29 ವರ್ಷದ ಹಿಂದೆ ಆ ಸಿನಿಮಾ ನಿರಾಕರಿಸಿದ್ದಕ್ಕೆ ಈಗಲೂ ಪಶ್ಚಾತಾಪ ಪಡುತ್ತಿದ್ದಾರೆ ನಟಿ
ಸಿನಿಮಾ ನಟ-ನಟಿಯರಿಗೆ 'ಸೂಕ್ತ ಆಯ್ಕೆ' ಎಂಬುದು ಬಹಳ ಅಗತ್ಯ. ಒಂದು ಸರಿಯಾದ ನಿರ್ಧಾರ ಸಾಮಾನ್ಯ ನಟನೊಬ್ಬನ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಅದೇ ಒಂದು ತಪ್ಪು ನಿರ್ಧಾರ ಸ್ಟಾರ್ ಅನ್ನು ಸಹ ಕೆಳಗೆ ಬೀಳುವಂತೆ ಮಾಡುತ್ತದೆ.
ಕೈತಪ್ಪಿಹೋದ ಅವಕಾಶಕ್ಕಾಗಿ ಅಥವಾ ತಾವೇ ನಿರಾಕರಿಸಿದ ಅವಕಾಶಕ್ಕಾಗಿ ಜೀವನ ಪೂರ್ತಿ ಪಶ್ಚಾತಾಪ ಪಡುವ ಹಲವಾರು ನಟ-ನಟಿಯರಿದ್ದಾರೆ. ಅವರಲ್ಲಿ ಒಬ್ಬರು ನಟಿ ಆಯೆಷಾ ಜುಲ್ಕಾ.
1992 ರಲ್ಲಿ ಬಿಡುಗಡೆ ಆದ ಎವರ್ ಗ್ರೀನ್ ಸಿನಿಮಾ 'ರೋಜಾ' ಬಹುತೇಕರಿಗೆ ಗೊತ್ತಿರುವಂಥಹದ್ದೇ. ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ ಈ ಸಿನಿಮಾದ ನಾಯಕಿ ಪಾತ್ರಕ್ಕಾಗಿ ಮೊದಲ ಆಯ್ಕೆ ಆಗಿದ್ದಿದ್ದು ಆಯೆಷಾ ಜುಲ್ಕಾ. ಆದರೆ ಅವಕಾಶ ನಿರಾಕರಿಸಿದರು ಆಯೆಷಾ ಜುಲ್ಕಾ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಆಯೆಷಾ ಜುಲ್ಕಾ, ನಿರ್ದೇಶಕ ಮಣಿರತ್ನಂ ಅವರ 'ರೋಜಾ' ಸಿನಿಮಾದಲ್ಲಿ ನಟಿಸದೇ ನಿರಾಕರಿಸಿದ್ದನ್ನು ನಾನು ಬಹುವಾಗಿ ವಿಷಾಧಿಸುತ್ತೇನೆ. ಆ ಸಮಯದಲ್ಲಿ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ನಾನು ಆ ಸಿನಿಮಾದಲ್ಲಿ ನಟಿಸಲಾಗಲಿಲ್ಲ. ಆ ಸಿನಿಮಾದಲ್ಲಿ ಮಧು ನಾಯಕಿಯಾಗಿ ನಟಿಸಿದರು ಎಂದಿದ್ದಾರೆ ಆಯೆಷಾ.

ಪ್ರೇಮ್ ಖೈದಿ ಸಿನಿಮಾವನ್ನು ಸಹ ನಿರಾಕರಿಸಿದೆ: ಆಯೆಷಾ
ಆ ನಂತರ, ತೆಲುಗಿನ ರಾಮಾ ನಾಯ್ಡು ಅವರು ನಿರ್ಮಸಿದ್ದ ಹಿಂದಿಯ 'ಪ್ರೇಮ್ ಖೈದಿ' ಸಿನಿಮಾದಲ್ಲಿ ಸಹ ನಟಿಸುವ ಅವಕಾಶ ಇತ್ತು. ಆದರೆ ಆ ಸಿನಿಮಾದಲ್ಲಿ ನಾನು ಬಿಕಿನಿ ತೊಡಬೇಕಿತ್ತು. ಹಾಗಾಗಿ ಅದರಲ್ಲಿ ನಟಿಸಲಿಲ್ಲ. ಇಂಥಹಾ ಅನೇಕ ಸಿನಿಮಾಗಳು ನನ್ನ ಕೈತಪ್ಪಿ ಹೋಗಿವೆ. ಕೆಲವು ಸಿನಿಮಾಗಳು ಕೈತಪ್ಪಿದ್ದಕ್ಕೆ ವಿಷಾದವಿದೆ, ಕೆಲವಕ್ಕೆ ಇಲ್ಲ ಎಂದಿದ್ದಾರೆ ಆಯೆಷಾ.

ಅಕ್ಷಯ್ ಕುಮಾರ್, ಅಮೀರ್ ಖಾನ್ ಜೊತೆ ನಟನೆ
ಅಕ್ಷಯ್ ಕುಮಾರ್, ಅಮೀರ್ ಖಾನ್, ಗೊವಿಂದಾ ಇನ್ನೂ ಅನೇಕ ಸ್ಟಾರ್ಗಳ ಜೊತೆಗೆ 90 ರ ದಶಕದಲ್ಲಿ ನಾಯಿಕಿಯಾಗಿ ನಟಿಸಿದ್ದ ಆಯೆಷಾ ಈಗ ಬಾಲಿವುಡ್ನಿಂದ ದೂರ ಉಳಿದಿದ್ದಾರೆ. ಆದರೆ ತಮಗೆ ಮತ್ತೆ ಅಮೀರ್ ಖಾನ್ ಜೊತೆಗೆ ನಟಿಸುವ ಆಸೆಯಿದೆ ಎಂದಿದ್ದಾರೆ ಈ ನಟಿ. ಅಮೀರ್ ಜೊತೆಗೆ 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾದಲ್ಲಿ ನಟಿಸಿದ್ದರು ಆಯೆಷಾ.

ಜಾನ್ ಅಬ್ರಹಾಂ ಒಳ್ಳೆಯ ವ್ಯಕ್ತಿ: ಆಯೆಷಾ
ನಾನು ಪ್ರಾಣಿಗಳಿಗಾಗಿ ಸೇವೆ ಮಾಡುತ್ತಿದ್ದೇನೆ. ಜಾಕಿ ಶ್ರಾಫ್, ಹೇಮಾ ಮಾಲಿನಿ, ಭಾಗ್ಯಶ್ರಿ, ರವೀನಾ ಟಂಡನ್ ಇನ್ನೂ ಹಲವರೊಂದಿಗೆ ಈಗಲೂ ಸಂಪರ್ಕದಲ್ಲಿದ್ದೇನೆ. ಅವರೆಲ್ಲಾ ನನ್ನ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಾನು ಜಾನ್ ಅಬ್ರಾಹಂ ಹೆಸರು ಹೇಳಲೇ ಬೇಕು. ಆತನ ವೈಯಕ್ತಿಕ ಪರಿಚಯ ನನಗೆ ಇಲ್ಲದೇ ಇದ್ದರೂ, ಆತನೇ ನನಗೆ ಕರೆ ಮಾಡಿ ಸಹಾಯ ಮಾಡುವುದಾಗಿ ಹೇಳಿದ, ಆತ ಅದ್ಭುತವಾದ ವ್ಯಕ್ತಿ' ಎಂದಿದ್ದಾರೆ ಆಯೆಷಾ.

ಹಲವು ವರ್ಷಗಳ ಬಳಿಕ ಅಮೀರ್ ಖಾನ್ ಭೇಟಿ
ನಾನು ಹಲವಾರು ವರ್ಷಗಳ ಬಳಿಕ ಅಮೀರ್ ಖಾನ್, ಗೋವಿಂದಾ ಅವರುಗಳನ್ನು ಭೇಟಿಯಾದೆ. ಇಷ್ಟು ವರ್ಷವಾದರೂ ಅವರ್ಯಾರೂ ಬದಲಾಗಿಲ್ಲ. ಈಗಲೇ ಅದೇ ಪ್ರೀತಿ, ಅದೇ ಸ್ನೇಹ. ಅಮೀರ್ ಖಾನ್ ಒಬ್ಬ ಅದ್ಭುತ ನಟ. ನಟನೆಗಾಗಿ ಆತ ಹಾಕುವ ಶ್ರಮ ಮಾದರಿ. ಆತನೊಂದಿಗೆ ಮತ್ತೆ ನಟಿಸುವ ಆಸೆ ಇದೆ. ಪ್ರಸ್ತುತ ಸ್ಕ್ರಿಪ್ಟ್ ಒಂದನ್ನು ಬರೆಯುತ್ತಿದ್ದು, ನಿರ್ದೇಶಕಿ ಆಗುವ ತಯಾರಿಯಲ್ಲಿದ್ದೇನೆ ಎಂದರು ನಟಿ ಆಯೆಷಾ.


Click it and Unblock the Notifications











