ಸೋಮವಾರದಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭ: ಎಲ್ಲೆಲ್ಲಿ ಹೇಗೆ?
ಸುಮಾರು ಎರಡು ತಿಂಗಳಿನಿಂದ ಧಾರಾವಾಹಿಗಳ ಮರುಪ್ರಸಾರಗೊಳ್ಳುವ ಕಂತುಗಳನ್ನೇ ವೀಕ್ಷಿಸಿ ಬೇಸರಗೊಂಡಿರುವ ಕಿರುತೆರೆ ಪ್ರಿಯರಿಗೆ ಸಂತಸ ಸುದ್ದಿ ಸಿಕ್ಕಿದೆ. ಇದೇ 25ರಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ವಿವಿಧ ಭಾಷೆಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಧಾರಾವಾಹಿಗಳ ಶೂಟಿಂಗ್ ಪುನರಾರಂಭಕ್ಕೆ ಕೆಲವು ಷರತ್ತುಗಳೊಂದಿಗೆ ಅವಕಾಶ ನೀಡುತ್ತಿವೆ.
Recommended Video
ಸದ್ಯಕ್ಕೆ ಸಿನಿಮಾಗಳ ಚಿತ್ರೀಕರಣಕ್ಕೆ ಇನ್ನೂ ಅವಕಾಶ ನೀಡಿಲ್ಲ. ಕೆಲವು ರಾಜ್ಯಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಹಾಗೂ ಪ್ರೀ ಪ್ರೊಡಕ್ಷನ್ನ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಸರ್ಕಾರ ಮತ್ತು ಚಾನೆಲ್ಗಳು ನಿರ್ಮಾಪಕರಿಗೆ ವಿಧಿಸಿರುವ ಷರತ್ತುಗಳು ಮತ್ತು ಸೂಚನೆಗಳ ಸುದೀರ್ಘ ಪಟ್ಟಿಯ ಕುರಿತು ವ್ಯಾಪಕ ಚರ್ಚೆಗಳಾಗುತ್ತಿವೆ. ಮುಂದೆ ಓದಿ..

ಷರತ್ತುಬದ್ಧ ಅನುಮತಿ
ತಮಿಳುನಾಡು ಸರ್ಕಾರ ವಿವಿಧ ಷರತ್ತುಗಳೊಂದಿಗೆ ಚಿತ್ರೀಕರಣ ನಡೆಸಲು ಕಿರುತೆರೆ ನಿರ್ಮಾಪಕರಿಗೆ ಅನುಮತಿ ನೀಡಿದೆ. ಗುರುವಾರ ಕಿರುತೆರೆ ಮತ್ತು ಸಿನಿಮಾ ತಂತ್ರಜ್ಞರ ಒಕ್ಕೂಟ ಎಫ್ಇಎಫ್ಎಸ್ಐ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ, ಅನೇಕ ನಿರ್ಬಂಧ ಮತ್ತು ಷರತ್ತುಗಳೊಂದಿಗೆ ಧಾರಾವಾಹಿಗಳ ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ.

ಗರಿಷ್ಠ 20 ಮಂದಿಗೆ ಅವಕಾಶ
ಮನೆ ಅಥವಾ ಒಳಾಂಗಣ ಆಡಿಟೋರಿಯಂಗಳಲ್ಲಿ ಗರಿಷ್ಠ 20 ತಂತ್ರಜ್ಞರು ಹಾಗೂ ಕಲಾವಿದರನ್ನು ಇರಿಸಿಕೊಂಡು ಚಿತ್ರೀಕರಣ ನಡೆಸಬೇಕು. ಕಂಟೇನ್ಮೆಂಟ್ ವಲಯದಲ್ಲಿನ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವಂತಿಲ್ಲ. ಹಾಗೂ ಧಾರಾವಾಹಿ ತಂಡದವರು ಹೊರತುಪಡಿಸಿ ಅನ್ಯರಿಗೆ ಅಲ್ಲಿ ಅವಕಾಶ ನೀಡುವಂತಿಲ್ಲ. ಹಾಗೆಯೇ ಅಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ನಿರ್ಮಾಪಕರ ಜವಾಬ್ದಾರಿಯಾಗಿರುತ್ತದೆ.

ರಾಜ್ಯದಲ್ಲೂ ಸೋಮವಾರದಿಂದ ಆರಂಭ
ಕರ್ನಾಟಕದಲ್ಲಿಯೂ ಮೇ 25ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಕನ್ನಡ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ಜತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರು. ರಾಜ್ಯದಲ್ಲಿಯೂ ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, 20ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಕಲಾವಿದರು ಮತ್ತು ತಂತ್ರಜ್ಞರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ.

ಚಿತ್ರೀಕರಣ ಸ್ಥಳವೇ ಬದಲು
ಹಿಂದಿ ಕಿರುತೆರೆಯು ಹೆಚ್ಚಾಗಿ ಚಿತ್ರೀಕರಣ ಸಂಬಂಧಿಸಿದ ಚಟುವಟಿಕೆಗಳಿಗೆ ಮುಂಬೈಅನ್ನು ನೆಚ್ಚಿಕೊಂಡಿತ್ತು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಿದ್ದು, ಅದರಲ್ಲಿಯೂ ರಾಜಧಾನಿ ಮುಂಬೈ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ. ಹೀಗಾಗಿ ಅನೇಕ ಕಿರಿತೆರೆ ನಿರ್ಮಾಪಕರು ಮತ್ತು ಚಾನೆಲ್ ಕಾರ್ಯಕ್ರಮಗಳ ಮುಖ್ಯಸ್ಥರು ಚಿತ್ರೀಕರಣ ಸ್ಥಳವನ್ನು ಮುಂಬೈನಿಂದ ಕೊಲ್ಲಾಪುರಕ್ಕೆ ಬದಲಿಸಲು ಮುಂದಾಗಿದ್ದಾರೆ.


Click it and Unblock the Notifications











