ಜೀ ಕನ್ನಡದ 'ಸರಿಗಮಪ' ಚಾಂಪಿಯನ್ಶಿಪ್ ನೇರಪ್ರಸಾರ: ವೀಕ್ಷಕರ ಸಮ್ಮುಖದಲ್ಲೇ ವಿನ್ನರ್ ಘೋಷಣೆ
ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ 'ಸರಿಗಮಪ ಚಾಂಪಿಯನ್ಸ್' ಕೊನೆ ಹಂತ ತಲುಪಿದೆ. ಕಳೆದ ಮೂರು ತಿಂಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಸರಿಗಮಪ' ಕಾರ್ಯಕ್ರಮ ಗ್ರ್ಯಾಂಡ್ ಫಿನಾಲೆ ಇದೇ ಫೆಬ್ರವರಿ 26ಕ್ಕೆ ನಡೆಯಲಿದೆ. ವಿಶೇಷ ಅಂದರೆ, ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಜೀ ಕನ್ನಡ ನೇರಪ್ರಸಾರ ಮಾಡಲಿದೆ. ಹೀಗಾಗಿ ಈ ವೀಕೆಂಡ್ನಲ್ಲಿ ಕಿರುತೆರೆ ವೀಕ್ಷಕರಿಗೆ ಭರ್ಜರಿ ಸಂಗೀತದ ಮನರಂಜನೆ ಸಿಗಲಿದೆ.
ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಕಳೆದ ಸೀಸನ್ಗಳಲ್ಲಿ ಭಾಗವಹಿಸಿ ಉತ್ತಮವಾಗಿ ಹಾಡಿದ್ದ ಸ್ಪರ್ಧಿಗಳನ್ನು ಇಟ್ಟುಕೊಂಡು 'ಸರಿಗಮಪ' ಚಾಂಪಿಯನ್ಶಿಪ್ ನಡೆಸಿತ್ತು. ಮುಖ್ಯ ತೀರ್ಪುಗಾರರಾದ ನಾದ ಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಸಮ್ಮುಖದಲ್ಲಿ ಪ್ರತಿಭಾವಂತ ಗಾಯಕರು ತಮ್ಮ ಪ್ರತಿಭೆಯನ್ನು ಮತ್ತೊಂದು ತೋರಿಸಿದ್ದರು. ಮನರಂಜನೆ ಜೊತೆನೇ 'ಸರಿಗಮಪ' ಸ್ಪರ್ಧಿಗಳು ಸಂಗೀತ ಸುಧೆಯನ್ನು ಹರಿಸಿದ್ದರು. ಅದರ ಗ್ರ್ಯಾಂಡ್ ಫಿನಾಲೆ ಫೆಬ್ರವರಿ 26ರಂದು ನಡೆಯಲಿದೆ.

ಗ್ರ್ಯಾಂಡ್ ಫಿನಾಲೆಯಲ್ಲಿ 6 ತಂಡ
ಜೀ ಕನ್ನಡದ 'ಸರಿಗಮಪ' ಚಾಂಪಿಯನ್ಶಿಪ್ ಗ್ರ್ಯಾಂಡ್ ಫಿನಾಲೆಯಲ್ಲಿ 6 ತಂಡಗಳು ಭಾಗವಹಿಸಲಿವೆ. ಗಾಯಕ ಹೇಮಂತ್, ಅನುರಾಧ ಭಟ್, ನಂದಿತಾ, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್, ಸುಚೇತನ್ ಈ ಆರು ತಂಡಗಳ ಮೆಂಟರ್ ಆಗಿದ್ದಾರೆ. ಹೇಮಂತ್ ತಂಡದಲ್ಲಿ ಹನುಮಂತ, ವಸುಶ್ರೀ, ಶ್ರೀನಿಧಿ, ಕೀರ್ತನಾ, ಕಂಬದ ರಂಗಯ್ಯ ಹಾಗೂ ವಿಜೇತಾ ಸ್ಪರ್ಧಿಗಳು. ಅನುರಾಧ ಭಟ್ ಟೀಮ್ನಲ್ಲಿ ಅಂಕಿತಾ ಕುಂಡು, ಶ್ರೀ ಹರ್ಷ, ವರ್ಣ, ದರ್ಶನ್, ಅಭಿಶ್ಯಂತ್, ಮೆಹಬೂಬ್ ಭಾಗವಹಿಸುತ್ತಿದ್ದಾರೆ. ನಂದಿತಾ ಟೀಮ್ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಷಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ, ಇಂದು ನಾಗರಾಜ್ ತಂಡದಲ್ಲಿ ಸುನೀಲ್, ಸಾಕ್ಷಿ, ಸುಪ್ರಿತ್, ಅನ್ವಿತಾ, ಅಖಿಲಾ, ಗಗನಾ, ಲಕ್ಷ್ಮಿ ನಾಗರಾಜ್ ತಂಡದಲ್ಲಿ ಅಭಿನವ್, ನೇಹಾ, ಸದ್ವಿನಿ, ರಜತ್ ಮಯ್ಯ, ಶ್ರೀರಾಮ್, ಗುರುಕಿರಣ್ ಇದ್ದರೆ. ಸುಚೇತನ್ ತಂಡದಲ್ಲಿ, ಅಶ್ವಿನ್ ಶರ್ಮಾ, ಶರಧಿ ಪಾಟೀಲ್, ಜ್ಞಾನೇಶ, ಮದ್ವೇಶ್, ಅರುಂಧತಿ, ಆಶಾ ಸ್ಪರ್ಧಿಗಳಾಗಿದ್ದಾರೆ.

36 ಸ್ಪರ್ಧಿಗಳಿಂದ ನಿರಂತರ ಗಾಯನ
'ಸರಿಗಮಪ' ಚಾಂಪಿಯನ್ಶಿಪ್ ಗ್ರ್ಯಾಂಡ್ ಫಿನಾಲೆಯಲ್ಲಿ 36 ಸ್ಪರ್ಧಿಗಳು ನೇರಪ್ರಸಾರದಲ್ಲಿ ಹಾಡಲಿದ್ದಾರೆ. ತೀರ್ಪುಗಾರರ ಸಮ್ಮುಖದಲ್ಲಿ ಒಂದೊಂದು ತಂಡವೂ ಸಂಗೀತದ ಯುದ್ಧದಲ್ಲಿ ಸೆಣೆಸಾಡಲಿದೆ. ಒಂದೊಂದು ತಂಡದಿಂದ ಒಬ್ಬರೊಬ್ಬರು ವೇದಿಕೆ ಮೇಲೆ ತಮ್ಮ ತಂಡದಿಂದ ಹಾಡಲಿದ್ದಾರೆ. ಜನರಿಗೆ ಸಂಗೀತ ಜೊತೆಗೆ ಮನರಂಜನೆಯನ್ನೂ ಈ ಸ್ಪರ್ಧೆಯಲ್ಲಿ ಕಾಣಬಹುದಾಗಿದೆ. ಹೀಗಾಗಿ ಫೆಬ್ರವರಿ 26ರಂದು ನಡೆಯಲಿರುವ ಈ ನೇರಪ್ರಸಾರ ಕಾರ್ಯಕ್ರಮ ಮಸ್ತ್ ಮನರಂಜನೆ ನೀಡಲಿದೆ.
ತೀರ್ಪುಗಾರರೊಂದಿಗೆ ಆಡಿಯನ್ಸ್ ವೋಟ್ ಲೆಕ್ಕ
ಪ್ರತಿ ಸೀಸನ್ನಂತೆ ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರಗಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಸಮ್ಮುಖದಲ್ಲಿ ಈ 36 ಗಾಯಕರು ಹಾಡಿನ ಮೂಲಕ ಸ್ಪರ್ಧೆಗಿಳಿಯಲಿದ್ದಾರೆ. ಇದರೊಂದಿಗೆ ಆಡಿಯನ್ಸ್ ವೋಟ್ ಮಾಡಲು ಅವಕಾಶ ನೀಡಲಾಗಿದೆ. ಕಳೆದ ವಾರದಿಂದಲೇ ಆಡಿಯನ್ಸ್ ವೋಟ್ ಮಾಡಲು ಜೀ ಕನ್ನಡ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ತೀರ್ಪುಗಾರರು ಹಾಗೂ ವೀಕ್ಷಕರ ಅಭಿಪ್ರಾಯವನ್ನೂ ಸೇರಿಸಿ ವಿಜೇತರನ್ನು ಘೋಷಣೆ ಮಾಡಲಾಗುತ್ತೆ.

ಚಾಂಪಿಯನ್ಶಿಪ್ ಗೆದ್ದವರಿಗೇನು?
ಜೀ ಕನ್ನಡದ 'ಸರಿಗಮಪ' ಚಾಂಪಿಯನ್ಶಿಪ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಜೀ ಕನ್ನಡ ಕಡೆಯಿಂದ ಸಿಗಲಿದೆ. ಆದರೆ, ಆ ಬಹುಮಾನದ ಬಗ್ಗೆ ಜೀ ಕನ್ನಡ ಅಧಿಕೃತ ಮಾಹಿತಿ ನೀಡಿಲ್ಲ. ಒಟ್ಟು ಮೂರು ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿದ್ದು, ವಿನ್ನರ್, ಮೊದಲ ರನ್ನರ್ ಅಪ್ ಹಾಗೂ ಎರಡನೇ ರನ್ನರ್ ಅಪ್ ಎಂದು ಆಯ್ಕೆ ಮಾಡಲಿದೆ. ಹೀಗಾಗಿ ಈ ಬಾರಿ ಸರಿಗಮಪದಿಂದ ಮಸ್ತ್ ಮನರಂಜನೆ ಸಿಗಲಿದೆ.


Click it and Unblock the Notifications











