ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ
ಟಿವಿ ಧಾರಾವಾಹಿಗಳಿಗೆ ಇರುವಷ್ಟೇ ಜನಪ್ರಿಯತೆ ಕಿರುತೆರೆ ಮೂಡಿಬರುವ ಅಡುಗೆ ಕಾರ್ಯಕ್ರಮಗಳಿಗೂ ಇದೆ. ರುಚಿ ಶುಚಿಯಾಗಿ ಅಡುಗೆ, ಖಾದ್ಯ, ಪಾಕ ವೈವಿಧ್ಯ ತಯಾರಿಸುವುದು ಒಂದು ಕಲೆ.
ಕಿರುತೆರೆಯಲ್ಲಿ ಇಂದು ವೈವಿಧ್ಯಮಯ ಅಡುಗೆ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಒಗ್ಗರಣೆ ಡಬ್ಬಿ' ಗೃಹಿಣಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. [ಜೀ ಕನ್ನಡದಲ್ಲಿ ಅರುಣ್ ಸಾಗರ್ ಹೊಸ ರಿಯಾಲಿಟಿ ಶೋ]
ಇದೀಗ ಒಗ್ಗರಣೆ ಡಬ್ಬಿ ಕಾರ್ಯಕ್ರಮ 500 ಸಂಚಿಕೆಗಳನ್ನು ಪೂರೈಸಿದೆ. ಶುಶ್ರುತ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮ ಇದಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು 500ರ ವಿಶೇಷ ಸಂಚಿಕೆಗೆ ಆಗಮಿಸಿ ಖಾದ್ಯದ ರುಚಿಗೆ ಮಾರುಹೋದರು.
ಈ ರುಚಿಕಟ್ಟಾದ ಕಾರ್ಯಕ್ರಮ ಮನೆ ಮನದ ಮಾತಾಗಲು ಕಾರಣಗಳು ಅನೇಕ. ಅದರಲ್ಲಿ ಪ್ರಮುಖವಾದದ್ದು ಅಡುಗೆ ವಿಧಾನ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಳ ಜೊತೆಗೆ ಆರೋಗ್ಯಕ್ಕೆ ಉಪಯುಕ್ತವೆನಿಸುವ ಅನೇಕ ಖಾದ್ಯಗಳು ಒಗ್ಗರಣೆ ಡಬ್ಬಿಯಲ್ಲಿ ಮೂಡಿಬಂದವು.

ಕರ್ನಾಟಕದ ಖ್ಯಾತ ಬಾಣಸಿಗರು ಈ ಕಾರ್ಯ್ಕಕ್ರಮದಲ್ಲಿ ಭಾಗವಹಿಸಿದ್ದಾರೆ. ಇದೆಲ್ಲದರ ಜೊತೆಗೆ ನಿರೂಪಕ ಮುರಳೀಧರ ಅವರ ಮಾತಿನ ಮೋಡಿ ಹಾಗೂ ನಿರೂಪಣಾ ಶೈಲಿ ಕರ್ನಾಟಕ ಮಾತ್ರವಲ್ಲದೆ ದೇಶ - ವಿದೇಶಗಳ ನೋಡುಗರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಒಗ್ಗರಣೆ ಡಬ್ಬಿ ಅಡುಗೆ ವಿಧಾನಗಳ 'ಸಿಂಪ್ಲಿ ವೆಜ್' ಪುಸ್ತಕ ಕೂಡಾ ಕರ್ನಾಟಕದಲ್ಲಿ ಮನೆಮಾತಾಗಿದೆ. ಈಗ 'ಮಾಂಸಾಹಾರ ವಿಶೇಷ' ಪುಸ್ತಕ ಬಿಡುಗಡೆಯಾಗಲಿದೆ. ಇದು ಕೂಡಾ ಗೃಹಿಣಿಯರ ಪಾಲಿನ ನೆಚ್ಚಿನ ಪುಸ್ತಕವಾಗಲಿದೆ ಎಂಬ ವಿಶ್ವಾಸವನ್ನು ವಾಹಿನಿ ವ್ಯಕ್ತಪಡಿಸಿದೆ.
ಈಗಾಗಲೆ ವಾಹಿನಿಯ ಪ್ರಮುಖ ಕಾರ್ಯಕ್ರಮಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ 'ಒಗ್ಗರಣೆ ಡಬ್ಬಿ'ಯಲ್ಲಿ ಮತ್ತಷ್ಟು ಪ್ರಯೋಗಗಳು ಮಾಡಲು ಯೋಚಿಸಿದ್ದು ಮುಂದಿನ ದಿನಗಳಲ್ಲಿ ವಿದೇಶದಲ್ಲೂ ಚಿತ್ರಿಕರಿಸುತ್ತೇನೆ ಎನ್ನುತ್ತಾರೆ ಜೀ ಕನ್ನಡ ವಾಹಿನಿ ಬಿಜಿನೆಸ್ ಹೆಡ್ ಸಿಜು ಪ್ರಭಾಕರನ್ ಮತ್ತು ಪ್ರೋಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು.

ಒಗ್ಗರಣೆ ಡಬ್ಬಿ ಕಾರ್ಯಕ್ರಮದ ವಿಶೇಷಗಳೆಂದರೆ...ಸೋಮವಾರ ಮತ್ತು ಗುರುವಾರದ ಕಾರ್ಯಕ್ರಮಗಳು ಸಂಪೂರ್ಣ ಸಸ್ಯಾಹಾರಿ ಅಡುಗೆಗಳಿಗೆ ಸೀಮಿತ. ಖ್ಯಾತ ಗುರೂಜಿ ಒಬ್ಬರು ಕಾರ್ಯಕ್ರಮಕ್ಕೆ ಆಗಮಿಸಿ ಯಾವುದೇ ರೀತಿಯ ಎಣ್ಣೆ ಬಳಸದಂತೆ ಪುಷ್ಠಿಕರವಾದ ತಿಂಡಿಗಳನ್ನು ತಯಾರಿಸುವ ಪರಿಪಾಠವೂ ಇದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












