ಡ್ಯಾನ್ಸ್ ಶೋನಲ್ಲಿ ಸೆಣಸಲಿದ್ದಾರೆ. ಒಟ್ಟು ಹದಿನಾಲ್ಕು ಜೋಡಿಗಳು ಇಲ್ಲಿ ವೀಕ್ಷಕರ ಮನಸ್ಸು ಗೆಲ್ಲಲು ಪೈಪೋಟಿ ನಡೆಸಲಿವೆ.
ಈ ವರ್ಣರಂಜಿತ ಡ್ಯಾನ್ಸ್ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದ್ದು, ಆರಂಭದ ಸಂಚಿಕೆ ಫೆಬ್ರವರಿ 2 ರಂದು ಮೂಡಿಬರಲಿದೆ. ಮುಂದೆ ಓದಿರಿ...

ತೀರ್ಪುಗಾರರು ಯಾರ್ಯಾರು.?
ಸ್ಪರ್ಧಿಗಳ ಡ್ಯಾನ್ಸ್ ಪರ್ಫಾಮೆನ್ಸ್ ಗಳನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅಳೆದು ತೂಗಲಿದ್ದಾರೆ. ರವಿಚಂದ್ರನ್ ಅಕ್ಕ ಪಕ್ಕದಲ್ಲಿ ತೀರ್ಪುಗಾರರಾಗಿ ಪ್ರಖ್ಯಾತ ತಾರೆ ಸುಮನ್ ರಂಗನಾಥ್ ಹಾಗೂ ಸುಪ್ರಸಿದ್ಧ ಶಾಸ್ತ್ರೀಯ ಶೈಲಿಯ ನೃತ್ಯಗಾತಿ ಅನುರಾಧಾ ವಿಕ್ರಾಂತ್ ಕೂರಲಿದ್ದಾರೆ.

ನಿರೂಪಕರಾಗಿ ಅಕುಲ್ ಬಾಲಾಜಿ
ಡ್ಯಾನ್ಸ್ ಶೋ ನಲ್ಲಿ ತೀರ್ಪುಗಾರರ ಖುರ್ಚಿಯಲ್ಲಿ ರವಿಚಂದ್ರನ್ ಇದ್ದ ಮೇಲೆ ಅಲ್ಲಿ ಅಕುಲ್ ಬಾಲಾಜಿ ಇರದಿದ್ದರೆ ಹೇಗೆ.? ಜನಪ್ರಿಯ ನಿರೂಪಕರಾದ ಅಕುಲ್, ತಮ್ಮ ಸೊಗಸಾದ ಮಾತುಗಳಿಂದ 'ತಕಧಿಮಿತ' ಕಾರ್ಯಕ್ರಮವನ್ನು ಇನ್ನಷ್ಟು ಕಲರ್ ಫುಲ್ ಮಾಡಲಿದ್ದಾರೆ.

ಎಲಿಮಿನೇಷನ್ ಹೇಗೆ.?
ತೀರ್ಪುಗಾರರು ನೀಡುವ ಅಂಕಗಳ ಆಧಾರದಲ್ಲಿ ಕನಿಷ್ಠ ಅಂಕ ಪಡೆಯುವ ಮೂರು ಜೋಡಿಗಳು ಡೇಂಜರ್ ಝೋನ್ ತಲುಪಲಿವೆ. ವೂಟ್ ಆಪ್ ನಲ್ಲಿ ವೀಕ್ಷಕರು ಮತ ಚಲಾಯಿಸಬೇಕಿದೆ. ಯಾರಿಗೆ ಕಮ್ಮಿ ಮತಗಳು ಲಭಿಸುತ್ತದೋ, ಅವರು ಎಲಿಮಿನೇಟ್ ಆಗುತ್ತಾರೆ. ಹದಿನಾರು ವಾರಗಳ ಕಾಲ ಈ ಶೋ ಪ್ರಸಾರ ಆಗಲಿದೆ.

ಪರಮೇಶ್ವರ್ ಗುಂಡ್ಕಲ್ ಮಾತು
''ಕಲರ್ಸ್ ಕನ್ನಡ ಅತ್ಯುತ್ತಮ ಗುಣಮಟ್ಟದ ಹೊಸ ರಿಯಾಲಿಟಿ ಶೋಗಳನ್ನು ನೀಡುತ್ತಾ ಬಂದಿದೆ. ತಕಧಿಮಿತ ಶೋ ಮೂಲಕ ಮನರಂಜನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ನಮ್ಮದು'' ಅಂತಾರೆ ವಯಕಾಮ್ 18 ಸಂಸ್ಥೆಯ ಕನ್ನಡ ಮನರಂಜನಾ ಕ್ಲಸ್ಟರ್ ನ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್.


Click it and Unblock the Notifications











