ಬಿಗ್ ಬಾಸ್ ನಲ್ಲಿ ಅರುಣ್ ಸಾಗರ್ ಎಡವಿದ್ದೆಲ್ಲಿ?
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೊದಲ ಆವೃತ್ತಿಗೆ ತೆರೆಬಿದ್ದಿದೆ. ಮೊದಲ ಆವೃತ್ತಿಯಲ್ಲಿ ನಟ ವಿಜಯ್ ರಾಘವೇಂದ್ರ ಗೆದ್ದಿದ್ದಾರೆ. ಆರಂಭದಿಂದಲೂ ಎಲ್ಲಾ ಟಾಸ್ಕ್ ಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿದ್ದ ಅರುಣ್ ಸಾಗರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಯಾಕೆ ಹೀಗಾಯ್ತು?
ಎಲ್ಲರೂ ಅಂದುಕೊಂಡಿದ್ದದ್ದು ಅರುಣ್ ಸಾಗರ್ ಖಂಡಿತ ಗೆಲ್ಲುತ್ತಾರೆ ಎಂದು. ಆದರೆ ಎಲ್ಲೋ ಒಂದು ಕಡೆ ವಿಜಯ್ ರಾಘವೇಂದ್ರ ಅವರೇ ಸರಿಯಾದ ಆಯ್ಕೆ ಎನ್ನಿಸುತ್ತದೆ. ವಿಜಯ್ ಕೆಲವೊಂದು ಟಾಸ್ಕ್ ಗಳಲ್ಲಿ ಭಾಗವಹಿಸಿರಲಿಲ್ಲ ನಿಜ. ಆದರೆ ಅವರ ತೂಕದ ವ್ಯಕ್ತಿತ್ವವೇ ಅವರನ್ನು ಗೆಲ್ಲಿಸಿತು.
'ಬಿಗ್ ಬಾಸ್' ಮನೆಯಲ್ಲಿ ಆರಂಭದ ಕೆಲ ದಿನಗಳು ವಿಜಯ್ ಅಷ್ಟಾಗಿ ಯಾವುದರಲ್ಲೂ ತೊಡಗಿಕೊಳ್ಳುತ್ತಿರಲಿಲ್ಲ. "ಅಂದರಿಕಿ ಮಂಚಿವಾಡು ಅನಂತರಾಮಯ್ಯ" (ಎಲ್ಲರಿಗೂ ಒಳ್ಳೆಯವನು ಅನಂತರಾಮಯ್ಯ) ಎಂದು ನರೇಂದ್ರ ಬಾಬು ಶರ್ಮಾ ಅವರು ಸೂಕ್ಷ್ಮ್ಯವಾಗಿ ಹೇಳಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಆ ಮಾತಿನ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡಿದ್ದರು.

ಅರುಣ್ ಸಾಗರ್ ಅವರು ಕೊಟ್ಟ ಪ್ರತಿ ಟಾಸ್ಕ್ ನಲ್ಲೂ ಭಾಗವಹಿಸುವುದರ ಜೊತೆಗೆ ಎಲ್ಲದರಲ್ಲೂ ತಾನೇ ಉತ್ತಮ ಎಂಬಂತೆ ನಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಇವರ ಆಟ ಪಾಠಗಳು ಅತಿರೇಕಕ್ಕೂ ಹೋಗುತ್ತಿದ್ದವು. ಮನೆಯ ಎಲ್ಲಾ ಸದಸ್ಯರ ಜೊತೆ ಬೆರೆಯುತ್ತಿರಲಿಲ್ಲ. ಹೆಚ್ಚಾಗಿ ಚಂದ್ರಿಕಾ ಅವರನ್ನೇ ನೆಚ್ಚಿಕೊಂಡಿದ್ದರು.
ಆದರೆ ವಿಜಯ್ ಎಲ್ಲರೊಂದಿಗೂ ಒಂದು ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಆತ್ಮೀಯತೆಯನ್ನೂ ಬೆಳೆಸಿಕೊಂಡಿದ್ದರು. ತನಗೆ ನೋವಾದರೂ ಸರಿ ತನ್ನ ಮಾತಿನಿಂದ ಬೇರೆಯವರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡರು. ವಿಜಯ್ ಹಾಗೂ ಅರುಣ್ ಅವರ ಮಾತಿನ ಶೈಲಿಯಲ್ಲೂ ಭಿನ್ನತೆ ಎದ್ದು ಕಾಣುತ್ತಿತ್ತು.
'ಬಿಗ್ ಬಾಸ್' ಕೇಳುತ್ತಿದ್ದ ಕೆಲವು ಪ್ರಶ್ನೆಗಳಿಗೆ ಅರುಣ್ ಅವರು ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದರು. ಆದರೆ ವಿಜಯ್ ವಿಶ್ಲೇಷಿಸುವ ಹಾಗೂ ಸಮಸ್ಯೆಯನ್ನು ತುಲನಾತ್ಮಕವಾಗಿ ತೂಗುವ ಸಾಮರ್ಥ್ಯ ಇತ್ತು. ಈ ಆಟದಲ್ಲಿ ಗೆಲ್ಲಲು ಇಬ್ಬರಿಗೂ ಅರ್ಹತೆ ಇತ್ತು. ಆದರೆ ವಿಜಯ್ ಅವರ ವಿನಯವೇ ಕೊನೆಯತನಕ ಅವರ ಕೈಹಿಡಿಯಿತು.
ತಮ್ಮ ತಮ್ಮ ಮಡದಿಯರು ಬಂದಾಗ ವಿಜಯ್ ನಡೆದುಕೊಂಡ ರೀತಿ ಹೇಗಿತ್ತು. ಹಾಗೆಯೇ ಅರುಣ್ ನಡೆದುಕೊಂಡ ರೀತಿ ಹೇಗಿತ್ತು ನೋಡಿ. ಮನೆಯಲ್ಲಿ ನಲವತ್ತೇಳು ಕ್ಯಾಮೆರಾಗಳಿವೆ ಎಂದು ಗೊತ್ತಿದ್ದರೂ ಎಲ್ಲರೆದುರಿಗೂ ಅರುಣ್ ತಮ್ಮ ಪತ್ನಿಗೆ ಮುತ್ತಿನ ಸುರಿಮಳೆ ಸುರಿಸಿದರು. ಇದೊಂದು ಸಣ್ಣ ಉದಾಹರಣೆ ಅಷ್ಟೆ.


Click it and Unblock the Notifications











