ಐಶೂ ಕುರಿತು ಕೊನೆಗೂ ಸತ್ಯ ಬಾಯ್ಬಿಟ್ಟ ಕರೀನಾ
ಬಾಲಿವುಡ್ ಅಂಗಳದಿಂದ 'ಶಾಕ್' ನ್ಯೂಸೊಂದು ಹೊರಬಿದ್ದಿದೆ. ಟನಿ ಕರೀನಾ ಕಪೂರ್ ಸ್ವತಃ ಈ ಮಾತನ್ನು ಹೇಳಿದ ವೇಳೆ ಇದನ್ನು ಅದೆಷ್ಟೋ ಜನ 'ಬ್ರೇಕಿಂಗ್ ನ್ಯೂಸ್' ಅಂದವರೂ ಇದ್ದಾರೆ. ಕರೀನಾ ಯಾವತ್ತೂ ಐಶ್ವರ್ಯಾ ರೈ ಅವರನ್ನು ಹೊಗಳಿದ್ದೇ ಇರಲಿಲ್ಲ. ತಮ್ಮ ಶತ್ರು ಎಂಬಂತೆ ನೋಡುತ್ತಿದ್ದ ಕರೀನಾ ಬಾಯಿಂದ ಅಪರೂಪದ ಮಾತುಗಳು ಹೊರಬಿದ್ದಿವೆ. ಬಾಲಿವುಡ್ ನಿಜವಾಗಿಯೂ ಬೆಚ್ಚಿಬಿದ್ದಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ ಬಗ್ಗೆ ಕೇಳಲಾದ ಪ್ರಶ್ನೆಗೆ ಕರೀನಾ ಕಪೂರ್ "ಐಶ್ವರ್ಯಾ ರೈ ಬಾಲಿವುಡ್ ಸಿನಿಮಾ ಜಗತ್ತಿನ ಅತ್ಯಂತ ಹಾಗೂ ಏಕೈಕ ಸುಂದರಿ. ಅವರಷ್ಟು ಪ್ರತಿಭಾವಂತರು ಬೇರೆ ಯಾರೂ ಇಲ್ಲ. ಅಷ್ಟೇ ಅಲ್ಲ, ಅವರು ಸಾಕಷ್ಟು ನಟಿಯರಿಗೆ (ಐಕಾನ್) ಮಾದರಿ. ಒಂದೇ ಶಬ್ಧದಲ್ಲಿ ಹೇಳಬೇಕೆಂದರೆ ಅವರು 'ಸೌಂದರ್ಯ ದೇವತೆ.' ಅವರನ್ನು ಮೀರಿಸುವಂತ ನಟಿ ಸದ್ಯಕ್ಕೆ ಯಾರೂ ಇಲ್ಲ" ಎಂದು ಮನಃಪೂರ್ವಕವಾಗಿ ಹೇಳಿದ್ದಾರೆ.
ಇಷ್ಟು ಕಾಲ ಕರೀನಾ ಐಶೂ ಬಗ್ಗೆ ಅಸೂಯೆ ಪಡುತ್ತಿದ್ದ ಕಾರಣ ಬಹಳಷ್ಟು ಜನರಿಗೆ ಗೊತ್ತಿರುವಂತೆ, ಕರೀನಾ ಅಕ್ಕ ಕರಿಷ್ಮಾ ಎಂಗೇಜ್ ಮೆಂಟ್ ಗೆ ಸಂಬಂಧಿಸಿದ್ದು. ಅಂದುಕೊಂಡಂತೆ ನಡೆದಿದ್ದರೆ ಕರಿಷ್ಮಾ ಕಪೂರ್, ಅಭಿಷೇಕ್ ಬಚ್ಚನ್ ಹೆಂಡತಿಯಾಗಿ ಅಮಿತಾಬ್ ಮನೆ ಸೇರಬೇಕಿತ್ತು. ಆದರೆ, ಮಾತುಕತೆ ಮುಗಿದು ಇನ್ನೇನು ಎಂಗೇಜ್ ಮೆಂಟ್ ಆಗಬೇಕು ಎನ್ನುವಷ್ಟರಲ್ಲಿ ಅದೇನಾಯ್ತೋ ಏನೋ, ಎಂಗೇಜ್ ಮೆಂಟ್ ಮುರಿದುಬಿತ್ತು!
ಅಂದುಕೊಂಡಿದ್ದು ನಡೆಯಲಿಲ್ಲ, ಕರಿಷ್ಮಾ ಬದಲು ಐಶ್ವರ್ಯಾ ರೈ ಛೋಟಾ ಬಚ್ಚನ್ ಮಡದಿಯಾಗಿ ಅಮಿತಾಬ್ ಬಚ್ಚನ್ ಮನೆ ಸೇರಿಕೊಂಡಿದ್ದಾಯ್ತು. ಆ ದಿನದಿಂದ ಐಶೂ ಬಗ್ಗೆ ಕರೀನಾ ಯಾವತ್ತೂ ಒಳ್ಳೆಯ ಮಾತುಗಳನ್ನು ಆಡಿರಲೇ ಇಲ್ಲ. ಈಗ ಅವಳ ಬಾಯಿಂದ ಬಂದಿರುವ ಮುತ್ತಿನಂತ ಮಾತು ಕೇಳಿ ಎಲ್ಲರೂ ಬೆರಗಾಗಿದ್ದಾರೆ. ಜೊತೆಗೆ 'ಸತ್ಯ ಯಾವತ್ತಿದ್ದರೂ ವೈರಿಯ ಬಾಯಿಂದಲೂ ಹೊರಗೆ ಬರಲೇಬೇಕು' ಎಂಬ ಮಾತನ್ನು ಹೇಳಿಕೊಂಡು ಮುಸಿಮಸಿ ನಗುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











