twitter
    For Quick Alerts
    ALLOW NOTIFICATIONS  
    For Daily Alerts

    ಗಾಯತ್ರಿ ಅವರಿಗೆ ಅನಂತ್ ಮೇಲೆ 'ಲವ್ ಅಟ್ ಫಸ್ಟ್ ಸೈಟ್' ಆಗಿದ್ದೆಲ್ಲಿ?

    By Suneetha
    |

    ನಿರ್ದೇಶಕ ಫಣಿ ರಾಮಚಂದ್ರ ಅವರ ಜೊತೆ 'ಗಣೇಶನ ಮದುವೆ' ಎಂಬ ಕಾಮಿಡಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಅನಂತ್ ನಾಗ್ ಅವರು ರೋಮ್ಯಾನ್ಸ್ ನಿಂದ ಕೊಂಚ ಕಾಮಿಡಿ ಪಾತ್ರಗಳತ್ತ ಮುಖ ಮಾಡಿದರು.

    'ಬೆಳದಿಂಗಳ ಬಾಲೆ', 'ಚಂದನದ ಗೊಂಬೆ', 'ನಾ ನಿನ್ನ ಬಿಡಲಾರೆ', 'ಬಯಲು ದಾರಿ' ಮುಂತಾದ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿ- ನಟಿಸಿ ತುಂಬಾ ಬೋರಾಗಿ ಹೋಗಿತ್ತು ಎನ್ನುವ ಅನಂತ್ ಅವರು, ಆಮೇಲೆ ನಿರ್ದೇಶಕ ಫಣಿ ರಾಮಚಂದ್ರ ಅವರ ಜೊತೆ 'ಗಣೇಶನ ಮದುವೆ', 'ಗೌರಿ ಗಣೇಶ', 'ಗಣೇಶನ ಗಲಾಟೆ' ಹೀಗೆ ಹಲವಾರು ಗಣೇಶನನ್ನು ಇಟ್ಟುಕೊಂಡು ಸೀರೀಸ್ ಸಿನಿಮಾ ಮಾಡಿದರು.[ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್]

    ಈ ನಡುವೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ 'ಬೆಳದಿಂಗಳ ಬಾಲೆ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮಗಾದ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದಾರೆ.[ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?]

    ಅನಂತ್ ಅವರ ಸುಂದರ ಸಂಸಾರದ ಗುಟ್ಟು ಕೂಡ ಈ ವೀಕೆಂಡ್ ನಲ್ಲಿ ರಟ್ಟಾಗಿದ್ದು, ಅವರು ತಮ್ಮ ಲವ್ ಅಟ್ ಫಸ್ಟ್ ಸೈಟ್ ಬಗ್ಗೆ ಹಂಚಿಕೊಂಡಿದ್ದಾರೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

    'ಬೆಳದಿಂಗಳ ಬಾಲೆ' ಚಿತ್ರದ ಬಗ್ಗೆ

    'ಬೆಳದಿಂಗಳ ಬಾಲೆ' ಚಿತ್ರದ ಬಗ್ಗೆ

    ಇಡೀ ಸಿನಿಮಾದಲ್ಲಿ ಬರೀ ಧ್ವನಿ ಮಾತ್ರ. ಸಿನಿಮಾ ನೋಡುತ್ತಿದ್ದವರಿಗೆ ಹಾಗೂ ವೀಕ್ಷಕರಿಗೆ ವಾಯ್ಸ್ ಸಿಗುತ್ತಿತ್ತು ಆದರೆ ನನಗೆ ಆ ವಾಯ್ಸ್ ಸಿಗ್ತಾ ಇರಲಿಲ್ಲ. ನಿರ್ದೇಶಕ ಸುನೀಲ್ ಕುಮಾರ್ ಅವರು ಕ್ಯಾಮಾರ ನೋಡಬೇಕು, ಬಿಟ್ಟರೆ ನನ್ನ ಅಭಿನಯ ನೋಡಬೇಕು. ಪಕ್ಕದಲ್ಲಿ ಸಹಾಯಕರು ಸ್ಕ್ರಿಪ್ಟ್ ಅನ್ನು ಬ್ಲ್ಯಾಂಕ್ ಆಗಿ ಉದ್ದಕ್ಕೆ ಓದಿಕೊಂಡೇ ಹೋಗುತ್ತಿದ್ದರು. ಆಗ ನನಗೆ ತುಂಬಾ ಸಾರಿ ಸಿಟ್ಟು ಬಂದು 'ನೀವು ಹೀಗೆ ಓದುತ್ತಾ ಹೋದ್ರೆ ನಾನು ಹೆಂಗಯ್ಯ ಆಕ್ಟ್ ಮಾಡೋದು ಅಂತ ಸೆಟ್ ನಲ್ಲಿದ್ದ ಎಲ್ಲರ ಮೇಲೆ ರೇಗಾಡುತ್ತಿದ್ದೆ'. - ಅನಂತ್[ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ]

    ಈಗೀನ ಯುವನಟರಿಗೆ ಏನು ಹೇಳೋಕೆ ಇಷ್ಟಪಡ್ತೀರಾ

    ಈಗೀನ ಯುವನಟರಿಗೆ ಏನು ಹೇಳೋಕೆ ಇಷ್ಟಪಡ್ತೀರಾ

    ಪ್ರತಿಯೊಬ್ಬರಲ್ಲೂ ಒಂದು ವೈಶಿಷ್ಟ್ಯ ಇದ್ದೇ ಇರುತ್ತೆ, ಅದನ್ನು ಅವರು ಹೈಲೈಟ್ ಮಾಡಿಕೊಂಡು ತೋರಿಸಬೇಕು. ಒಂದೇ ಸೀನನ್ನು ನಾವು 10 ಜನಕ್ಕೆ ಕೊಟ್ಟರೆ, ಒಬ್ಬೊಬ್ಬರ ಅಭಿನಯದಲ್ಲೂ ಒಳ್ಳೆತನ ಇರಬಹುದು. ಒಂದು ಸಮಯದಲ್ಲಿ ನಾನು ಕೂಡ ಏನೂ ಅನುಭವ ಇಲ್ಲದವರ ಹಾಗೆ ಇದ್ದೆ. ಸ್ಟೇಜ್ ಮೇಲೆ ಹೋಗಬೇಕು ಅಂದರೆ ಹೊಟ್ಟೆಯಲ್ಲಿ ಒಂಥರಾ ಆಗೋದು. ಹಾಗೆ ನೋಡಿದರೆ ಸಿನಿಮಾದಲ್ಲಿ ನಟಿಸೋದು ತುಂಬಾ ಸುಲಭ. ಅಲ್ಲಿ ಇನ್ನೊಂದು ಟೇಕ್ ಇರುತ್ತೆ. ಆದರೆ ನಾಟಕದ ಸ್ಟೇಜ್ ನಲ್ಲಿ ಹಾಗಲ್ಲ. ಬೇರೆ ಅಯ್ಕೆ ಇಲ್ಲ ಮಾಡಲೇಬೇಕು. ಎಲ್ಲರಿಗೂ ಅವರದೇ ಆದ ಭಾವಾಭಿನಯ ಇದೆ. ಆದ್ದರಿಂದ ನನಗೆ ಎಲ್ಲವೂ ಗೊತ್ತು ನಾನೇ ಮಾಡಿದ್ದು ಸರಿ ಅಂತ ನಾನು ಯಾರಿಗೂ ಹೇಳೋಕೆ ಹೋಗಲ್ಲ. - ಅನಂತ್

    'ನಾರದ ವಿಜಯ' ಚಿತ್ರದ ಬಗ್ಗೆ

    'ನಾರದ ವಿಜಯ' ಚಿತ್ರದ ಬಗ್ಗೆ

    'ನಾರದ ವಿಜಯ' ಸಿನಿಮಾ ಮಾಡುವಾಗ ನಾನು ಒಂದು ಸೆಟ್ ನಲ್ಲಿದ್ದೆ, ಇನ್ನೊಂದು ಸೆಟ್ ನಲ್ಲಿ ಶಂಕರ್ ಇದ್ದ. ಅವನು ಗಾಯತ್ರಿ ಜೊತೆ ನಟನೆ ಮಾಡುತ್ತಿದ್ದ. ಆಗ ಶಂಕರ್ 'ನನ್ನ ಅಣ್ಣ ಪಕ್ಕದ ಸೆಟ್ ನಲ್ಲೇ ಇದ್ದಾನೆ ನಿನಗೆ ಪರಿಚಯ ಮಾಡಿ ಕೊಡುತ್ತೇನೆ ಬಾ' ಅಂತ ಗಾಯತ್ರಿಗೆ ಹೇಳಿ ಕರ್ಕೊಂಡು ಬಂದಿದ್ದಾನೆ. ಅವಳು ನನ್ನನ್ನು ನಾರದ ವೇಷದಲ್ಲಿ ನೋಡಿ ಇದು ಯಾರಿದು ಅಂತ ಕನ್ ಫ್ಯೂಶನ್ ಮಾಡಿಕೊಂಡಿದ್ದಾಳೆ. ಆದರೆ ಮೊದಲು ನೋಡಿದ ಆ ನಾರದ ಅವಳ ತಲೆಯಲ್ಲಿ ಕೂತಿತ್ತು ಅಂತ ಅನಿಸುತ್ತೆ. - ಅನಂತ್

    ಲವ್ ಅಟ್ ಫಸ್ಟ್ ಸೈಟ್

    ಲವ್ ಅಟ್ ಫಸ್ಟ್ ಸೈಟ್

    31, ಡಿಸೆಂಬರ್ 1979, ರಾತ್ರಿ ಲಕ್ಷ್ಮಿ, ಶಂಕರ್ ಎಲ್ಲಾ ಸಣ್ಣ ಪಾರ್ಟಿ ಮಾಡೋಣ ಅಂತ ಹೇಳಿದ್ರು ನಾನು ಮಾಡೋಣ ಅಂದೆ. ಆವಾಗ ಲಕ್ಷ್ಮಿ ನಾನು ಹೋಗಿ ಒಬ್ಬರನ್ನು ಕರ್ಕೊಂಡು ಬರ್ತೀನಿ ಅಂದ್ರು. ನಾನು ಅಯ್ತು ಎಂದೆ. ಆವಾಗ ಅವರು ಗಾಯತ್ರಿನಾ ಕರ್ಕೊಂಡು ಬಂದ್ರು. ಅದೇ ಫಸ್ಟ್ ನಾನು ಅವಳನ್ನು, ಅವಳು ನನ್ನನ್ನು ಸರಿಯಾಗಿ ನೋಡಿದ್ದು. ಆದರೆ ನಾರದನಾಗಿ ಅಲ್ಲ ಒಬ್ಬ ಮಾಮೂಲಿ ಮನುಷ್ಯನಾಗಿ ಮೇಕಪ್ಪ್ ಇಲ್ಲದೆ. ಆವಾಗಲೇ ನನ್ನ ತಲೆಯಲ್ಲಿ ಏನೇನೋ ಆಗಿತ್ತು ಅದನ್ನು ನಾನು ಹೇಳಲ್ಲ ಬಿಡಿ. ಒಟ್ಟು ನಾರದ ವಿಜಯ ಅಂದಾಗ ನನಗೆ ಆ ಸಂದರ್ಭ ನೆನಪಾಗುತ್ತೆ. - ಅನಂತ್

    ಅಪ್ಪನಾಗಿ ಅನಂತ್

    ಅಪ್ಪನಾಗಿ ಅನಂತ್

    ತುಂಬಾ ಕಾಳಜಿ ವಹಿಸುವ ಅಪ್ಪ, ತುಂಬಾ ಪ್ರೀತಿ-ಪ್ರೇಮದಿಂದ ನೋಡಿಕೊಳ್ಳುವ ಗಂಡ. ನಾವು ನಮ್ಮ ಮಗಳನ್ನು ಬೆಳೆಸುವಾಗ ಅನಂತ್ ಅವರು ಎಲ್ಲದರಲ್ಲೂ ನನ್ನ ಜೊತೆ ಇದ್ದರು. ಮಗಳಿಗೆ ಯಾವುದಕ್ಕೂ, ಯಾವುದರಲ್ಲಿಯೂ ಬಲವಂತ ಮಾಡುತ್ತಿರಲಿಲ್ಲ. ಹೀಗೆ ಇರಬೇಕು ಅಂತ ಯಾವತ್ತೂ ಒತ್ತಡ ಹಾಕಿಲ್ಲ. ಹೀಗೆ ಮಾಡಬೇಕು, ಹಾಗೆ ಮಾಡಬೇಕು, ನೀನು ಇದನ್ನೇ ಸಾಧಿಸಬೇಕು ಅಂತ ಮಗಳಿಗೆ ಹೇಳೋ ಅಪ್ಪ ಆಗಿಲ್ಲ ಅನಂತ್ ಅವರು.- ಗಾಯತ್ರಿ

    ಗಂಡನಾಗಿ ಅನಂತ್

    ಗಂಡನಾಗಿ ಅನಂತ್

    ನನ್ನ ಆಸೆ-ಆಕಾಂಕ್ಷೆಗಳಿಗೂ ಬೆಲೆ ಕೊಟ್ಟರು. ನಾನು ಮದುವೆ ಆದ ಮೇಲೆ ಸಿನಿಮಾ ಮಾಡಲ್ಲ ಅಂತ ನಾನೇ ಹೇಳಿದ್ದು. ಅದಕ್ಕೆ ಅವರೂ ಸಪೋರ್ಟ್ ಮಾಡಿದ್ದರು. ಆಮೇಲೆ ಇನ್ನೊಂದು ವಿಷ್ಯಾ ಅಂದರೆ ಅವರಿಗೆ ಕೋಪ ತುಂಬಾ ಬರುತ್ತೆ, ಬಂದಾಗ ಮಾತ್ರ ಜೋರಾಗಿ ವಾಯ್ಸ್ ಬರುತ್ತೆ. - ಗಾಯತ್ರಿ

    ಮದುವೆ ಬಗ್ಗೆ..

    ಮದುವೆ ಬಗ್ಗೆ..

    ಒಂದು ದಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ವಾಪಸ್ ಕಾರಲ್ಲಿ ಬರ್ತಾ ಇರಬೇಕಾದ್ರೆ, ಅವರು ಸಡನ್ ಆಗಿ ಮದುವೆ ಆಗೋಣ ಅಂದ್ರು. ನಾನು ಓಕೆ ಅಂದೆ. ಆದರೆ ಅವರು ಮದುವೆ ತುಂಬಾ ಸಿಂಪಲ್ ಆಗಿರಬೇಕು ನೀನು ಇನ್ವಿಟೇಶನ್ ಕಾರ್ಡ್ ಪ್ರಿಂಟ್ ಮಾಡಿಸೋದೆಲ್ಲಾ ಬೇಡ ಅಂದಾಗ ನಾನು ಆಯಿತು ಅಂದೆ. ಆಮೇಲೆ ಮದುವೆ ಆದ ಮೇಲೆ ಚಿತ್ರಾಪುರ ಮಠಕ್ಕೆ ಹೋಗಿ ಅಲ್ಲಿ ನಮಸ್ಕಾರ ಮಾಡಿ ಬಂದ್ವಿ. ಅನಂತ್ ಅಂದ್ರೆ ಅಷ್ಟೊಂದು ಸಿಂಪಲ್ ಮನುಷ್ಯ, ಅವರಿಗೆ ಗ್ರ್ಯಾಂಡ್ ಆಗಿರೋದು ಇಷ್ಟ ಇಲ್ಲ. - ಗಾಯತ್ರಿ

    ಅನಂತ್ ಆರೋಗ್ಯಕ್ಕೆ ಗಾಯತ್ರಿ ಅವರ ಅಡುಗೆ ಕಾರಣ

    ಅನಂತ್ ಆರೋಗ್ಯಕ್ಕೆ ಗಾಯತ್ರಿ ಅವರ ಅಡುಗೆ ಕಾರಣ

    ಅನಂತ್ ನಾಗ್ ಅವರು ಈಗಲೂ ತುಂಬಾ ಎನರ್ಜಿಟಿಕ್ ಆಗಿರಲು ಕಾರಣ ಅವರ ಪತ್ನಿ ಗಾಯತ್ರಿ ಅವರು ಮಾಡುವ ರುಚಿ ರುಚಿಯಾದ ಅಡುಗೆಗಳು. ಎಲ್ಲಾ ಥರದ ಅಡುಗೆಗಳನ್ನು ಮಾಡುತ್ತಾರೆ. ಅನಂತ್ ಅವರು ಶೂಟಿಂಗ್ ನಲ್ಲಿದ್ದರೂ ಪ್ರತೀ ದಿನ ಕಾಲ್ ಮಾಡಿ ಇವತ್ತು ಏನು ಅಡುಗೆ ಮಾಡಬೇಕು ಅಂತ ಕೇಳಿ ಮಾಡ್ತಾರಂತೆ ಗಾಯತ್ರಿ ಅವರು. ಯಾಕಂದ್ರೆ ಅನಂತ್ ಅವರಿಗೆ ಬಿಸಿ ಬಿಸಿ ಅಡುಗೆ ಅಂದರೆ ಇಷ್ಟ. ಇದು ಅನಂತ್ ಅವರ ಆರೋಗ್ಯದ ಗುಟ್ಟು.

    ರಾಜಕೀಯದ ಬಗ್ಗೆ

    ರಾಜಕೀಯದ ಬಗ್ಗೆ

    ರಾಜಕೀಯವನ್ನು ನಾನು ಯಾವತ್ತೂ ದೂರದಿಂದಲೇ ಕಂಡವನು. ನೀವು ಎಷ್ಟರಮಟ್ಟಿಗೆ ರಾಜಕೀಯವನ್ನು ಹೊಲಸು ಅಂತ ಅಂದುಕೊಳ್ಳುತ್ತೀರಾ ಅಲ್ಲಿಯವರೆಗೆ ಅದು ಹೊಲಸಾಗಿಯೇ ಇರುತ್ತದೆ. ನೀವು ಬಂದರೆ ತಾನೇ ಬದಲಾವಣೆ ತರೋದು. ಅಂತ ಆಗಿನ ಒಂದು ಹುಮ್ಮಸ್ಸಿನಲ್ಲಿ ಯುವಜನತೆಗೆ ಪ್ರಚೋದನೆ ನೀಡುವಂತಹ ಸಂದರ್ಭದಲ್ಲಿ ನಾನು ರಾಜಕೀಯಕ್ಕೆ ಒಲವು ತೋರಿಸಿದೆ. - ಅನಂತ್

    ಬೇಸತ್ತು ರಾಜಕೀಯಕ್ಕೆ ಗುಡ್ ಬೈ

    ಬೇಸತ್ತು ರಾಜಕೀಯಕ್ಕೆ ಗುಡ್ ಬೈ

    ನಮ್ಮ ಪಕ್ಷದ ಒಳಗಡೆ ತುಂಬಾ ಒಳ ಜಗಳ ಇತ್ತು. ಒಟ್ಟು ಒಂದು ಅಮೀಬಾ ಥರ ಆಗಿ ಹೋಯ್ತು. ಒಂದು ಇನ್ನೊಂದಾಗಿ ಬೇರೆ ಬೇರೆ ಆಯ್ತು, ಏನೋ ಮಾಡಬೇಕು, ಸಾಧಿಸಬೇಕು, ಬದಲಾವಣೆ ಮಾಡಬೇಕು ಅಂತ 20ರ ಹರೆಯದಲ್ಲಿ ಇದ್ದ ಉತ್ಸಾಹ ದೂರವಾಗಿ ಬೇಸತ್ತು ಬಿಟ್ಟೆ. - ಅನಂತ್

    ಸೀರಿಯಲ್ ಜರ್ನಿ

    ಸೀರಿಯಲ್ ಜರ್ನಿ

    ಶಂಕರ್ 'ಮಾಲ್ಗುಡಿ ಡೇಸ್' ಶುರು ಮಾಡಿದಾಗಿನಿಂದ ಆರಂಭ ಆಯ್ತು. ಆನಂತರ ಪ್ರಕಾಶ್ ಬೆಳವಾಡಿ ಅವರು 'ಗರ್ವ' ಧಾರಾವಾಹಿಯಲ್ಲಿ ಮಾಡ್ತೀರಾ ಅಂತ ಬಂದಾಗ ಅವರ ಕಾನ್ಸೆಪ್ಟ್ ಕೇಳಿ ತುಂಬಾ ಸಂತೋಷ ಆಯ್ತು. ಅದರಲ್ಲಿ ದೇಶ ಪ್ರೇಮವನ್ನು ಸಾರುವ ವಿಷಯಗಳು ಇದ್ದಿದ್ದರಿಂದ ನಾನೊಬ್ಬ ಭಾರತೀಯ ಅನ್ನೋದು ಹೇಳಿಕೊಳ್ಳಲು 'ಗರ್ವ' ಆಗಿತ್ತು. - ಅನಂತ್

    ಮಗಳ ಬಗ್ಗೆ..

    ಮಗಳ ಬಗ್ಗೆ..

    ಅವಳು ವಿದ್ಯಾರ್ಥಿನಿಯಾಗಿದ್ದ ತುಂಬಾ ಚೆನ್ನಾಗಿ ಓದುತ್ತಿದ್ದಳು. ನೊಡೋಕೆ ಚಂದ ಇದ್ದಾಳೆ. ಎಷ್ಟೋ ಜನ ಅವಳನ್ನು ನೋಡಿ ಅವಳ ತಾಯಿಯನ್ನು ನೋಡಿದ ಹಾಗೆ ಆಗುತ್ತೆ ಅಂದಿದ್ದರು. ಅವಳು ಮನೆಯಲ್ಲಿ ಡ್ಯಾನ್ಸ್ ಮಾಡೋಳು, ಆಶ್ರಮಕ್ಕೆ ಬಂದಾಗ ಹಾರ್ಮೋನಿಯಂ ಬಾರಿಸಿ ಭಜನೆಗಳನ್ನು ಹಾಡುತ್ತಾಳೆ. ನಾನು ಮುಂಬೈನಲ್ಲಿ ಅನುಭವಿಸಿದ ಕಷ್ಟವನ್ನು ಅವಳು ಅನುಭವಿಸಬಾರದು ಅನ್ನೋ ರೀತಿಯಲ್ಲಿ ಬೆಳೆಸಿದ್ವಿ. ಅವಳಿಗೆ ಕಷ್ಟ ಕಾರ್ಪಣ್ಯದ ಬಗ್ಗೆ ಅರಿವಾಗದ ರೀತಿಯಲ್ಲಿ ನೋಡಿಕೊಂಡೆ. - ಅನಂತ್

    ಕಾರು ಹೈಜಾಕ್ ಮಾಡಿದ್ರು

    ಕಾರು ಹೈಜಾಕ್ ಮಾಡಿದ್ರು

    ಒಂದು ದಿನ ಬೆಳಗ್ಗೆ ನಾನು ನನ್ನ ಮಗಳು ಕಾರಲ್ಲಿ ಹೋಗ್ತಾ ಇದ್ವಿ. ಆವಾಗ ಇಬ್ಬರು ಹುಡುಗರು ನಮ್ಮ ಕಾರನ್ನು ಅಡ್ಡ ಹಾಕಿದ್ರು. ಒಬ್ಬನ ಕೈಯಲ್ಲಿ ಚಾಕು, ಇನ್ನೊಬ್ಬನ ಕೈಯಲ್ಲಿ ನಾಡ ಬಾಂಬ್ ಇದೆ. ಅವರ ಪ್ಲಾನ್ ಏನಿತ್ತೋ ನನ್ಗೆ ಗೊತ್ತಿಲ್ಲ, ಅವರಿಗೆ ನಾನು ಕಾರಲ್ಲಿ ಇದ್ದ ವಿಷಯ ಗೊತ್ತಿರಲಿಲ್ಲ. ನಮ್ಮ ಮನೆಯ ಗೇಟ್ ಮುಂದೆನೇ ಈ ಘಟನೆ ನಡೆದಿದ್ದು, ಕಾರಿನಿಂದ ಇಳಿಯಿರಿ ಇಲ್ಲಾಂದ್ರೆ ಬಾಂಬ್ ಬ್ಲಾಸ್ಟ್ ಮಾಡ್ತೀವಿ ಅಂದ್ರು. ಆವಾಗ ನಾನು ಒಬ್ಬನನ್ನು ಎಳೆದು ಅವನಿಗೆ ಹೊಡೆದೆ ಇನ್ನೊಬ್ಬ ಓಡಿ ಹೋದಾಗ ಅವನನ್ನು ನನ್ನ ಡ್ರೈವರ್ ಕೈಯಲ್ಲಿ ಛೇಸ್ ಮಾಡಲು ಹೇಳಿದೆ. ಆ ಘಟನೆ ಆದ ಮೇಲೆ ನಮಗೆ ತುಂಬಾ ಭಯ ಅದಕ್ಕೆ ಮಗಳಿಗೆ ಆಗಾಗ ಫೋನ್ ಮಾಡಿ ವಿಚಾರಿಸಿಕೊಳ್ಳೋದು. - ಅನಂತ್

    67 ವರ್ಷದ ಜರ್ನಿ ಬಗ್ಗೆ

    67 ವರ್ಷದ ಜರ್ನಿ ಬಗ್ಗೆ

    ಮೊದಲು ಮುಂಬೈನಲ್ಲಿ ಇದ್ದ ದಿನಗಳಲ್ಲಿ ಮನಸ್ಸು ಒಂದರಿಂದ ಇನ್ನೊಂದು ಕಡೆ ಓಲಾಡ್ತಾ ಇತ್ತು. ಗೊತ್ತು-ಗುರಿ ಇಲ್ಲದೆ ಅತ್ತಿಂದಿತ್ತ ಓಡಾಡ್ತಾ ಇತ್ತು ಈಗ ಶಾಂತವಾಗಿದೆ. ಸದ್ಯದಲ್ಲೇ 30 ವರ್ಷದ ಮ್ಯಾರೇಜ್ ಆನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದ್ದೇನೆ. ಮಗಳ ಮದುವೆ ಒಳ್ಳೆ ಕಡೆ ಆಗಿದೆ. ಇನ್ನೇನೂ ಚಿಂತೆ ಇಲ್ಲ. ನಾನು ಈಗ ಕಾಯುತ್ತಿರುವುದು ಮೋಕ್ಷಕ್ಕಾಗಿ ಮಾತ್ರ. ನಾನು ಕಣ್ಣು ಮುಚ್ಚಿದರೆ ನನ್ನ ಕಣ್ಣ ಮುಂದೆ ಪ್ರಕ್ಷುಬ್ದವಾದ ಸಮುದ್ರ ಬರೋದಿಲ್ಲ, ಶಾಂತವಾದ ಸಮುದ್ರ ಬರುತ್ತದೆ.

    English summary
    Anant Nag, one of the finest actors of Kannada Film Industry, shares his life journey in Weekend With Ramesh, reality show in Zee Kannada channel. Story of his love with Gayatri, daughter's upbringing is unfolded in this episode.
    Tuesday, March 8, 2016, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X