ಎಲಿಮಿನೇಟ್ ಆಗಿದ್ದ ದೀಪಿಕಾ ಮತ್ತೆ ಬಿಗ್ಬಾಸ್ಗೆ: ಹಿಂದಿನ ಉದ್ದೇಶ ಏನು?
ಕನ್ನಡ ಬಿಗ್ಬಾಸ್ ಸೀಸನ್ 09 ಪ್ರಸಾರ ಆರಂಭಿಸಿ ಏಳು ವಾರ ಮುಗಿದಿದ್ದು, ಇದೀಗ ಎಂಟನೇ ವಾರದ ವೀಕೆಂಡ್ ಕಾರ್ಯಕ್ರಮ ಶನಿವಾರ-ಭಾನುವಾರ ಪ್ರಸಾರವಾಗಲಿಕ್ಕಿದೆ.
ಪ್ರತಿ ವಾರ ಒಬ್ಬೊಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುವುದು ನಿಯಮ. ಅಂತೆಯೇ ಈ ವರೆಗೆ ಆರು ಮಂದಿ ಮನೆಯಿಂದ ಹೊರಗೆ ಹೋಗಿದ್ದಾರೆ. ಏಳನೇ ವಾರ ಸ್ಪರ್ಧಿ ದೀಪಿಕಾ ದಾಸ್ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದರಾದರೂ ಆ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ್ದಾರೆ.
ಕಳೆದ ವಾರ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದರು. ಇದು ಮನೆಯ ಸ್ಪರ್ಧಿಗಳಿಗೆ ಆಶ್ಚರ್ಯ ತಂದಿತ್ತು. ಆದರೆ ಎಲಿಮಿನೇಟ್ ಆದ ಒಂದೇ ದಿನದಲ್ಲಿ ದೀಪಿಕಾ ದಾಸ್ ಮತ್ತೆ ಮನೆಗೆ ಮರಳಿದರು. ದೀಪಿಕಾ ದಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಲಾಯಿತು.

ಸೋನು ಗೌಡ ಹೆಸರು ಮುಂಚೂಣಿಯಲ್ಲಿತ್ತು
ಅಸಲಿಗೆ ಈ ಬಾರಿಯ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಒಟಿಟಿ ಸೀಸನ್ನಲ್ಲಿ ಗಮನ ಸೆಳೆದಿದ್ದ ಸೋನು ಗೌಡ ವೈಲ್ಡ್ ಎಂಟ್ರಿ ನೀಡುತ್ತಾರೆ ಎನ್ನಲಾಗಿತ್ತು. ಅವರೊಟ್ಟಿಗೆ ಚಕ್ರವರ್ತಿ ಚಂದ್ರಚೂಡ್ ಹೆಸರೂ ಸಹ ಕೇಳಿ ಬಂದಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ, ಎಲಿಮಿನೇಟ್ ಆಗಿದ್ದ ದೀಪಿಕಾ ದಾಸ್ ಅನ್ನು ಮತ್ತೆ ಮರಳಿ ಕರೆತರಲಾಗಿದೆ.

ಮೊದಲ ಆಯ್ಕೆ ಆಗಿದ್ದ ಸೋನು ಗೌಡ
ವೈಲ್ಡ್ ಕಾರ್ಡ್ ಎಂಟ್ರಿಗೆ ಸೋನು ಗೌಡ ಅವರೇ ಮೊದಲ ಆಯ್ಕೆ ಆಗಿದ್ದರು ಎನ್ನಲಾಗಿದೆ. ಆದರೆ ಮಾಧ್ಯಮಗಳಲ್ಲಿ ಮಾಹಿತಿ ಸೋರಿಕೆ ಆದ ಕಾರಣ, ಸೋನು ಗೌಡ ಹೆಸರು ಕೈಬಿಟ್ಟು, ವೀಕ್ಷಕರ ಅವಕೃಪೆಯಿಂದ ಕಡಿಮೆ ಮತಗಳಿಸಿದ್ದ ದೀಪಿಕಾ ದಾಸ್ ಅವರನ್ನು ಹೊರಹಾಕಿದಂತೆಯೇ ಹಾಕಿ ಮತ್ತೆ ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ, ವೈಲ್ಡ್ ಕಾರ್ಡ್ ಎಂಟ್ರಿ ಸಂಪ್ರದಾಯವನ್ನೂ ಉಳಿಸಿಕೊಳ್ಳಬೇಕಾಗಿದ್ದರಿಂದ ಆಯೋಜಕರು ದೀಪಿಕಾರನ್ನು ಮರಳಿ ತಂದಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆಯೂ ಹೀಗೆ ನಡೆದಿದ್ದಿದೆ
ಈ ಹಿಂದೆಯೂ ಕೆಲವು ಬಾರಿ ಬಿಗ್ಬಾಸ್ನಲ್ಲಿ ಹೀಗಾಗಿದ್ದಿದೆ. ಯಾರು ಮನೆಯ ಒಳಗೆ ಹೋಗುತ್ತಾರೆ ಎಂಬ ಬಗ್ಗೆ ಹೆಸರುಗಳು ಸೋರಿಕೆ ಆದಾಗ, ಸೋರಿಕೆಯಾದವರನ್ನು ಬಿಟ್ಟು ಬೇರೆಯವರನ್ನು ಬಿಗ್ಬಾಸ್ ಮನೆಗೆ ಕರೆದ ಉದಾಹರಣೆಗಳೂ ಇವೆ ಎನ್ನಲಾಗುತ್ತದೆ. ಈ ಬಾರಿಯೂ ದೀಪಿಕಾ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಮರಳಿ ಮನೆಯೊಳಕ್ಕೆ ಸೇರಿಸಿಕೊಳ್ಳಲು ಇದೇ ಕಾರಣ ಎನ್ನಲಾಗುತ್ತಿದೆ. ಇಲ್ಲವಾದರೆ ಜನ ಮತ ಹಾಕದವರನ್ನು ಮತ್ತೆ ಮನೆಯೊಳಗೆ ಕರೆದುಕೊಳ್ಳಲು ಸೂಕ್ತ ಕಾರಣವೇ ಇಲ್ಲ.

ಅಸಮಾಧಾನ ವ್ಯಕ್ತಪಡಿಸಿದ್ದ ಸುದೀಪ್
ದೀಪಿಕಾ ದಾಸ್ ಗಟ್ಟಿ ಸ್ಪರ್ಧಿಯೇನೋ ಆಗಿದ್ದರು. ಮನೆಯಲ್ಲಿರುವ ಕೆಲವು ಪುರುಷ ಸ್ಪರ್ಧಿಗಳ ಸಮಕ್ಕೆ ದೀಪಿಕಾ ದಾಸ್ ಟಾಸ್ಕ್ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ವೀಕ್ಷಕರಿಗೆ ಬೇಕಾದ ಮನೊರಂಜನೆ ನೀಡುತ್ತಿರಲಿಲ್ಲವಾದರೂ ಟಾಸ್ಕ್ಗಳಲ್ಲಿ ಚೆನ್ನಾಗಿ ಪ್ರದರ್ಶನ ತೋರುತ್ತಿದ್ದರು. ಹಾಗಾಗಿ ಅವರು ಮನೆಯಿಂದ ಹೊರಗೆ ಹೋಗಿದ್ದರ ಬಗ್ಗೆ ಮನೆಯ ಮಂದಿಗೆ ಹಾಗೂ ಕೆಲವು ವೀಕ್ಷಕರಿಗೆ ಬೇಸರವಾಗಿತ್ತು. ದೀಪಿಕಾ ಎಲಿಮಿನೇಟ್ ಆದ ಬಗ್ಗೆ ಸ್ವತಃ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದರು. ಸುದೀಪ್ರ ಅಸಮಾಧಾನದ ಬೆನ್ನಲ್ಲೆ ದೀಪಿಕಾ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಒಳಗೆ ಹೆಜ್ಜೆ ಇಟ್ಟಿದ್ದಾರೆ.


Click it and Unblock the Notifications











