ವಿಜಯ್ ಸೇತುಪತಿ ಸಿನಿಮಾದಿಂದ ಹೊರಬಂದ ಕಾರಣ ಬಹಿರಂಗ ಪಡಿಸಿದ ನಟಿ ಅದಿತಿ
ತಮಿಳು ನಟ ವಿಜಯ್ ಸೇತುಪತಿ ಇತ್ತೀಚಿಗೆ 800 ಸಿನಿಮಾದಿಂದ ಹೊರಬಂದ ಅಚ್ಚರಿ ಮೂಡಿಸಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷೆಯ ತುಘಲಕ್ ದರ್ಬಾರ್ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ಬಾಲಿವುಡ್ ನಟ ಅದಿತಿ ರಾವ್ ಹೈದರಿ ಸಿನಿಮಾದಿಂದ ಹೊರನಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಅದಿತಿ ಸಿನಿಮಾದಿಂದ ಹೊರನಡೆದ ಬಗ್ಗೆ ಸಿನಿಮಾತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ಅಲ್ಲದೆ ಅದಿತಿ ಜಾಗಕ್ಕೆ ತೆಲುಗಿನ ಮತ್ತೋರ್ವ ಖ್ಯಾತ ನಟಿ ರಾಶಿ ಖನ್ನಾ ಅವರನ್ನು ಕರೆತಂದಿದ್ದಾರೆ. ಅಂದ್ಹಾಗೆ ಸಿನಿಮಾದಿಂದ ಹೊರನಡೆದ ಬಗ್ಗೆ ನಟಿ ಅದಿತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಚಿತ್ರದಿಂದ ಹೊರಬಂದಿರುವ ಬಗ್ಗೆ ಟ್ವೀಟ್ ಮಾಡಿರುವ ಅದಿತಿ 'ಕೊರೊನಾ ವೈರಸ್ ನಿಂದ ಚಲನಚಿತ್ರೋದ್ಯಮ ಸೇರಿದಂತೆ ಈ ಜಗತ್ತು 6 ರಿಂದ 8 ತಿಂಗಳು ಸ್ಥಗಿತಗೊಂಡಿತ್ತು. ಹಂತ ಹಂತವಾಗಿ ಕೆಲಸ ನಿಧಾನವಾಗಿ ಪ್ರಾರಂಭವಾಗುತ್ತಿದೆ. ಮತ್ತೆ ನಮ್ಮ ವೇಳಪಟ್ಟಿಯನ್ನು ರಿ ಸೆಟ್ ಮಾಡಿಕೊಳ್ಳಬೇಕಿದೆ. ಒಬ್ಬ ಕಲಾವಿದೆಯಾಗಿ ಯಾರನ್ನು ಕಾಯಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನನಗಿದೆ. ನಾನು ಈಗಾಗಲೇ ಚಿತ್ರೀಕರಣ ಪ್ರಾರಂಭಮಾಡಿರುವ ಸಿನಿಮಾವನ್ನು ಮೊದಲು ಮುಗಿಸುತ್ತೇನೆ.'

'ಪ್ರಸ್ತುತ ಇರುವ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು ನಾನು ನಿರ್ದೇಶಕ ಪ್ರಸಾದ್ ಕುಮಾರ್ ದೀನದಾಯಲ್ ಅವರ ತುಘಲಕ್ ದರ್ಬಾರ್ ಯೋಜನೆಯಿಂದ ಒಂದು ಹೆಜ್ಜೆ ಹಿಂದಕ್ಕೆ ಇಡಲು ನಿರ್ಧರಿಸಿದ್ದೇನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ರಾಶಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೂ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ಶೀಘ್ರದಲ್ಲೇ ನಿಮ್ಮೆಲ್ಲರನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ ಎನ್ನುವ ಭರವಸೆ ನೀಡುತ್ತೇನೆ' ಎಂದು ದೀರ್ಘವಾಗಿ ಸಿನಿಮಾತಂಡದ ಬಗ್ಗೆ ಬರೆದುಕೊಂಡಿದ್ದಾರೆ.
ತುಘಲಕ್ ದರ್ಬಾರ್ ಸಿನಿಮಾಗೆ ಎಂಟ್ರಿ ಕೊಟ್ಟಿರುವ ರಾಶಿ ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಅಲ್ಲದೆ ಈ ಸಿನಿಮಾದ ಕಥೆ ಕೇಳಿ ರಾಶಿ ಕೂಡ ಇಂಪ್ರೆಸ್ ಆಗಿದ್ದಾರಂತೆ. ಅಂದ್ಹಾಗೆ ರಾಶಿ ಎರಡನೇ ಬಾರಿಗೆ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2019ರಲ್ಲಿ ಇಬ್ಬರು ಸಂಗಧಮಿಜನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಂದ್ಹಾಗೆ ಈಗಾಗಲೇ 50ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆಯಂತೆ. ಇತ್ತೀಚಿಗಷ್ಟೆ ವಿಜಯ್ ಮತ್ತು ರಾಶಿ ಒಂದು ಹಾಡನ್ನು ಚಿತ್ರೀಕರಿಸಲಾಗಿದೆಯಂತೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಮಾಡಿಕೊಂಡಿದೆ ಸಿನಿಮಾತಂಡ.


Click it and Unblock the Notifications











