ಡೈನಾಮಿಕ್ ಹೀರೋ ದೇವರಾಜ್ ರವರ ನಿಜ ಬದುಕಿನ ಕಷ್ಟದ ಕಥೆ
ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಪೊಲೀಸ್ ಅಧಿಕಾರಿ ಪಾತ್ರಗಳಿಂದ ಜನರ ಅಚ್ಚುಮೆಚ್ಚಿನ ನಟರಾದವರು ಡೈನಾಮಿಕ್ ಹೀರೋ ದೇವರಾಜ್.
ಚಿಕ್ಕವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡು, ಓದನ್ನ ಅರ್ಧಕ್ಕೆ ನಿಲ್ಲಿಸಿ, ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ ದೇವರಾಜ್ ಗೆ 'ಹೀರೋ' ಆಗುವ ಕನಸು ಎಂದೂ ಇರ್ಲಿಲ್ಲ.!
ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಸಿಕ್ಕ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾ ಹಂತಹಂತವಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದ ದೇವರಾಜ್ ರವರ ನಿಜ ಬದುಕಿನ ದರ್ಶನವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. [ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ]
ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ದೇವರಾಜ್ ರವರ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ದೇವರಾಜ್ ಕುರಿತು.....
ಜನ್ಮ ದಿನಾಂಕ - ಸೆಪ್ಟೆಂಬರ್ 20, 1953
ಊರು - ಲಿಂಗರಾಜಪುರ, ಬೆಂಗಳೂರು
ತಂದೆ - ರಾಮಚಂದ್ರಪ್ಪ, ತಾಯಿ - ಕೃಷ್ಣಮ್ಮ
ಸಹೋದರ - ಮೇಘರಾಜ್
ಪತ್ನಿ - ಚಂದ್ರಲೇಖ
ಮಕ್ಕಳು - ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್

ತಾಯಿಯೇ ಎಲ್ಲಾ...
''ನಾನು ಇನ್ನೂ ಮೂರು ತಿಂಗಳು ಮಗುವಾಗಿರುವಾಗಲೇ ನನ್ನ ತಂದೆ ತೀರಿಕೊಂಡರಂತೆ. ಮಲೇರಿಯಾ ಬಂದು ತೀರಿಹೋದರು ಅಂತ ನನ್ನ ತಾಯಿ ಹೇಳ್ತಿದ್ರು. ಅವರು ITC ಫ್ಯಾಕ್ಟರಿಯಲ್ಲಿ Welfare Department ನಲ್ಲಿದ್ದರು. ನನಗೆ ತಂದೆಯ ಭಾಗ್ಯ ದೇವರು ಕೊಡ್ಲಿಲ್ಲ. ತಾಯಿಯ ಆಶ್ರಯದಲ್ಲೇ ಬೆಳೆದವನು. ನಾನು ಇವತ್ತು ಏನಾಗಿದ್ದೀನಿ ಎಲ್ಲದಕ್ಕೂ ಕಾರಣ ನನ್ನ ತಾಯಿ'' - ದೇವರಾಜ್

ಡ್ಯಾಡಿ ಎಲ್ಲಿ?
''ದೇವರಾಜ್ ಅಂದ್ರೆ ದೇವರಂತ ಮಗು ಅದು. ಜಾಸ್ತಿ ತೊಂದರೆ ಕೊಟ್ಟ ಮಗುನೇ ಅಲ್ಲ. ಡ್ಯಾಡಿ ಎಲ್ಲಿ ಅಂತ ಕೇಳುವವನು. ಅದಕ್ಕೆ ಏನು ಹೇಳೋದು ಅಂತ ಗೊತ್ತಾಗ್ತಿರ್ಲಿಲ್ಲ. ಆ ಕೊರಗು ಅವನಿಗೆ ಯಾವತ್ತೂ ಇಟ್ಟಿಲ್ಲ ನಾನು'' - ಕೃಷ್ಣಮ್ಮ (ದೇವರಾಜ್ ತಾಯಿ)

ತಾಯಿ ಪಟ್ಟ ಕಷ್ಟ
''ನನಗೆ ಎಲ್ಲಾ ನನ್ನ ತಾಯಿನೇ. ನಮ್ಮನ್ನ ನೋಡಿಕೊಳ್ಳುವುದಕ್ಕೆ ನಮ್ಮ ತಾಯಿ ಕೆಲಸ ಮಾಡಬೇಕಾಯ್ತು. ತೋಟದಲ್ಲಿ ಕೆಲಸ ಮಾಡೋರು. ಹಾಲು ವ್ಯಾಪಾರ ಮಾಡೋರು. ಹೀಗಾಗಿ ಅವರು ಕೂಡ ನಮಗೆ ಹೆಚ್ಚು ಸಮಯ ಕೊಡುವುದಕ್ಕೆ ಆಗ್ತಿರ್ಲಿಲ್ಲ' - ದೇವರಾಜ್

ಕಾನ್ವೆಂಟ್ ಕಂಡ್ರೆ ಇಷ್ಟ
''ಹಳ್ಳಿಯಲ್ಲಿನ ಶಾಲೆಗೆ ಸೇರಿಸಿದರು. ನನಗೆ ಹೋಗೋಕೆ ಇಷ್ಟವಾಗದೆ ವಾಪಸ್ ಓಡಿ ಬಂದುಬಿಡ್ತಾಯಿದ್ದೆ. ನನಗೆ ಕಾನ್ವೆಂಟ್ ಸ್ಕೂಲ್ ಗಳು ಅಟ್ರ್ಯಾಕ್ಟ್ ಆಗ್ತಿತ್ತು ಅನ್ಸುತ್ತೆ ಅವಾಗ. ಆರು ತಿಂಗಳು ನಾನು ಕಷ್ಟ ಪಟ್ಟಿದ್ದನ್ನ ನೋಡಿ ನನ್ನ ತಾಯಿ ಕಾನ್ವೆಂಟ್ ಗೆ ಸೇರಿಸಿದರು'' - ದೇವರಾಜ್

ಹುಡುಗರಿಗೆ ಹೊಡೆದಿದ್ದೆ!
''ಸ್ಕೂಲ್ ನಲ್ಲಿ ಗಜೇಂದ್ರ ಸಿಂಗ್ ಮತ್ತು ಭಗತ್ ಅಂತ ಹುಡುಗ. ಸ್ಪೋರ್ಟ್ಸ್ ನಲ್ಲಿ ನಾನು ಅವರನ್ನ ಸೋಲಿಸಿದ್ದೆ. ಅದಕ್ಕೆ ಹೊಟ್ಟೆಕಿಚ್ಚಿನಿಂದ ನನ್ನ ಫ್ರೆಂಡ್ ಜೊತೆ ಸಂಬಂಧ ಕಲ್ಪಿಸಿಬಿಟ್ಟಿದ್ದರು. ಪ್ರಿನ್ಸಿಪಾಲ್ ವರೆಗೂ ಕಂಪ್ಲೇಂಟ್ ಹೋಗಿತ್ತು. ಪ್ರಿನ್ಸಿಪಾಲ್ ಕರೆದು ನನ್ನನ್ನ ಬೈದರು. ಗಜೇಂದ್ರ ಸಿಂಗ್ ಮತ್ತು ಭಗತ್ ಮಾಡಿದ್ದು ಹೀಗೆ ಅಂತ ಗೊತ್ತಾಗಿ ಅವರಿಗೆ ಅವತ್ತು ಚೆನ್ನಾಗಿ ಹೊಡೆದಿದ್ದೆ'' - ದೇವರಾಜ್

ಕೆಲಸ ಮಾಡಲೇ ಬೇಕಾಗಿತ್ತು!
''ನನ್ನ ಫ್ಯಾಮಿಲಿಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರ್ಲಿಲ್ಲ. ನನ್ನ ತಾಯಿ ಕೆಲಸ ಮಾಡ್ತಿದ್ರು. ಅವರಿಗೆ ನಾನು ನೆರವು ಆಗ್ಬೇಕಿತ್ತು. ಹೀಗಾಗಿ ಕೆಲಸಕ್ಕೆ ಸೇರುವುದು ಉತ್ತಮ ಅಂದುಕೊಂಡೆ. ನನ್ನ ಬಾವ ಒಬ್ಬರು ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ರು. ಅವರ ಸಹಾಯದ ಮೇರೆಗೆ ನಾನು ಕೆಲಸಕ್ಕೆ ಸೇರಿಕೊಂಡೆ. ನಾನು ಸೈನ್ಸ್ ಸ್ಟೂಡೆಂಟ್ ಆಗಿದ್ರಿಂದ ಪ್ರ್ಯಾಕ್ಟಿಕಲ್ಸ್ ಗೆ ಹೋಗೋಕೆ ಆಗ್ತಿರ್ಲಿಲ್ಲ ಅದಕ್ಕೆ ಓದನ್ನ ಅರ್ಧಕ್ಕೆ ನಿಲ್ಲಿಸಿಬಿಟ್ಟೆ'' - ದೇವರಾಜ್

ದುಃಖ ಆಗುತ್ತೆ!
''Case and Dial ಸೆಕ್ಷನ್ ನಲ್ಲಿ ವಾಚ್ ಕೇಸ್ ಮತ್ತು ನಂಬರ್ಸ್ ಮಾಡುವ ಸೆಕ್ಷನ್. ನಾನು ಟರ್ನರ್ ಆಗಿ ಸೇರಿಕೊಂಡಿದ್ದೆ. ಆ ಫ್ಯಾಕ್ಟರಿ ಈಗ ಕ್ಲೋಸ್ ಆಗಿದೆ. ಬಹಳ ದುಃಖ ಆಗುತ್ತೆ'' - ದೇವರಾಜ್

ಮೊದಲು ನಾಟಕ ಮಾಡಿದ್ದು...
''ವಾಚ್ ಫ್ಯಾಕ್ಟರಿಯಲ್ಲಿ ರಾಜ್ಯೋತ್ಸವಕ್ಕೆ ನಾಟಕ ಮಾಡಬೇಕಾದಾಗ ಟ್ರೈ ಮಾಡ್ತೀನಿ ಅಂತ ಮಾಡ್ದೆ. ನಾಟಕಕ್ಕೆ ಮೊದಲ ಬಹುಮಾನ ಬಂತು. ಅವಾಗ ಬಹುಮಾನ ತೆಗೆದುಕೊಂಡಿದ್ದು ಅಭಿನಯ ಶಾರದೆ ಜಯಂತಿ ರವರಿಂದ. ನಾನು ಚೆನ್ನಾಗಿ ಪಾತ್ರ ಮಾಡಿದ್ದು ನೋಡಿ ಎಲ್ಲರೂ ಯಾಕೆ ನಾಟಕದ ಬಗ್ಗೆ ಸೀರಿಯಸ್ ಆಗ್ಬಾರ್ದು ಅಂತ ಕೇಳ್ತಿದ್ರು. ಆಗ ನಾನು ಕಲಾಕ್ಷೇತ್ರದ ಕಡೆ ಮುಖ ಮಾಡಿದ್ದು'' - ದೇವರಾಜ್

ರಂಗಭೂಮಿ ಪ್ರವೇಶ
''ನಾನು ಮೊದಲು ನಾಟಕ ಮಾಡಿದ್ದು ಆರ್.ನಾಗೇಶ್ ತಂಡದಲ್ಲಿ. ಆಮೇಲೆ 'ಸ್ಪಂದನ' ತಂಡಕ್ಕೆ ಸೇರ್ಕೊಂಡೆ'' - ದೇವರಾಜ್

ಅವಿನಾಶ್ ಜೊತೆ ದೋಸ್ತಿ
''ನಾಲ್ಕು ದಶಕಗಳಿಂದ ನಾವು ಫ್ರೆಂಡ್ಸ್. ಇದುವರೆಗೂ ಒಂದು ದಿನವೂ ಜಗಳ ಆಡಿಲ್ಲ'' - ಅವಿನಾಶ್

ಚಿತ್ರರಂಗಕ್ಕೆ ಕಾಲಿಟ್ಟಿದ್ದು
''ತ್ರಿಶೂಲ' ಅಂತ ಸಿನಿಮಾ ಮಾಡುವಾಗ ಆಡಿಷನ್ ಮಾಡ್ತಿದ್ರು. ಅಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಗೆ ಸೆಲೆಕ್ಟ್ ಆದೆ. ಅದೇ ಸಿನಿಮಾದಲ್ಲಿ ಅವಿನಾಶ್ ಹೀರೋ. ನಾನು ಸೆಲೆಕ್ಟ್ ಆಗುವುದಕ್ಕೆ ಅವಿನಾಶ್ ಕಾರಣ. ನಾನು ಚಿತ್ರರಂಗಕ್ಕೆ ಬರಲು ಕಾರಣ ಅವಿನಾಶ್'' - ದೇವರಾಜ್

ಸೈಕೋಪಾತ್ ಪಾತ್ರಗಳು ಸಾಕಾಗಿತ್ತು
''ಸೈಕೋಪಾತ್ ಪಾತ್ರಗಳಲ್ಲಿ ತುಂಬಾ ಮೆಂಟಲ್ ಸ್ಟ್ರೇನ್ ಆಗ್ತಿತ್ತು. ಹೀಗಾಗಿ ಕ್ರಮೇಣ ನಾನು ಅಂತಹ ಪಾತ್ರಗಳಲ್ಲಿ ಆಕ್ಟ್ ಮಾಡುವುದು ನಿಲ್ಲಿಸಿದೆ'' - ದೇವರಾಜ್

ಲವ್ @ ಫಸ್ಟ್ ಸೈಟ್
''ರಾಜೇಂದ್ರ ಬಾಬು ಅವರು ನನ್ನನ್ನ 'ಲಾಲಿ' ಸಿನಿಮಾಗೆ ಸೆಲೆಕ್ಟ್ ಮಾಡಿದರು. ಆ ಚಿತ್ರಕ್ಕೆ ಹೀರೋಯಿನ್ ಸೆಲೆಕ್ಟ್ ಮಾಡುವುದಕ್ಕಂತ ನನ್ನನ್ನ ಅವರು ಹೀರೋಯಿನ್ ಮನೆಗೆ ಕರೆದುಕೊಂಡು ಹೋದರು. ಅವತ್ತೆ ನಾನು ಮೊದಲು ಚಂದ್ರಲೇಖನ ನೋಡಿದ್ದು. ತುಂಬಾ ಚೆನ್ನಾಗಿದ್ದಾರೆ ನೋಡೋಕೆ ಅಂತ ಅವತ್ತೆ ಅಂದುಕೊಂಡಿದ್ದೆ. ನಂತರ 'ಕೆಂಡದಮಳೆ' ಸಿನಿಮಾದಲ್ಲಿ ಅವರು ಹೀರೋಯಿನ್, ನಾನು ವಿಲನ್'' - ದೇವರಾಜ್

ಹೆದರಿಕೆ ಆಗ್ತಿತ್ತು!
''ನಾನು ಮೊದಲು ದೇವುನ ನೋಡಿದಾಗ ತುಂಬಾ ಹೆದರಿಕೊಳ್ಳುತ್ತಿದೆ. ಯಾಕಂದ್ರೆ ಅವರ ಕಣ್ಣು ಹಾಗಿತ್ತು. 'ಕೆಂಡದಮಳೆ' ಶೂಟಿಂಗ್ ಟೈಮ್ ನಲ್ಲಿ ನನ್ನ ಅವರು ರೇಪ್ ಮಾಡುವ ಸನ್ನಿವೇಶ ಇತ್ತು. ಅದರಲ್ಲಿ ಅವರು ನನ್ನ ಡುಪ್ಪಟ್ಟಾ ಎಳೆಯುವುದಕ್ಕೆ ಹೋಗಿ, ನನ್ನ ಕುತ್ತಿಗೆಗೆ ಪೆಟ್ಟಾಯ್ತು. ಆಗ ಅವರು ನನ್ನನ್ನ ತುಂಬಾ ಚೆನ್ನಾಗಿ ನೋಡಿಕೊಂಡರು. ಅವಾಗ್ಲೇ ನನಗೆ ಅನ್ಸಿದ್ದು, ಇವರನ್ನ ನಾನು ಮದುವೆ ಆದ್ರೆ ಸುಖವಾಗಿ ಇರ್ತೀನಿ ಅಂತ'' - ಚಂದ್ರಲೇಖ (ದೇವರಾಜ್ ಪತ್ನಿ)

ಮದುವೆ ಆಗಿದ್ದು!
''ನನಗೆ ಸಿನಿಮಾದಲ್ಲಿ ಹೆಚ್ಚು ಆಕ್ಟ್ ಮಾಡುವುದಕ್ಕೆ ಇಷ್ಟ ಇರ್ಲಿಲ್ಲ. ಅದಕ್ಕೆ ದೇವುನ ಕೇಳ್ದೆ ಮದುವೆ ಆಗ್ಬಿಡೋಣ ಅಂತ. ಅದಕ್ಕೆ ಅವರು ಇಷ್ಟು ಬೇಗ? ಇನ್ನೂ ಒಂದು ವರ್ಷ ಕೂಡ ಆಗಿಲ್ಲ ಮೀಟ್ ಮಾಡಿ? ಅಂತ ಕೇಳಿದ್ರು'' - ಚಂದ್ರಲೇಖ (ದೇವರಾಜ್ ಪತ್ನಿ)

ಅಮ್ಮನಿಗೆ ಹೇಳಲೇ ಇಲ್ಲ
''ಇನ್ನೂ 'ಕೆಂಡದ ಮಳೆ' ಶೂಟಿಂಗ್ ಆಗ್ತಿತ್ತು. ಅವಾಗ ಅವಿನಾಶ್ ಮತ್ತು ದೇವರಾಜ್. ಇಬ್ಬರೂ ನಮ್ಮ ಮನೆಗೆ ರಾತ್ರಿ ಬಂದು ರಿಜಿಸ್ಟರ್ ಮ್ಯಾರೇಜ್ ಅಪ್ಲಿಕೇಷನ್ ತಂದು ಸೈನ್ ಮಾಡಿಸಿದರು. ನಮ್ಮ ಅಮ್ಮ ಕೇಳಿದ್ರು ಏನು ಇಷ್ಟೋತ್ತಿಗೆ ಬಂದಿರೋದು ಅಂತ. ನಾನು ಮುಂದಿನ ಸಿನಿಮಾ ಬಗ್ಗೆ ಮಾತನಾಡುವುದಕ್ಕೆ ಅಂತ ಸುಳ್ಳು ಹೇಳಿದ್ದೆ'' - ಚಂದ್ರಲೇಖ (ದೇವರಾಜ್ ಪತ್ನಿ)

ವಿರೋಧ ಇತ್ತು
''ನಮ್ಮನೇಲಿ ಸೇರಿಸಲಿಲ್ಲ. ಅವರ ಮನೆಯಲ್ಲೂ ಸ್ವಲ್ಪ ವಿರೋಧ ಇತ್ತು. ಮೂರು ತಿಂಗಳಾದ್ಮೇಲೆ ಗುಡ್ ನ್ಯೂಸ್ ಸಿಕ್ಕಿದರೂ ಯಾವುದೂ ಸರಿ ಹೋಗ್ಲಿಲ್ಲ. ಆಗ ನನಗೆ ತುಂಬಾ ಪ್ರೀತಿಯಿಂದ ನೋಡಿಕೊಂಡವರು ದೇವರಾಜ್'' - ಚಂದ್ರಲೇಖ (ದೇವರಾಜ್ ಪತ್ನಿ)

ತಪ್ಪು ನಿರ್ಧಾರ
''ತುಂಬಾ ಪೊಲೀಸ್ ಪಾತ್ರಗಳು ಆದಾಗ ಮಾಡಲ್ಲ ಅಂತ ಹೇಳ್ದೆ. ಅದು ತಪ್ಪು ನಿರ್ಧಾರ ಆಗೋಯ್ತು. ಅದರಿಂದ ಸ್ವಲ್ಪ ಗ್ಯಾಪ್ ಆಗೋಯ್ತು'' - ದೇವರಾಜ್

ವಿವಾದ ಆಗಿದ್ದು
''ಸರ್ಕಲ್ ಇನ್ಸ್ ಪೆಕ್ಟರ್' ಸಿನಿಮಾ ಆದ್ಮೇಲೆ ಸ್ವಲ್ಪ ವಿವಾದ ಆಯ್ತು. ಅದು ಯಾಕೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ. ಅದರಿಂದ ನನಗೆ ಆಫರ್ಸ್ ಬರುವುದು ಕಡಿಮೆ ಆಯ್ತು. ಎಂಟು ತಿಂಗಳು ಒಂದು ಫೋನ್ ಕೂಡ ಬರ್ಲಿಲ್ಲ. ನಂತರ ಹಿರಿಯ ಪತ್ರಕರ್ತೆ ವಿಜಯಮ್ಮ ಬಂದು ಒಂದು ಪ್ರೆಸ್ ಮೀಟ್ ಮಾಡೋಣ, ನಾನು ಕ್ಲಾರಿಫೈ ಮಾಡ್ತೀನಿ ಅಂತ ಹೇಳಿದರು. ಆ ನಂತರ ಸಾಂಗ್ಲಿಯಾನ ಭಾಗ-2 ಶುರುವಾಯ್ತು'' - ದೇವರಾಜ್

ಜನ ಹೆದರುತ್ತಾರೆ
''ಟಿವಿಯಲ್ಲಿ ನನ್ನ ಸಿನಿಮಾಗಳನ್ನ ನೋಡಿ ಈಗಲೂ ನನ್ನನ್ನ ಕಂಡ್ರೆ ಕೆಲವರು ಭಯ ಪಡ್ತಾರೆ'' - ದೇವರಾಜ್

ಸೊಗಸಾದ ಜೀವನ
''ನಾನು ಸ್ಕೂಲ್ ಗೆ ಹೋಗ್ಬೇಕಾದ್ರೆ ತಂಗಳಿಟ್ಟು ತಿನ್ಕೊಂಡು ಹೋಗ್ತಾಯಿದ್ದೆ. ಈಗ ಏನು ಬೇಕಾದರೂ ತೆಗೆದುಕೊಂಡು ತಿನ್ನಬಲ್ಲೆ. ಅದಕ್ಕಿಂತ ಇನ್ನೇನು ಬೇಕು. ನಾನು ಯಾವತ್ತೂ ಕನಸು ಕಂಡವನಲ್ಲ. ಸೊಗಸಾಗಿ ಜೀವನ ನಡೆಸಬೇಕು ಅಂದುಕೊಂಡವನು. ಹಾಗೇ ಬದುಕುತ್ತಾಯಿದ್ದೀನಿ'' - ದೇವರಾಜ್


Click it and Unblock the Notifications











