Puneetha Parva : ಅಪ್ಪು ಹಾಗೂ ದೊಡ್ಮನೆಯ ಪ್ರೀತಿ ನೆನದ ಅಮಿತಾಬ್ ಬಚ್ಚನ್
'ಗಂಧದ ಗುಡಿ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ 'ಪುನೀತ ಪರ್ವ' ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 21) ರಂದು ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ಖ್ಯಾತ ನಟ-ನಟಿಯರ ಜೊತೆಗೆ ಪರಭಾಷೆಯ ಖ್ಯಾತ ನಟ-ನಟಿಯರು ಸಹ ಭಾಗವಹಿಸಿದ್ದರು. ತಮಿಳಿನ ನಟ ಸೂರ್ಯ, ತೆಲುಗಿನ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಇನ್ನೂ ಹಲವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಲಾಗದೇ ಹೋದ ಕೆಲವು ನಟರು ವಿಡಿಯೋಗಳನ್ನು ಕಳಿಸಿದ್ದರು. ಅದರಲ್ಲಿ ಅಮಿತಾಬ್ ಬಚ್ಚನ್ ಹಾಗೂ ಕಮಲ್ ಹಾಸನ್ ಪ್ರಮುಖರು.
ಡಾ ರಾಜ್ಕುಮಾರ್ ಅವರಿಗೆ ಹಾಗೂ ದೊಡ್ಮನೆ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಪುನೀತ್ ರಾಜ್ಕುಮಾರ್ ಕುರಿತು ಮಾತನಾಡಿರುವ ವಿಶೇಷ ವಿಡಿಯೋವನ್ನು 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯ್ತು.

ನನ್ನಿಂದ ನಂಬಲು ಸಾಧ್ಯವಾಗದ ಸಂಗತಿ: ಬಚ್ಚನ್
''ಅಪ್ಪು ಬಗ್ಗೆ ಭೂತಕಾಲ ವಾಚಕ ಪದಗಳನ್ನು ಬಳಸಿ ಮಾತನಾಡುವುದು ಮನಸ್ಸಿಗೆ ಬಹಳ ಕಷ್ಟವುಂಟು ಮಾಡುತ್ತಿದೆ. ಪುನೀತ್ ಇಲ್ಲ ಎಂಬುದು ತಿಳಿದಾಗ ನನಗೆ ಆದ ಶಾಕ್ ಅನ್ನು ವ್ಯಕ್ತಿಪಡಿಸುವುದು ಅಸಾಧ್ಯ. ಅದೊಂದು ಅತ್ಯಂತ ನೋವಿನ ಸಂದರ್ಭ. ಈಗಲೂ ನನ್ನಿಂದ ನಂಬಲು ಸಾಧ್ಯವಾಗದ ಸಂಗತಿ ಅದು'' ಎಂದಿದ್ದಾರೆ ಅಮಿತಾಬ್ ಬಚ್ಚನ್.

ರಾಜ್ಕುಮಾರ್ ನನ್ನ ಆತ್ಮೀಯ ಗೆಳೆಯರಾಗಿದ್ದರು: ಬಚ್ಚನ್
''ಲೆಜೆಂಡರಿ ಡಾ.ರಾಜ್ಕುಮಾರ್ ನನ್ನ ಅತ್ಯಂತ ಆತ್ಮೀಯ ಗೆಳೆಯರಾಗಿದ್ದರು. ಅವರು ಮತ್ತು ಅವರ ಇಡೀ ಕುಟುಂಬ, ನನಗೆ ಹಾಗೂ ನನ್ನ ಇಡೀಯ ಕುಟುಂಬಕ್ಕೆ ಬಹಳ ಪ್ರೀತಿ ಮತ್ತು ಗೌರವ ನೀಡಿದೆ. ನಮ್ಮನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. 1982 ರಲ್ಲಿ ನಾನು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ನನಗಾಗಿ ವೈಯಕ್ತಿಕವಾಗಿ ಪ್ರಾರ್ಥನೆ ಸಹ ಮಾಡಿದ್ದರು. ಅವರ ಕುಟುಂಬದ ಈ ಪ್ರೀತಿಯನ್ನು ನಾನು ಎಂದಿಗೂ ಮರೆಯಲಾರೆ'' ಎಂದಿದ್ದಾರೆ ಬಚ್ಚನ್.

ಪುನೀತ್ ಅವರ ನಗು ಮರೆಯಲಾಗದ್ದು: ಬಚ್ಚನ್
''ಇದೇ ಸಂದರ್ಭದಲ್ಲಿ, ಆ ಕುಟುಂಬದ ಸದಸ್ಯ ಅಪ್ಪುವನ್ನು ಎಂದಿಗೂ ಮರೆಯಲಾರೆ. ಆತ ಇನ್ನೂ ಬಾಲಕನಾಗಿದ್ದಾಗ ಆತನನ್ನು ಮೊದಲು ಭೇಟಿಯಾದೆ. ಪುನೀತ್ ಬಳಿ ಬಹಳ ಸೆಳೆಯುತ್ತಿದ್ದ ವಿಷಯವೆಂದರೆ ಅವರು ಸದಾ ನಗುತ್ತಿರುತ್ತಿದ್ದರು. ಪುನೀತ್ ಅವರನ್ನು ಯಾವಾಗಲೇ ಆಗಲಿ, ಎಲ್ಲಿಯೇ ಆಗಲಿ ಭೇಟಿಯಾದರೂ ಅವರು ನಗುತ್ತಲೇ ಇರುತ್ತಿದ್ದರು. ಆ ನಗುವೇ ನಮ್ಮನ್ನೆಲ್ಲ ಅವರಿಗೆ ಇಷ್ಟು ಹತ್ತಿರಗೊಳಿಸಿದೆ ಎಂಬುದು ನನ್ನ ನಂಬಿಕೆ'' ಎಂದು ಅಪ್ಪು ನಗುವನ್ನು ನೆನಪು ಮಾಡಿಕೊಂಡಿದ್ದಾರೆ ಬಚ್ಚನ್.

'ಗಂಧದ ಗುಡಿ' ಅಪ್ಪುವಿನ ಕನಸು: ಬಚ್ಚನ್
''ಅಪ್ಪುವನ್ನು ನಾವು ಕಳೆದುಕೊಂಡಿದ್ದು ಬಹಳ ದುರದೃಷ್ಟಕರ ಸಂಗತಿ. ಅಪ್ಪುವಿನ ಕಡೆಯ ಸಿನಿಮಾ 'ಗಂಧದ ಗುಡಿ' ಅವರ ಕನಸು. ಈ ಸಿನಿಮಾದಲ್ಲಿ ಅವರು ಅವರಾಗಿಯೇ ನಟಿಸಿದ್ದಾರೆ, ಪ್ರಕೃತಿಯೊಟ್ಟಿಗೆ ಒಂದಾಗಿದ್ದಾರೆ, ಸಾಹಸಗಳನ್ನು ಮಾಡಿದ್ದಾರೆ, ಕಾಡುಗಳನ್ನು ಅಲೆದಿದ್ದಾರೆ. ಬನ್ನಿ ಪುನೀತ್ ಕೈಗೊಂಡ ಈ ಸಾಹಸ, ಅನ್ವೇಶಣಕಾರಿ ಯಾತ್ರೆಯಲ್ಲಿ ನಾವು ಭಾಗವಹಿಸೋಣ. ಅವರು ಅನುಭವಿಸಿದ ಅದ್ಭುತ ಅನುಭವವನ್ನೂ ನಾವೂ ಪಡೆದುಕೊಳ್ಳೋಣ'' ಎಂದಿದ್ದಾರೆ ಅಮಿತಾಬ್ ಬಚ್ಚನ್.


Click it and Unblock the Notifications











