ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಮೌನ ಮುರಿದ ಆದಿತ್ಯ ಠಾಕ್ರೆ
ಬಾಲಿವುಡ್ನ ಕೆಲ ಮಂದಿಯನ್ನು ಬಿಡುವಿಲ್ಲದಂತೆ ಕಾಡುತ್ತಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಇದೀಗ ರಾಜಕಾರಣಕ್ಕೂ ಕೈ ಚಾಚಿದೆ.
ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಬಾಲಿವುಡ್ನ ಕೆಲವು ಮಂದಿಯ ಸಂಬಂಧವಿದೆ ಎಂದು ಮೊದಲಿಗೆ ಕೆಲವು ದಿನ ಆರೋಪಿಸಲಾಗುತ್ತಿತ್ತು. ಆ ನಂತರ ಅದಕ್ಕೆ ರಾಜಕಾರಣಿಯ ಹೆಸರನ್ನೂ ಸಹ ಜೋಡಿಲಾಯಿತು.
ಅದರಲ್ಲಿಯೂ ಕಂಗನಾ ರಣೌತ್ ಅಂತೂ ಮಹಾರಾಷ್ಟ್ರದ ಭಾರಿ ಜನಪ್ರಿಯ ರಾಜಕಾರಣಿಯನ್ನೇ ಪ್ರಕರಣಕ್ಕೆ ಎಳೆ ತಂದರು. ಮಹಾರಾಷ್ಟ್ರ ಸಿಎಂ ಪುತ್ರ, ಸಚಿವ ಆದಿತ್ಯ ಠಾಕ್ರೆಗೂ ಸುಶಾಂತ್ ಸಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೆಸರು ಹೇಳದೆ ಆರೋಪ ಮಾಡಿದ್ದರು ಕಂಗನಾ.

ಸ್ಪಷ್ಟನೆ ನೀಡಿರುವ ಆದಿತ್ಯ ಠಾಕ್ರೆ
ಇದೀಗ ಸ್ವತಃ ಆದಿತ್ಯ ಠಾಕ್ರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಟ್ವಿಟ್ಟರ್ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಸುಶಾಂತ್ ಸಾವಿಗೂ ತಮಗೂ ದೂರ-ದೂರಕ್ಕೂ ಸಹ ಸಂಬಂಧವಿಲ್ಲ ಎಂದಿರುವ ಆದಿತ್ಯ ಠಾಕ್ರೆ, ಪ್ರಕರಣದಲ್ಲಿ ನನ್ನ ಹೆಸರು ಹೇಳುತ್ತಿರುವುದು ಕೆಟ್ಟ ರಾಜಕೀಯ ತಂತ್ರ ಎಂದಿದ್ದಾರೆ.

ಠಾಕ್ರೆ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಯತ್ನ: ಆದಿತ್ಯ ಠಾಕ್ರೆ
ಮಹಾರಾಷ್ಟ್ರ ಸರ್ಕಾರ ಜನಪ್ರಿಯತೆ, ಯಶಸ್ಸನ್ನು ಸಹಿಸಲಾಗದ ಕೆಲವು ಮಂದಿ ಅದಕ್ಕೆ ಮಸಿ ಬಳಿಯುವ ಸಲುವಾಗಿ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಸೇರಿಸುತ್ತಿದ್ದಾರೆ. ಅವರಿಗೆ ಠಾಕ್ರೆ ಕುಟುಂಬಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶವಿದೆ ಎಂದು ಹೇಳಿದ್ದಾರೆ.

ಬಾಲಿವುಡ್ ಮಹಾರಾಷ್ಟ್ರದ ಪ್ರಮುಖ ಅಂಗ: ಆದಿತ್ಯ
ಹಿಂದಿ ಸಿನಿಮಾ ಉದ್ಯಮವು ಮಹಾರಾಷ್ಟ್ರದ ಪ್ರಮುಖ ಅಂಗ. ನನಗೂ ಸಹ ಕೆಲವು ಸಿನಿಮಾ ಗಣ್ಯರ ಜೊತೆಗೆ ಸಂಪರ್ಕ ಇದೆ. ಆದರೆ ಅದು ಅಪರಾಧವಲ್ಲ. ಸುಶಾಂತ್ ಸಿಂಗ್ ಸಾವು ಖೇದಕರ, ದುರದೃಷ್ಟಕರ ಆದರೆ ಸಾವಿನ ಲಾಭವನ್ನು ಕೆಲವರು ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.

ದೂರ-ದೂರಕ್ಕೂ ನನಗೆ ಸಂಬಂಧವಿಲ್ಲ: ಆದಿತ್ಯಾ ಠಾಕ್ರೆ
ಈ ಪ್ರಕರಣಕ್ಕೆ ದೂರ-ದೂರಕ್ಕೂ ನನಗೆ ಸಂಬಂಧವಿಲ್ಲ. ನಾನು ಹಿಂದು ಹೃದಯಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಮೊಮ್ಮಗ. ನಾನು ಮಹಾರಾಷ್ಟ್ರಕ್ಕೆ, ಠಾಕ್ರೆ ಕುಟುಂಬಕ್ಕೆ ಕೆಟ್ಟ ಹೆಸರು ಬರುವ ಕಾರ್ಯವನ್ನು ಎಂದಿಗೂ ಮಾಡುವುದಿಲ್ಲ ಎಂದಿದ್ದಾರೆ ಸಚಿವ ಆದಿತ್ಯ ಠಾಕ್ರೆ.


Click it and Unblock the Notifications











