ಅಕ್ಷಯ್ ಕುಮಾರ್ ಸಿನಿಮಾ ಬಗ್ಗೆ 'ಶಕ್ತಿಮಾನ್' ಅಸಮಾಧಾನ
ನಟ ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ ಬಾಂಬ್' ಸಿನಿಮಾ ಒಟಿಟಿಯಲ್ಲಿ ನವೆಂಬರ್ 7 ಕ್ಕೆ ಬಿಡುಗಡೆ ಆಗಲಿದೆ. ಬಿಡುಗಡೆಗೆ ಮುನ್ನಾ ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ ಈ ಸಿನಿಮಾ.
ಸಿನಿಮಾವು 'ಲವ್ ಜಿಹಾದ್'ಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಸಿನಿಮಾದಲ್ಲಿ ನಾಯಕ ಮುಸ್ಲಿಂ ಧರ್ಮೀಯನಾಗಿದ್ದು, ಹಿಂದು ಧರ್ಮೀಯ ಯುವತಿಯನ್ನು ಪ್ರೀತಿಸುತ್ತಾನೆ, ಇದು ಕೆಲವರಿಗೆ ಸಹ್ಯವಾಗಿಲ್ಲ, ಅವರು ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದರು.
ನಂತರ ಈಗ ಮತ್ತೊಂದು ವಿವಾದ ಎದ್ದಿದ್ದು, ಸಿನಿಮಾದ ಹೆಸರು ಸೂಕ್ತವಾಗಿಲ್ಲ, ಸಿನಿಮಾದ ಹೆಸರು ಹಿಂದು ದೇವತೆ ಲಕ್ಷ್ಮಿಗೆ ಅಪಮಾನ ಮಾಡುವಂತಿದೆ ಎಂಬ ವಿವಾದ ಎದ್ದಿದೆ. ವಿಶೇಷವೆಂದರೆ ಹಿರಿಯ ನಟರೊಬ್ಬರು ಸಹ ಇದಕ್ಕೆ ದನಿ ಗೂಡಿಸಿದ್ದಾರೆ.

ಲಕ್ಷ್ಮಿ ಬಾಂಬ್ ಸಿನಿಮಾದ ಬಗ್ಗೆ ಮುಖೇಶ್ ಆಕ್ಷೇಪ
ಶಕ್ತಿಮಾನ್ ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಮುಖೇಶ್ ಖನ್ನಾ ಅವರೂ ಸಹ ಸಿನಿಮಾದ ಹೆಸರಿನ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಸಿನಿಮಾದ ಹೆಸರು ಸರಿಯಿಲ್ಲ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಸುದೀರ್ಘ ಲೇಖನ ಸಹ ಬರೆದಿದ್ದಾರೆ.

'ಅಲ್ಲಾ ಬಾಂಬ್, ಬದ್ಮಾಶ್ ಜೀಸಸ್ ಎಂದು ಹೆಸರಿಡಿ ನೋಡೋಣ'
'ನೀವು ಅಲ್ಲಾ ಬಾಂಬ್, ಬದ್ಮಾಶ್ ಜೀಸಸ್ ಎಂದು ಸಿನಿಮಾಕ್ಕೆ ಹೆಸರಿಡಲು ಒಪ್ಪುತ್ತೀರಾ? ಎಂದು ಚಿತ್ರತಂಡವನ್ನು ಪ್ರಶ್ನೆ ಮಾಡಿದ್ದಾರೆ ಮುಖೇಶ್ ಖನ್ನಾ. ಲಕ್ಷ್ಮಿ ಹೆಸರಿನ ಮುಂದೆ ಬಾಂಬ್ ಸೆರಿಸಿರುವುದು ಕಿಡಿಗೇಡಿತನ ಅದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಇವರಿಗೆ ಹಿಂದುಗಳೆಂದರೆ ಭಯವಿಲ್ಲ: ಮುಖೇಶ್
ಈ ರೀತಿಯ ಹೆಸರನ್ನು ವಾಣಿಜ್ಯ ಉದ್ದೇಶಕ್ಕಾಗಿ ಇಡಲಾಗಿದೆ. ಚಿತ್ರ ನಿರ್ಮಿಸಿದವರಿಗೆ ಗೊತ್ತು, ಸಿನಿಮಾದ ಹೆಸರು ವಿವಾದ ಸೃಷ್ಟಿಸುತ್ತದೆ, ಅಷ್ಟೇ ಬೇಗ ವಿವಾದ ತಣ್ಣಗಾಗುತ್ತದೆ ಎಂದು. ಆದರೆ ವಿವಾದದಿಂದ ಸಿನಿಮಾಕ್ಕೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಇಂಥಹಾ ಹೆಸರಿಟ್ಟಿದ್ದಾರೆ. ಅವರಿಗೆ ಹಿಂದುಗಳ ಬಗ್ಗೆ ಭಯವಿಲ್ಲ, ಬೇರೆ ಧರ್ಮದ ಹೆಸರುಗಳನ್ನು ಸಿನಿಮಾಕ್ಕೆ ಇಡಲಿ ನೋಡೋಣ ಎಂದಿದ್ದಾರೆ ಮುಖೇಶ್.
Recommended Video

ಪ್ರೇಕ್ಷಕರೇ ಸಿನಿಮಾ ತಂಡಕ್ಕೆ ಬುದ್ಧಿಕಲಿಸಬೇಕು: ಮುಖೇಶ್
ಈ ಸಿನಿಮಾಕ್ಕೆ ಪ್ರೇಕ್ಷಕರೇ ಬುದ್ಧಿ ಕಲಿಸಬೇಕು, ಸಿನಿಮಾವನ್ನು ಬ್ಯಾನ್ ಮಾಡಬಾರದು, ಅದು ಬಿಡುಗಡೆ ಆಗಬೇಕು, ಆದರೆ ಯಾರೂ ಸಹ ಸಿನಿಮಾವನ್ನು ನೋಡಬಾರದು. ಹೆಸರು ಬದಲಾಯಿಸಿದರೆ ಮಾತ್ರವೇ ಸಿನಿಮಾ ನೋಡುವುದಾಗಿ ಒತ್ತಾಯ ಹೇರಬೇಕು ಎಂದಿದ್ದಾರೆ ಅವರು.


Click it and Unblock the Notifications











