ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು
Recommended Video
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ, ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ಈಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಅವರ ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದೆ.
ಇದೀಗ ಕಾರ್ಯಕ್ರಮದ ಮೊದಲ ಪ್ರೊಮೋವನ್ನು ಜೀ ಕನ್ನಡ ವಾಹಿನಿ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಸುಮಲತಾ ಅವರನ್ನು ಸಾಧಕರ ಸೀಟ್ ಮೇಲೆ ಕೂರಿಸಿದ್ದು, ವೀಕ್ಷಕರಿಂದ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಅಂಬರೀಶ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈಗ ಸುಮಲತಾ ಸರದಿ ಬಂದಿದೆ. ಚುನಾವಣೆ ಗೆದ್ದ ಕೆಲವೇ ದಿನಗಳಲ್ಲಿ ಅವರ ಸಂಚಿಕೆ ಪ್ರಸಾರ ಆಗುತ್ತಿದ್ದು, ಒಂದಷ್ಟು ಕುತೂಹಲ ಇದೆ.
ಅಂಬರೀಶ್ ನಿಧನದ ನೋವು, ರಾಜಕೀಯ ಪ್ರವೇಶ, ದರ್ಶನ್, ಯಶ್ ಮತ್ತು ರಾಕ್ ಲೈನ್ ವೆಂಕಟೇಶ್ ಸಹಕಾರ, ಮಂಡ್ಯದ ಗೆಲುವು ಹೀಗೆ ಅನೇಕ ವಿಷಯಗಳನ್ನು ಮುಕ್ತವಾಗಿ ಸುಮಲತಾ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಅಂಬಿ ನೆನೆದು ಸುಮಲತಾ ಕಣ್ಣೀರು
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅಂಬರೀಶ್ ರನ್ನು ಸುಮಲತಾ ನೆನೆದಿದ್ದಾರೆ. ''ಅಂದು ಟಿವಿಯಲ್ಲಿ ನ್ಯೂಸ್ ಬರುತ್ತಿತ್ತು. ಅದನ್ನು ನೋಡಿ ಅವರು ಕಣ್ಣಲ್ಲಿ ನೀರು ಹಾಕಿದರು. ಊಟ ಮಾಡಲ್ಲ ಎಂದು ಸ್ವಲ್ಪ ಹೊತ್ತು ಮಲಗಿಕೊಳ್ಳಲು ಹೋದರು. ಅಷ್ಟೇ...'' ಎಂದು ಅಂಬರೀಶ್ ನಿಧನ ವಿಷಯವನ್ನು ಹೇಳಿಕೊಳ್ಳುವಾಗ ಸುಮಲತಾ ಕಣ್ಣೀರು ಹಾಕಿದ್ದಾರೆ.

ಇದು ಅಂಬರೀಶ್ ಅವರ ಗೆಲುವು
''ಇದು ಅಂಬರೀಶ್ ಅವರಿಗೆ ಬಿದ್ದ ಓಟುಗಳು. ಇದು ಅಂಬರೀಶ್ ಅವರ ಗೆಲುವು. ನಾನು ನನ್ನ ಜೀವನದಲ್ಲಿ ಯಾವುದನ್ನು ಪ್ಲಾನ್ ಮಾಡಿ ಮಾಡಿಲ್ಲ. ಎಲ್ಲವೂ ಅಂದುಕೊಳ್ಳದೆ ಆಗಿದೆ. ನನ್ನ ಜೀವನದಲ್ಲಿ ಹೊಸ ತಿರುವನ್ನು ಎಲ್ಲೋ ಅಂಬರೀಶ್ ಅವರೇ ನಿಂತುಕೊಂಡು ಮಾಡುತ್ತಿದ್ದಾರೆ.'' ಎಂದು ಸುಮಲತಾ ಹೇಳಿದ್ದಾರೆ.

ಶೋ ನಲ್ಲಿ ಅಭಿಷೇಕ್, ರಾಕ್ ಲೈನ್ ವೆಂಕಟೇಶ್
ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಸುಮಲತಾ ಪ್ರೀತಿಯ ಪುತ್ರ ಅಭಿಷೇಕ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಭಾಗಿಯಾಗಿದ್ದಾರೆ. ''ದರ್ಶನ್ ಮತ್ತು ಯಶ್ ನಿಂತುಕೊಂಡು ಮಾಡಿರುವ ಕೆಲಸ ಜೀವನದಲ್ಲಿ ಮರೆಯಲು ಆಗವುದಿಲ್ಲ.'' ಎಂದು ಜೋಡೆತ್ತುಗಳ ತ್ಯಾಗಕ್ಕೆ ಸುಮಲತಾ ಧನ್ಯವಾದ ತಿಳಿಸಿದ್ದಾರೆ.
ಇದೇ ಶನಿವಾರ ಪ್ರಸಾರ
ಸುಮಲತಾ ಅಂಬರೀಶ್ ಅವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಇದೇ ಶನಿವಾರ ರಾತ್ರಿ 9.30 ಪ್ರಸಾರ ಆಗಲಿದೆ. ಪ್ರೊಮೋ ನೋಡಿದ ವೀಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಭಾನುವಾರ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಸಂಚಿಕೆ ಪ್ರಸಾರ ಆಗಲಿದೆ.


Click it and Unblock the Notifications











