ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್
ಕನ್ನಡ ಸಣ್ಣ ಪರದೆಯಲ್ಲಿ ಲಾಯರ್ ಎಂದೇ ಹೆಸರಾಗಿರುವ ಟಿ ಎನ್ ಸೀತಾರಾಮ್, ರಮೇಶ್ ಅರವಿಂದ್ ಅರ್ಪಿಸುವ ' ವೀಕೆಂಡ್ ವಿತ್ ರಮೇಶ್' ಶೋನ ಭಾನುವಾರದ ಎಪಿಸೋಡ್ ನಲ್ಲಿ (ಆ 31) ಅತಿಥಿಯಾಗಿ ಬಂದಿದ್ದರು. ಎಂದಿನಂತೆ ಅಚ್ಚುಕಟ್ಟಾಗಿ ಮೂಡಿಬಂದ ಕಾರ್ಯಕ್ರಮದಲ್ಲಿ ಸೀತಾರಾಮ್ ತನ್ನ ಬಾಲ್ಯ ಜೀವನದಿಂದ ಸೆಲೆಬ್ರಿಟಿ ಜೀವನದವರೆಗಿನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ತಂದೆ, ತಾಯಿಯನ್ನು ನೆನೆಸಿ ಕಾರ್ಯಕ್ರಮದಲ್ಲಿ ಭಾವೋದ್ವೇಗಕ್ಕೊಳಗಾದ ಸೀತಾರಾಮ್, ತಂದೆ ತಾಯಿಯ ಮಾತನ್ನು ನಾನು ಕೇಳಲಿಲ್ಲ. ಪರೋಕ್ಷವಾಗಿ ಅವರ ಸಾವಿಗೆ ನಾನೇ ಕಾರಣನಾದೆ. ಸಾರಿ ಅಪ್ಪ, ಸಾರಿ ಅಮ್ಮ ಎಂದು ಸೀತಾರಾಮ್ ನೋವಿನ ಮಾತನ್ನಾಡಿದರು.
ನಾನು ಸಮಾಜವಾದವನ್ನು ನಂಬುವವನು. ಲಂಕೇಶ್, ಅನಂತಮೂರ್ತಿಯವರಿಂದ ಪ್ರಭಾವಿತನಾದವನು. ನನ್ನ ತಂದೆ ನನಗಾಗಿ ಆಸ್ತಿ ಮಾಡಿದ್ದಾರೆಂದರೆ ಅದು ಪಾಪ ಎನ್ನುವ ನಂಬಿಕೆಯುಳ್ಳವನಾಗಿದ್ದೆ. ತಂದೆಯವರು ನನ್ನ ಹೆಸರಿನಲ್ಲಿ ಕೆಲವು ಎಕರೆ ಜಮೀನು ಮಾಡಿದ್ದರು. ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗಕ್ಕೆ ಬರಲಿ ಎನ್ನುವುದು ಅವರ ಉದ್ದೇಶ. ಆದರೆ ಆ ಆಸ್ತಿಯನ್ನು ಬಳಸಿಕೊಳ್ಳಲು ನನಗೆ ಮನಸಿರಲಿಲ್ಲ ಎಂದು ಸೀತಾರಾಮ್ ತನ್ನ ಬದುಕಿನ ಪುಟವನ್ನು ಬಿಚ್ಚಿಟ್ಟರು.
ಆಸ್ತಿಯನ್ನು ಬಳಸಿಕೊಳ್ಳದೇ ಇರುವ ನನ್ನ ನಿರ್ಧಾರವನ್ನು ಪತ್ರದ ಮೂಲಕ ಅಪ್ಪನಿಗೆ ತಿಳಿಸಿದ್ದೆ. ಅಪ್ಪನಿಗೆ ಆ ಸಮಯದಲ್ಲಿ ಹುಷಾರಿರಲಿಲ್ಲ, ಆ ವಿಚಾರ ನನಗೆ ತಿಳಿದಿರಲಿಲ್ಲ. ಮಗನಿಗಾಗಿ ಮಾಡಿದ ಆಸ್ತಿಯನ್ನು ಮಗ ತಿರಸ್ಕರಿಸಿದ ಎನ್ನುವ ನೋವಿನಿಂದ ತಂದೆ ಔಷದಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. (ಹಂಸಲೇಖ, ರವಿಚಂದ್ರನ್ ಮನಸ್ತಾಪದ ಕಾರಣ ಬಹಿರಂಗ)
ಅದರಿಂದ ಅವರು ಕೋಮಾ ಸ್ಥಿತಿಗೆ ಹೋದರು, ಚೇತರಿಸಿಕೊಳ್ಳದೇ ಅಪ್ಪ ನನ್ನನ್ನು ಅಗಲಿದರು. ನನ್ನ ತಂದೆಯ ಸಾವಿಗೆ ಪರೋಕ್ಷವಾಗಿ ನಾನೇ ಕಾರಣ ಎನ್ನುವ ನೋವು ನನ್ನನ್ನು ಕಾಡುತ್ತಿದೆ ಎಂದು ಟಿ ಎನ್ ಸೀತಾರಾಮ್ ಕಾರ್ಯಕ್ರಮದಲ್ಲಿ ನೋವಿನ ಮಾತನ್ನಾಡಿದ್ದಾರೆ.

ಕಾರ್ಯಕ್ರಮವನ್ನು ಹೊಗಳಿದ ಸೀತಾರಾಮ್
ಜೀಕನ್ನಡದ ಈ ಶೋವನ್ನು ಹಾಡಿ ಹೊಗಳಿದ ಸೀತಾರಾಮ್, ರಮೇಶ್ ಅರವಿಂದ್ ನಿರೂಪಣೆಗೂ ಶಹಬ್ಬಾಸ್ ಎಂದಿದ್ದಾರೆ. ಜೀವನದ ಏರಿಳಿತವನ್ನು ಮೆಲುಕು ಹಾಕುವ ಉತ್ತಮ ಕಾರ್ಯಕ್ರಮದ ಇದಾಗಿದ್ದು, ಈ ಕಾರ್ಯಕ್ರಮದ ಮೂಲಕ ಹಲವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.

ಮಾಯಾಮೃಗ ಧಾರಾವಾಹಿ
ಮಾಯಾಮೃಗ ಧಾರಾವಾಹಿಗೆ ನನಗೆ ದೂರದರ್ಶನದಲ್ಲಿ ಮಧ್ಯಾಹ್ನದ ಸ್ಲಾಟ್ ಸಿಕ್ತು. ಅದು ಯಾರಿಗೂ ಬೇಡವಾಗಿರುವ ಸ್ಲಾಟ್. ಆದರೆ ಬೇರೆ ವಿಧಿಯಿಲ್ಲದೇ ಅದೇ ಸ್ಲಾಟಿನಲ್ಲಿ ಧಾರವಾಹಿ ಪ್ರಸಾರ ಆರಂಭಿಸಿದೆ. ಶ್ರೀನಾಥ್ ಎನ್ನುವ ನನ್ನ ಸ್ನೇಹಿತ ಆ ಧಾರಾವಾಹಿಯನ್ನು ಮಾರ್ಕೆಟಿಂಗ್ ಮಾಡಲು ಸಹಾಯ ಮಾಡಿದ - ಸೀತಾರಾಮ್

ಜನಪ್ರಿಯತೆ ಪಡೆದ ಧಾರಾವಾಹಿ
ಮಾಯಾಮೃಗ ಧಾರಾವಾಹಿ ಮಧ್ಯಾಹ್ನದ ಸ್ಲಾಟಿನಲ್ಲೇ ಜನಪ್ರಿಯತೆಯನ್ನು ಪಡೆಯಲಾರಂಭಿಸಿತು. ಅದಾದ ನಂತರ ದೂರದರ್ಶನದವರೇ ನನ್ನಲ್ಲಿ ರಿಕ್ವೆಸ್ಟ್ ಮಾಡಿಕೊಂಡು ಅದನ್ನು ಸಂಜೆ ಏಳು ಗಂಟೆ ಸ್ಲಾಟಿಗೆ ಹಾಕಿದರು - ಸೀತಾರಾಮ್

ಕಾರ್ಯಕ್ರಮದಲ್ಲಿ ಸೀತಾರಾಂ ಶಿಷ್ಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಎನ್ಎಸ್ ಗರಡಿಯಲ್ಲಿ ಪಳಗಿದ ಶಿಷ್ಯರು ನಾವು 'ಟಿಎನ್ಎಸ್ ಶಿಷ್ಯರು' ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು. ಅವರಿಗೆ ಸ್ವಲ್ಪ ಮುಂಗೋಪವಿದ್ದರೂ ಅವರಿಂದ ಕಲಿತದ್ದು ಬಹಳಷ್ಟು ಎಂದು ಗುರುಗಳನ್ನು ಹೊಗಳಿದ್ದಾರೆ.

ಬ್ಯಾಂಕ್ ಗ್ಯಾರಂಟಿ ಹಾಕಿ ಸಿಕ್ಕಿಹಾಕಿಕೊಂಡಿದ್ದೆ
ಸ್ನೇಹಿತನೊಬ್ಬನಿಗೆ ಬ್ಯಾಂಕ್ ಗ್ಯಾರಂಟಿ ಹಾಕಿ ಕೋರ್ಟಿನಿಂದ ನೋಟೀಸ್ ಕೂಡಾ ಪಡೆದಿದ್ದೆ. ಆ ಸಮಯದಲ್ಲಿ ಸ್ನೇಹಿತನ ಪರವಾಗಿ ನಿಂತೆ, ಫ್ಯಾಕ್ಟರಿ ಮತ್ತೆ ಆರಂಭವಾಯಿತು. ನೋಟೀಸ್ ಪಡೆದಿದ್ದ ಆ ಫ್ಯಾಕ್ಟರಿ ಈಗ ಚೆನ್ನಾಗಿ ನಡೆಯುತ್ತಿದ್ದು, ಹದಿನೈದು ಜನರಿಗೆ ಊಟ ಕೊಡುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ - ಟಿಎನ್ಎಸ್

ಮಾಳವಿಕ ಪಾತ್ರ
ಆರಂಭದ ನನ್ನ ಜೀವನದಲ್ಲಿ ನಾನು ಕಲ್ಪಿಸುವ ಪಾತ್ರವನ್ನು ಮಾಳವಿಕ ಮೂಲಕ ಮಾಡುವುದು ನನ್ನ ಉದ್ದೇಶವಾಗಿತ್ತು. ಅದಕ್ಕೆ ಮಾಳವಿಕ ಸ್ಪಂದಿಸಿದ ರೀತಿ ಊಹಿಸಲೂ ಅಸಾಧ್ಯ. ವಕೀಲ ಹುದ್ದೆ ನನ್ನ ನೆಚ್ಚಿನ ಹುದ್ದೆ, ಧಾರವಾಹಿ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಲು ಬಯಸುತ್ತೇನೆ - ಟಿಎನ್ಎಸ್
ಕಾರ್ಯಕ್ರಮದಲ್ಲಿ ಸೀತರಾಂ ಮುಕ್ತ..ಮುಕ್ತ..ಮುಕ್ತ ಮಾತುಕತೆ
ಕಾರ್ಯಕ್ರಮದಲ್ಲಿ ಸೀತರಾಂ ಮುಕ್ತ..ಮುಕ್ತ..ಮುಕ್ತ ಮಾತುಕತೆ


Click it and Unblock the Notifications











