ಆಯನೂರು ಮಂಜುನಾಥ ವಿರುದ್ಧ ಕಿಡಿಕಾರಿದ ರಾಧಾ

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಟೌನ್ ಹೌಲ್ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದ ನಿರೂಪಕಿಯರು ಆಯನೂರು ಮಂಜುನಾಥ್ ಹೇಳಿಕೆ ವಿರುದ್ಧ ಧಿಕ್ಕಾರ ಕೂಗಿದರು. ಈ ಪ್ರತಿಭಟನೆಯಲ್ಲಿ ಕನ್ನಡದ ಎಲ್ಲ ವಾಹಿನಿಯ ನಿರೂಪಕಿಯರು ಜಮಾಯಿಸಿ ಆಯನೂರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮೊನ್ನೆ ಶಿವಮೊಗ್ಗದಲ್ಲಿ ಮಾತನಾಡುತ್ತ, ಆಯನೂರು ಮಂಜುನಾಥ ಅವರು ನಿರೂಪಕಿಯರ ಅಶ್ಲೀಲ ಡ್ರೆಸ್ಸು ಮಕ್ಕಳ ಮೇಲೆ ಎಫೆಕ್ಟ್ ಮಾಡತ್ತೆ ಎಂದು ಹೇಳಿದ್ದರು. ಹಾಗು ಕನ್ನಡ ಟಿವಿ ಚಾನಲ್ಲುಗಳನ್ನು ಮನೆಮಂದಿ ಜೊತೆ ಕುಳಿತು ನೋಡುವುದು ಮುಜುಗರ ಉಂಟುಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು.
ನಿರೂಪಕಿಯರು ಅಶ್ಲೀಲ ದಿರಿಸು ಧರಿಸುತ್ತಿರುವುದರಿಂದಲೂ ದೇಶದಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅವರ ಈ ಹೇಳಿಕೆ ನಿರೂಪಕಿಯರ ಸಮುದಾಯವನ್ನು ಕೆರಳಿಸಿತ್ತು. ಸಂಸದರು ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಟಿವಿ ನಿರೂಪಕಿಯರ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಆಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣ ಕುರಿತಂತೆ ಆಮೂಲಾಗ್ರವಾಗಿ ಚರ್ಚೆ ಪಬ್ಲಿಕ್ ಟಿವಿಯ ಹಮ್ಮಿಕೊಂಡಿದೆ. ಹರೀಶ್ ನಾಗರಾಜ್ ನಡೆಸಿಕೊಡುತ್ತಿರುವ 'ಆಯನೂರು Vs ಆಂಕರ್ಸ್' ಚರ್ಚೆಯಲ್ಲಿ ಸಮಯ ಟಿವಿಯ ಶ್ವೇತಾ ಭಟ್, ಪಬ್ಲಿಕ್ ಟಿವಿಯ ರಾಧಾ ಹಿರೇಗೌಡರ್, ಕಸ್ತೂರಿ ಟಿವಿಯ ಸ್ವಪ್ನಾ ದಿವಾಕರ್, ಜನಶ್ರೀ ಚಾನಲ್ಲಿನ ಸೌಮ್ಯ ರಾಮನಗರ್, ಮಹಿಳಾ ಹೋರಾಟಗಾರ್ತಿ ವಿಮಲಾ ಭಾಗವಹಿಸಿದ್ದರು.
ಮಹಿಳೆಯ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದೇನೆ. ನನ್ನಂಥ ಅನೇಕ ನಿರೂಪಕಿಯರು ಇಂಥದೇ ಕಾರ್ಯಕ್ರಮ ನಡೆಸಿದ್ದಾರೆ. ಯಾವ ನಿರೂಪಕಿಯೂ ಅಶ್ಲೀಲವಾಗಿ ಬಟ್ಟೆ ಧರಿಸುವುದಿಲ್ಲ. ನಮ್ಮ ಉಡುಗೆ ತೊಡುಗೆಯಲ್ಲಿ ವ್ಯತ್ಯಾಸ ಕಂಡಿದ್ದರೆ ಅದು ಆಯನೂರು ಕಣ್ಣಿಗೆ ಮಾತ್ರ ಬಿದ್ದಿರಬೇಕು ಎಂದು ರಾಧಾ ಹಿರೇಗೌಡರ್ (ಚಿತ್ರದಲ್ಲಿರುವವರು) ವ್ಯಂಗ್ಯವಾಡಿದರು.
ಒಟ್ಟಾರೆ, ಇರಲಾರದೆ ಇರುವೆ ಬಿಟ್ಟುಕೊಂಡ ಬಿಜೆಪಿ ಮುಖಂಡ ಮಂಜುನಾಥ್ ಈಗ ಕಕ್ಕಾಬಿಕ್ಕಿ ಆಗಿದ್ದಾರೆ. ಅವರ ಪ್ರತಿಕ್ರಿಯೆ ಪಡೆಯೋಣವೆಂದರೆ ಕೈಗೂ ಸಿಗುತ್ತಿಲ್ಲ, ಫೋನಿಗೂ ಸಿಗುತ್ತಿಲ್ಲ. ಅವರ ಮೊಬೈಲ್ ಫೋನು ಸದ್ಯಕ್ಕೆ ಅಂಗವಿಕಲವಾಗಿದೆ.


Click it and Unblock the Notifications











