ಭಾರತ ರತ್ನ ಪ್ರಶಸ್ತಿಗೆ ದೀಪಿಕಾ ಪಡುಕೋಣೆ ಡಿಮ್ಯಾಂಡ್
ಬಾಡ್ಮಿಂಟನ್ ಕ್ರೀಡೆಯಲ್ಲಿನ ಅಪ್ಪನ ಸಾಧನೆಯನ್ನು ಗಮನಿಸಿ ಪ್ರಕಾಶ್ ಪಡುಕೋಣೆ ಅವರಿಗೆ ಭಾರತ ರತ್ನ ನೀಡುವಂತೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮತ್ತೊಮ್ಮೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಹಿಂದೊಮ್ಮೆಯೂ ದೀಪಿಕಾ ಅಪ್ಪನ ಪರ ವಕಾಲತ್ತು ವಹಿಸಿ ಮಾತನಾಡಿದ್ದರು. ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನಕ್ಕೆ ಪ್ರಕಾಶ್ ಪಡುಕೋಣೆ ಸಂಪೂರ್ಣ ಅರ್ಹರು ಎಂಬುದು ದೀಪಿಕಾರ ವಾದ.
"ಬ್ಯಾಡ್ಮಿಂಟನ್ ಆಟದಲ್ಲಿನ ಅವರ ಸಾಧನೆಯನ್ನು ಗಮನಿಸಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಿ. ಅವರ ಮಗಳಾಗಿ ನನ್ನ ಬಯಕೆ ಇಷ್ಟೆ" ಎಂದಿದ್ದಾರೆ ದೀಪಿಕಾ.
ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಪ್ರಕಾಶ್ ಪಡುಕೋಣೆ ಅವರು. ದೇಶದಲ್ಲಿ ಬ್ಯಾಂಡ್ಮಿಟನ್ ಕ್ರೀಡೆಗೆ ಜನಪ್ರಿಯತೆ ತಂದುಕೊಟ್ಟ ಹೆಗ್ಗಳಿಕೆ ಅವರದು ಎಂದಿದ್ದಾರೆ.
ದೀಪಿಕಾ ತಮ್ಮ ಮುಂದಿನ ಚಿತ್ರ 'ದೇಸಿ ಬಾಯ್ಸ್' ಪ್ರಚಾರದಲ್ಲಿ ಮಾತನಾಡುತ್ತಾ 'ಭಾರತ ರತ್ನ' ಪ್ರಶಸ್ತಿಯ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್, ಚಿತ್ರಾಂಗದ ಸಿಂಗ್ ಕೂಡ ಉಪಸ್ಥಿತರಿದ್ದರು.
ಡೇವಿಡ್ ಧವನ್ ಮಗ ರೋಹಿತ್ ಧವನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಪಾತ್ರವರ್ಗದಲ್ಲಿ ಜಾನ್ ಅಬ್ರಹಾಂ ಸಹ ಇದ್ದಾರೆ. ಈಗ ವಾದ ಮಾಡುವ ಸರದಿ ನಿಮ್ಮದು. ಪಡುಕೋಣೆಗೆ ಭಾರತ ರತ್ನ ನೀಡಬೇಕಾ ಅಥವಾ ಬೇಡವಾ ? (ಏಜೆನ್ಸೀಸ್)


Click it and Unblock the Notifications











