ಅಚ್ಚರಿ ಫಲಿತಾಂಶ : ವಿಜಯ್ ರಾಘವೇಂದ್ರ 'ಬಿಗ್ ಬಾಸ್'
ಒನ್ಇಂಡಿಯಾ-ಕನ್ನಡಿಗರ ಅನಿಸಿಕೆಗೆ ವ್ಯತಿರಿಕ್ತವಾಗಿ, ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗ್ರಾಂಡ್ ಫಿನಾಲೆಯಲ್ಲಿ, ಎಲ್ಲರ ಫೆವರಿಟ್ ಆಗಿದ್ದ ಕಲಾ ನಿರ್ದೇಶಕ ಅರುಣ್ ಸಾಗರ್ ಅವರನ್ನು ಹಿಂದಿಕ್ಕಿ, ಜನಪ್ರಿಯ ಕನ್ನಡ ಚಿತ್ರನಟ ವಿಜಯ್ ರಾಘವೇಂದ್ರ ಅವರು 'ಬಿಗ್ ಬಾಸ್' ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ ಮತ್ತು 50 ಲಕ್ಷ ರು. ಬಹುಮಾನ ಮೊತ್ತದ ಸೂಟ್ ಕೇಸ್ ತಮ್ಮದಾಗಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ಬಿಗ್ ಬಾಸ್ ರಿಯಾಟಿಲಿ ಶೋ ಗೆಲ್ಲುವಲ್ಲಿ ಅರುಣ್ ಸಾಗರ್ ಅವರಷ್ಟೇ ವಿಜಯ್ ರಾಘವೇಂದ್ರ ಅವರು ಕೂಡ ಅರ್ಹರಾಗಿದ್ದರು. ಆದರೆ, ಶೋನಲ್ಲಿ ಭಾಗವಹಿಸಿ ಹೊರಬಿದ್ದಿದ್ದ ಅನೇಕ ಸ್ಪರ್ಧಾಳುಗಳ ಜೊತೆ ಹಲವಾರು ವೀಕ್ಷಕರ ಅಭಿಮತ ಅರುಣ್ ಸಾಗರ್ ಅವರು ಗೆಲ್ಲುತ್ತಾರೆ ಎಂದೇ ಆಗಿತ್ತು. ಆದರೆ, ಬಿಗ್ ಬಾಸ್ಗಿಂತ ಬಿಗ್ ಬಾಸ್ ಆಗಿರುವ ಕೋಟ್ಯಂತ ವೀಕ್ಷಕರ ಮನದಲ್ಲೇನಿತ್ತು ಆ ಬಿಗ್ ಬಾಸ್ಗೆ ಕೂಡ ಗೊತ್ತಿರಲಿಕ್ಕಿಲ್ಲ.

ಗ್ರಾಂಡ್ ಫಿನಾಲೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಪ್ರಶಸ್ತಿ ಫಲಕ ಮತ್ತು ಅರ್ಧ ಕೋಟಿ ರು. ಹಣವನ್ನು ಗೆದ್ದವರಿಗೆ ನೀಡುತ್ತಾರೆ ಎಂದು ಸುದ್ದಿಯಾಗಿತ್ತು. ಇದು ಕೂಡ ಸುಳ್ಳಾಗಿ, ಬಿಗ್ ಬಾಸ್ ಹೋಸ್ಟ್ ಆಗಿರುವ ಖ್ಯಾತ ನಟ ಸುದೀಪ್ ಅವರೇ ಬಹುಮಾನವನ್ನು ವಿತರಿಸಿದರು. [ಒನ್ಇಂಡಿಯಾ ಸಮೀಕ್ಷಾ ಫಲಿತಾಂಶ]
ಕಟ್ಟಕಡೆಯ ಹಂತದಲ್ಲಿ ಕಣದಲ್ಲಿ ಉಳಿದುಕೊಂಡಿದ್ದು, ಬಿಗ್ ಬಾಸ್ ಮನೆಯಲ್ಲಿ 98 ದಿನಗಳುದ್ದಕ್ಕೂ ಅತ್ಯಂತ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದ ಅರುಣ್ ಸಾಗರ್ ಮತ್ತು ತಮ್ಮ ಸಜ್ಜನಿಕೆಯಿಂದ ಹಲವಾರು ಸ್ಪರ್ಧಿಗಳ ಪ್ರೀತಿಗೆ ಮತ್ತು ಟೀಕೆಗೆ ಪಾತ್ರರಾಗಿದ್ದ ವಿಜಯ್ ರಾಘವೇಂದ್ರ ಅವರು ಮಾತ್ರ. ಅತಿ ಕಡಿಮೆ ಮತ ಗಳಿಸಿದ 'ಬ್ರಹ್ಮಾಂಡ' ಖ್ಯಾತಿಯ ನರೇಂದ್ರ ಬಾಬು ಶರ್ಮಾ ಮತ್ತು ನಟಿ ನಿಖಿತಾ ತುಕ್ರಾಲ್ ಅವರನ್ನು ಮೊದಲು ವೇದಿಕೆಗೆ ಕರೆಯಿಸಿಕೊಳ್ಳಲಾಯಿತು. [ಅರುಣ್ ಸಾಗರ್ 'ಬಿಗ್ ಬಾಸ್' : ಓದುಗರ ಆಯ್ಕೆ]
ಇಬ್ಬರಿಗೂ ಬಿದ್ದಿರುವ ಮತಗಳು ಎಷ್ಟು ಎಂದು ಕಡೆಗೂ ಬಹಿರಂಗಪಡಿಸಲೇ ಇಲ್ಲ. ಸುದೀಪ್ ಅವರು ವಿಜಯ್ ರಾಘವೇಂದ್ರ ಅವರೇ ವಿಜೇತರು ಎಂದು ಘಂಟಾಘೋಷವಾಗಿ ಸಾರಿದಾಗ, ಭಾರೀ ನಿರೀಕ್ಷೆಯಲ್ಲಿ ಅರುಣ್ ಸಾಗರ್ ಮುಖದಲ್ಲಿ ಸಹಜವಾಗಿ ನಿರಾಶೆ ಮೂಡಿತ್ತು. ಆದರೂ ಸಾವರಿಸಿಕೊಂಡ ಅವರು, "ವಿಜಯ್ 50 ಲಕ್ಷ ರು ಗೆದ್ದಿದ್ದಾನೆ ಅನ್ನುವುದಕ್ಕಿಂತ, ಬಿಗ್ ಬಾಸ್ ಮನೆಯಲ್ಲಿ ತನ್ನನ್ನು ತಾನು ಗೆದ್ದಿದ್ದಾನೆ" ಎಂದು ವಿಜಯ್ ಬೆನ್ನುತಟ್ಟಿ ದೊಡ್ಡತನ ತೋರಿದರು. ಸಮಾರಂಭಕ್ಕೆ ಆಗಮಿಸಿದ್ದ ಅರುಣ್ ಅವರ ಪತ್ನಿ, ತಾಯಿ ಮತ್ತು ಮಕ್ಕಳಿಗೆ ಮಾತ್ರವಲ್ಲ ಕೆಲ ಸ್ಪರ್ಧಾಳುಗಳಿಗೆ ಕೂಡ ಇದು ಅಚ್ಚರಿಯ ಸಂಗತಿಯಾಗಿತ್ತು. [ಎಲ್ಲ ಫಿಕ್ಸಿಂಗ್ ಎಂದಿತು ಟ್ವಿಟ್ಟರ್] [ಎಲ್ಲ ಬಕ್ವಾಸ್ ಎಂದರು ಓದುಗರು]


Click it and Unblock the Notifications











