ರಜನಿಕಾಂತ್ ನಿಜವಾದ ಮಣ್ಣಿನ ಮಗ: ಬಿಗ್ ಬಿ
ಸರಿಸುಮಾರು ಒಂದು ದಶಕದ ಬಳಿಕ ಬಾಲಿವುಡ್ ಹೆಸರಾಂತ ನಟ ಅಮಿತಾಬ್ ಬಚ್ಚನ್ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಹಿಂದಿ ಚಿತ್ರದ 'ರೋಬೋಟ್' ಧ್ವನಿಸುರುಳಿ ಬಿಡುಗಡೆ ಸಮಾರಂಭ ಭಾರತೀಯ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಗೆ ಕರೆತಂದಿತ್ತು.
ಈ ಸಂದರ್ಭದಲ್ಲಿ ರಜನಿಕಾಂತ್ ಮಾತನಾಡುತ್ತಾ, ಅಮಿತಾಬ್ ಬಚ್ಚನ್ ನನಗೆ ಗುರು ಇದ್ದಂತೆ. ಅವರು ನನಗೆ ಸ್ಫೂರ್ತಿಯ ಸೆಲೆ, ರೋಲ್ ಮಾಡೆಲ್. ನಾನು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಈಗಲೂ ಅಷ್ಟೇ ಅಮಿತಾಬ್ ಅವರ ಸಲಹೆಯನ್ನು ಪಡೆಯುತ್ತೇನೆ ಎಂದರು. ತೊಂಬತ್ತರ ದಶಕದಲ್ಲಿ 'ಹಮ್' ಎಂಬ ಚಿತ್ರದಲ್ಲಿ ಇಬ್ಬರೂ ಜೊತೆಗೆ ನಟಿಸಿದ್ದರು ಬಳಿಕ ಇವರಿಬ್ಬರು ತೆರೆಯ ಮೇಲೆ ತೆರೆಯ ಹೊರಗೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.
ಇಬ್ಬರೂ ಒಟ್ಟಿಗೆ 'ಅಂಧ ಕಾನೂನು', 'ಗಿರಫ್ ದಾರ್', 'ಹಂ 'ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ಅವರ ಪ್ರೀತಿ, ಪ್ರೇಮ ಮತ್ತು ಅನುರಾಗಗಳನ್ನು ನಾನು ಇಂದಿಗೂ ಮರೆತಿಲ್ಲ ಎಂದು ಅಮಿತಾಬ್ ರ ಬಗ್ಗೆ ರಜನಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅಮಿತಾಬ್ ಮಾತನಾಡುತ್ತಾ, ದಕ್ಷಿಣದ ಸೂಪರ್ ಸ್ಟಾರ್ ರಜನಿ ನಿಜವಾದ ಮಣ್ಣಿನ ಮಗ ಎಂದು ಶ್ಲಾಘಿಸಿದರು.
ನನ್ನ ಸಹೋದ್ಯೋಗಿಯಾಗಿ, ಗೆಳೆಯನಾಗಿ ರಜನಿ ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಅವರನ್ನು ಪ್ರತಿಯೊಬ್ಬ ಭಾರತೀಯನು ಪ್ರೀತಿಸುವ ನಿಜವಾದ ಮಣ್ಣಿನ ಮಗ. ಅವರ ಮಾನವೀಯತೆ ಮತ್ತು ಹೃದಯ ವೈಶಾಲ್ಯತೆ ನನ್ನನ್ನು ಬಹಳಷ್ಟು ಪ್ರಭಾವಿಸಿದೆ ಎಂದಿದ್ದಾರೆ ಅಮಿತಾಬ್
ಚಿತ್ರದ ನಿರ್ದೇಶಕ ಶಂಕರ್ ಮಾತನಾಡುತ್ತಾ, ರೋಬೋಟ್ ಚಿತ್ರ ಹಾಲಿವುಡ್ ನ '2012', 'ಟರ್ಮಿನೇಟರ್', 'ಸ್ಪೈಡರ್ ಮ್ಯಾನ್' ಚಿತ್ರಗಳಂತೆ ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. 'ರೋಬೋಟ್' ಒಂದಕ್ಕೆ ಮಾನವ ಸಹಜ ಗುಣಗಳು ಬಂದರೆ ಏನಾಗುತ್ತದೆ ಎಂಬುದು ಚಿತ್ರದ ತಿರುಳು. ಆದರೆ ಮನುಷ್ಯನ ಸುಳ್ಳುಗಳು, ಹೊಟ್ಟೆಕಿಚ್ಚು ಮತ್ತು ನಂಬಿಕೆ ದ್ರೋಹದಂತಹ ಗುಣಗಳು ಇದಕ್ಕಿರುವುದಿಲ್ಲ ಎಂದು ತಮ್ಮ ಚಿತ್ರದ ಬಗ್ಗೆ ವಿವರ ನೀಡಿದರು.
ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಮಾತನಾಡುತ್ತಾ, 'ರೋಬೋಟ್' ಚಿತ್ರಕಥೆ ನಿರ್ದೇಶಕ ಶಂಕರ್ ಅವರ ಹೃದಯಕ್ಕೆ ಹತ್ತಿರವಾದ ಕಥೆ. ಈ ಕಥೆಗೆ ರಜನಿಕಾಂತ್ ತಮ್ಮ ಹೃದಯ ಹಾಗೂ ಆತ್ಮವನ್ನು ಬೆರೆಸಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಚಿತ್ರದ ಬಗ್ಗೆ ಒಂದೆರಡು ಅಭಿಪ್ರಾಯಗಳನ್ನು ಹಂಚಿಕೊಂಡರು, ಇದೊಂದು ವೈಜ್ಞಾನಿಕ ಚಿತ್ರವಾದರೂ ಜೈವಿಕ ಅಂಶಗಳಿಂದ ಕೂಡಿದ್ದು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಲಾಗಿದೆ ಎಂದರು.


Click it and Unblock the Notifications











