ಉದಯ ಟಿವಿಯಲ್ಲಿ ಆರಂಭ ಆಗಲಿದೆ ಹೊಸ ಶೋ 'ತುತ್ತಾ ಮುತ್ತಾ'
ಕರ್ನಾಟಕದ ಹೆಮ್ಮೆಯ ವಾಹಿನಿಯಾದ ಉದಯ ಟಿವಿಯು ಹೊಸದೊಂದು ಕಾರ್ಯಕ್ರಮವನ್ನು ಜನತೆಗೆ ಪರಿಚಯಿಸಲು ಸಜ್ಜಾಗಿದೆ. ಉದಯ ವಾಹಿನಿಯ ಹತ್ತಾರು ಕ್ರಿಯಾಶೀಲ ರಿಯಾಲಿಟಿ ಶೋಗಳ ಪಟ್ಟಿಗೆ 'ತುತ್ತಾ ಮುತ್ತಾ' ಕಾರ್ಯಕ್ರಮ ಸೇರ್ಪಡೆಯಾಗಲಿದೆ.
ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯ ಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ.
ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ. ತಾರೆಯರ ಮಡದಿ ಮತ್ತು ತಾಯಂದಿರ ನಡುವೆ ನಡೆಯುವ ಜಟಾಪಟಿಯೇ 'ತುತ್ತಾ ಮುತ್ತಾ'. ಮುಂದೆ ಓದಿರಿ...

ಐದು ಲಕ್ಷ ಗೆಲ್ಲುವ ಅವಕಾಶ
ಆಟದಲ್ಲಿ ತಾರೆಯರ ತಾಯಿ ಒಂದು ಕಡೆ, ಹೆಂಡತಿ ಒಂದು ಕಡೆ ನಿಂತು ನಿರಂಜನ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಹನ್ನೆರಡು ಪ್ರಶ್ನೆಗಳಿಂದ ಐದು ಲಕ್ಷ ಗೆಲ್ಲುವ ಅವಕಾಶ ಇವರಿಗೆ ಇರುತ್ತದೆ. ಇದರಲ್ಲಿ ಸರಿಯಾಗಿ ಉತ್ತರ ಕೊಡುವವರು ಯಾರು ಎಂಬ ಆಯ್ಕೆ ಮಾತ್ರ ಬಂದ ತಾರೆಯರದ್ದು.

ಸಂಬಂಧಗಳ ಮುಕ್ತ ಚರ್ಚೆ
ಉತ್ತರ ತಪ್ಪಾದಲ್ಲಿ ಬರೀ ಒಂದು ಕಡೆಯಿಂದ ಮಾತ್ರವಲ್ಲದೆ, ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಹಣ ಕಡಿತವಾಗುತ್ತಾ ಬರುತ್ತದೆ. ತಾಯಿ, ಮಗ, ಸೊಸೆಯ ನಡುವಿನ ಬಾಂಧವ್ಯ, ಸಂಬಂಧಗಳ ಮುಕ್ತ ಚರ್ಚೆ ಹಾಗು ಪ್ರಶ್ನೆಗಳಿಗೆ ಉತ್ತರ ಕೊಡುವ ರೋಚಕತೆಯೇ ಈ 'ತುತ್ತಾ ಮುತ್ತಾ'

ಮನರಂಜನೆ ಅನಿಯಮಿತ
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ.

ಕುರಿ ಪ್ರತಾಪ್ ಕುಟುಂಬ
ಈ ಶೋನಲ್ಲಿ ವಿಧವಿಧವಾದ ಸವಾಲುಗಳನ್ನು ಹಾಕಲಾಗುತ್ತದೆ. ಇದನ್ನೆಲ್ಲಾ ಉತ್ತರಿಸಲು ಸಿನಿಮಾ ಮತ್ತು ಸಣ್ಣಪರದೆಯ ತಾರೆಯರು ಬರುತ್ತಾರೆ. ಸಂಗೀತ ನಿರ್ದೇಶಕ ಗುರುಕಿರಣ್, ಹಾಸ್ಯ ನಟ ಕುರಿ ಪ್ರತಾಪ್ ಈಗಾಗಲೇ ಈ ಆಟದಲ್ಲಿ ಭಾಗವಹಿಸಿರುವ ತಾರೆಯರು.

ಹಾಸ್ಯ ಸಾಗರ
ಗುರುಕಿರಣ್ ಅವರ ತಾಯಿಯ ಮುಗ್ಧತೆ, ಮಡದಿಯ ಮುದ್ದು ಮಾತುಗಳು, ಗುರುಕಿರಣ್ ರ ಹಾಡುಗಳು ಆ ಕಂತಿನ ವಿಶೇಷತೆಯಾದರೆ, ಕುರಿ ಪ್ರತಾಪ್ ರ ಸಂಚಿಕೆ, ಹಾಸ್ಯ ಸಾಗರವನ್ನೇ ಸುರಿಸುವುದರಲ್ಲಿ ಅನುಮಾನವೇ ಇಲ್ಲ. 'ತುತ್ತಾ ಮುತ್ತಾ' ಇದೇ ಶನಿವಾರದಿಂದ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











