ಲೈಫ್ ಸೂಪರ್ ಗುರೂನಿಂದ ಅರ್ಜುನ್ ವಾಕ್ ಔಟ್
ಜೀ ಕನ್ನಡ ವಾಹಿನಿಯ ಮತ್ತೊಂದು ವಿಭಿನ್ನ ಶೋ 'ಲೈಫ್ ಸೂಪರ್ ಗುರೂ' ದಿನದಿಂದ ದಿನಕ್ಕೆ ಕುತೂಹಲದ ಕಣವಾಗುತ್ತಿದೆ. ಈ ಬಾರಿಯ ಟಾಸ್ಕ್ ನಲ್ಲೂ ಸೂಪರ್ ಸೀನಯರ್ಸ್ ಗೆಲುವು ಸಾಧಿಸಿದ್ದಾರೆ. ಜಾಲಿ ಜೂನಿಯರ್ಸ್ ಗೆ ಈ ಬಾರಿಯೂ ಮುಖಭಂಗವಾಗಿದೆ.
ತಮ್ಮ ವಯಸ್ಸನ್ನು ಮರೆತು ಸೀನಿಯರ್ಸ್ ಬಹಳ ಉತ್ಸಾಹದಿಂದ ಆಡಿದರು. ಅರುವತ್ತಕ್ಕೆ ಅರುಳು ಮರಳು ಎಂಬುದನ್ನು ಸುಳ್ಳು ಮಾಡಲು ಹರಸಾಹಸ ಪಟ್ಟರು. ಕಡೆಗೂ 'ಲೈಫ್' ಟ್ರೋಪಿ ಸೀನಿಯರ್ಸ್ ಪಾಲಾಯಿತು.

ಆರಂಭದಲ್ಲಿ ಅಂಕೆ ಸಂಖ್ಯೆಗಳ ಟಾಸ್ಕ್ ನಲ್ಲಿ ಜೂನಿಯರ್ಸ್ ಮೇಲುಗೈ ಸಾಧಿಸಿದರೂ ಕಡೆಗೆ ಸೀನಿಯರ್ಸ್ ಗೆಲುವಿನ ನಗೆ ಬೀರಿದರು. ಇದೇ ವಿಚಾರವಾಗಿ ಜೂನಿಯರ್ಸ್ ನಡುವೆ ವಾದವಿವಾದ, ಜಗಳ, ಆರೋಪ ಪ್ರತ್ಯಾರೋಪಗಳು ನಡೆದವು.
ಜೂನಿಯರ್ಸ್ ತಂಡದ ಕ್ಯಾಪ್ಟನ್ಸಿ ಬೇಡ ಎಂದು ಅರ್ಜುನ್ ಹೊರನಡೆರು. ಹಿರಿಯರ ಪರ ಅನುಕಂಪ ತೋರಿಸಲಾಗುತ್ತಿದೆ ಎಂದು ಕೆಲವರು ವಾದ ವಿವಾದ ಮಾಡಿದರು. ನೀವೆಲ್ಲಾ ಸಪೋರ್ಟ್ ಮಾಡಿದಿರಿ ಎಂದು ಜೂನಿಯರ್ಸ್ ನಡುವೆ ಒಂದು ಸಣ್ಣ ಜಗಳವೂ ನಡೆಯಿತು.

ಕಡೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಅರ್ಜುನ್ ಮತ್ತು ಶರತ್ ನಡುವೆ ಜಗಳ ನಡೆಯಿತು. ಜೂನಿಯರ್ಸ್ ಇವರನ್ನು ಸಂಭಾಳಿಸಲು ಹರಸಾಹಸ ಪಟ್ಟರು. ಜಾಲಿ ಜೂನಿಯರ್ಸ್ ಗೆ ಉತ್ಸಾಹ ಪುಟಿಯುತ್ತಿದ್ದರೂ ತಾಳ್ಮೆ ಮಾತ್ರ ಇರಲಿಲ್ಲ.
"ಈ ಶೋನಲ್ಲಿ ಯಾರಿಗೆ ಇಷ್ಟವಿಲ್ಲವೋ ಅವರು ಈ ಕೂಡಲೇ ಹೋಗಬಹುದು. ಜಸ್ಟ್ ವಾಕ್ ಔಟ್ ಎಂದು ಯೋಗಿ ಹಾಗೂ ಗುರು ಗುಡುಗಿದರು. ಸಂಗೀತ ಭಟ್ ಹಾಗೂ ಅರ್ಜುನ್ ಅವರಿಗೆ ಈ ಕೂಡಲೆ ಹೊರಡಿ ಎಂದು ಸೂಚಿಸಿದರು.
ಈ ಟೇಬಲ್ ಮೇಲೆ ಹತ್ತು ಜನ ಸೆಲೆಬ್ರಿಟಿಗಳನ್ನು ಕೂರಿಸುವ ತಾಕತ್ತು ನಮಗಿದೆ. ಇಲ್ಲಿರುವ ಹಿರಿಯರು ಅಷ್ಟೇ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಬಿಟ್ಟು ಬಂದಿದ್ದಾರೆ. ಅವರಿಗೂ ಮನೆಗೆ ಹೋಗಬೇಕು ಎಂಬ ಆಸೆ ಇದೆ. ಆದರೆ ಅವರು ಒಂದು ಕ್ಷಣವೂ ಆ ರೀತಿ ಹೇಳಲಿಲ್ಲ. ನೀವು ಜೂನಿಯರ್ಸ್ ಮಾತ್ರ ಮನೆಗೆ ಹೋಗಬೇಕು ಹಂಬಲಿಸುತ್ತಿದ್ದೀರಿ. ಯಾರಿಗೆ ಇಷ್ಟ ಇಲ್ಲವೋ ಅವರೆಲ್ಲಾ ಇಲ್ಲಿಂದ ಹೊರಡಿ ಎಂದರು.

ದುಡ್ಡಿನ ಧಿಮಾಕನ್ನು ಈ ಶೋನಲ್ಲಿ ತೋರಿಸಿಕೊಳ್ಳಬೇಡಿ. ನಿಮ್ಮ ದೌಲತ್ತು, ದರ್ಪ ಏನಿದ್ದರೂ ಮೈಸೂರಿನ ನಿಮ್ಮ ಗೆಳೆಯರ ಹತ್ತಿರ ತೋರಿಸಿಕೊಳ್ಳಿ ಎಂದು ಅರ್ಜುನ್ ಗೆ ಹೇಳಿದರು. ಇದಕ್ಕೆ ಬೇಸರಿಸಿಕೊಂಡ ಅರ್ಜುನ್ ಕೂಡಲೆ ಸೂಟ್ ಕೇಸ್ ಎತ್ತಿಕೊಂಡು ವಾಕ್ ಔಟ್ ಮಾಡಿದರು.
ಭಾರದ ಮನಸ್ಸಿನಿಂದ ಅರ್ಜುನ್ ತಮ್ಮ ಕಾರಿನಲ್ಲಿ ಹೊರಟುಹೋದರು. ಈ ಶೋನಲ್ಲಿ 237 ಜನ ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ನಿಮ್ಮನ್ನು ಕಾಯುತ್ತಿದ್ದಾರೆ. ನೀವು ಮಾತ್ರ ಮನೆಗೆ ಹೋಗಬೇಕು ಎನ್ನುತ್ತಿದ್ದೀರಿ. ಇಷ್ಟ ಇಲ್ಲ ಅಂದ್ರೆ ಹೊರಡಿ ಎಂದು ನೇರವಾಗಿ ಹೇಳಲಾಯಿತು.
ಜೂನಿಯರ್ಸ್ ತಂಡದ ಹೊಸ ಕ್ಯಾಪ್ಟನ್ ಆಗಿ ಶಿಲ್ಪಾ ಮಂಜುನಾಥ್ ಆಯ್ಕೆಯಾಗಿದ್ದಾರೆ. ಮನೆಯಿಂದ ಅರ್ಜುನ್ ಹೊರಹೋಗಿದ್ದರೂ ಈ ಬಾರಿ ಎಲಿಮೇಷನ್ ಇರುತ್ತದೆ ಎಂದು ಹೇಳಿದರು ಯೋಗಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











