ಟಿವಿ ಕಾರ್ಯಕ್ರಮ ನೋಡಿ ಬಾಲಕ ಆತ್ಮಹತ್ಯೆಗೆ ಯತ್ನ

ಗುರುವಾರ ರಾತ್ರಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ದೆವ್ವಗಳ ಕಾರ್ಯಕ್ರಮ ವೀಕ್ಷಿಸಿದ ಮೋಹನ್ (12) ಎಂಬ ಬಾಲಕ ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾನೆ. ಬಳಿಕ ಶುಕ್ರವಾರ ತನ್ನ ತಾಯಿಯ ಬಳಿ ತನ್ನನ್ನು ದೆವ್ವಗಳು ಹಿಂಸಿಸುತ್ತಿವೆ ಎಂದು ಹೇಳಿಕೊಂಡಿದ್ದಾನೆ.
ಮೋಹನ್ ತಾಯಿ ಮುನಿರತ್ನಮ್ಮ ಅದೆಲ್ಲಾ ನಿಜವಲ್ಲ. ಭಯ ಬೀಳಬೇಡ ಎಂದು ಮಗನಿಗೆ ಧೈರ್ಯ ತುಂಬಿದ್ದಾರೆ. ಆದರೂ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಆ ಬಾಲಕ ಸ್ನಾನಕ್ಕೆ ಹೋದವನು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ.
ಇದನ್ನು ಗಮನಿಸಿದ ಮನೆಯವರು ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಬಾಲಕನನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲದಿನಗಳ ಹಿಂದೆ ಟಿವಿ ಧಾರಾವಾಹಿ ನೋಡಿ ಅಜ್ಜಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದ ಕರುಣಾಜನಕ ಸುದ್ದಿಯನ್ನು ಒನ್ಇಂಡಿಯಾ ಕನ್ನಡ ಪ್ರಕಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೌಟುಂಬಿಕ ಧಾರಾವಾಹಿ ನೋಡಿ ಆ ಅಜ್ಜಿ ಆಘಾತಕ್ಕೊಳಗಾಗಿ ಮೃತಪಟ್ಟಿದ್ದರು.
ಧಾರಾವಾಹಿಯಲ್ಲಿನ ನಾಯಕಿಯನ್ನು ರೌಡಿಗಳು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡ ಹಿರಿಯ ಜೀವ ಕುಳಿತಲ್ಲೇ ಕುಸಿದುಬಿದ್ದು ಜೀವಬಿಟ್ಟಿತ್ತು. ಸಂಪೂರ್ಣ ಸುದ್ದಿ ಇಲ್ಲಿದೆ ಓದಿ. ಒಟ್ಟಿನಲ್ಲಿ ಟಿವಿ ಕಾರ್ಯಕ್ರಮಗಳು ಜನಸಾಮಾನ್ಯರ ಜೀವದಜೊತೆ ಚೆಲ್ಲಾಟವಾಡುತ್ತಿವೆ. ಈ ರೀತಿಯ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಬೇಕು ಎಂಬ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











