The Kashmir Files: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನಕ್ಕೆ ಅಡಚಣೆ, ಚಿತ್ರಮಂದಿರದಲ್ಲಿ ಗಲಾಟೆ
'ದಿ ಕಾಶ್ಮೀರ್ ಫೈಲ್ಸ್' ಈಗ ಸಿನಿಮಾ ಆಗಿ ಮಾತ್ರವೇ ಉಳಿದಿಲ್ಲ. ಅದು ಸ್ಪಷ್ಟ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದೆ. ನಿನ್ನೆ ಸ್ವತಃ ಮೋದಿ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ಇನ್ನು ವಿಪಕ್ಷಗಳು, ಹಿಂದು ಮತ ಧೃವೀಕರಣಕ್ಕಾಗಿ ಬಿಜೆಪಿ ಸರ್ಕಾರ ಅರೆ ಸತ್ಯದ ಈ ಸಿನಿಮಾಕ್ಕೆ ಪ್ರಚಾರ ನೀಡುತ್ತಿದೆ ಎಂದು ಆರೋಪಿಸಿವೆ.
ಕರ್ನಾಟಕದಲ್ಲಿಯೂ ಈ ಸಿನಿಮಾ ಬಗ್ಗೆ ವಿಧಾನಸಭೆ, ಪರಿಷತ್ನಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಬಿಜೆಪಿಯ ಶಾಸಕರು, ಸಚಿವರು ಒಟ್ಟಾಗಿ ಸಿನಿಮಾದ ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆ. ಸಚಿವ ರೇಣುಕಾಚಾರ್ಯ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸದವರು ದೇಶದ್ರೋಹಿಗಳು'' ಎಂದು ಬಿಟ್ಟಿದ್ದಾರೆ.
ಈ ಸಿನಿಮಾದ ಮೂಲಕ ಅತಿಯಾದ ಭಾವ ಪ್ರಚೋದನೆ ಮಾಡಲಾಗಿದೆ, ಯಾವ ಮಟ್ಟಿಗೆಂದರೆ ನಿನ್ನೆ ಸಂಜೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನದ ವೇಳೆ ಸಣ್ಣ ಅಡಚಣೆ ಆಗಿದ್ದನ್ನೆ ದೊಡ್ಡದು ಮಾಡಿ ಜೋರು ಗಲಾಟೆ ಮಾಡಲಾಗಿದೆ.

ಮಾರ್ಚ್ 15 ರ ರಾತ್ರಿ ನೊಯ್ಡಾದ ಮಾಲ್ ಒಂದರಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಆಗುತ್ತಿತ್ತು. ಆ ಸಮಯದಲ್ಲಿ ಮಾಲ್ನ ಸೆಂಟ್ರಲ್ ಹವಾನಿಯಂತ್ರಣ ವ್ಯವಸ್ಥೆ ಕೈಕೊಟ್ಟಿದ್ದರಿಂದ ಮಾಲ್ ವ್ಯವಸ್ಥಾಪಕರು ಸಿನಿಮಾವನ್ನು ಕೆಲ ಕ್ಷಣ ಬಂದ್ ಮಾಡಿದರು.
ಇದರಿಂದ ಕುಪಿತಗೊಂಡ ಸಿನಿಮಾ ವೀಕ್ಷಕರು ಜೋರು ಗಲಾಟೆ ಆರಂಭಿಸಿದರು. ಉದ್ದೇಶಪೂರ್ವಕವಾಗಿ ಸಿನಿಮಾವನ್ನು ಬಂದ್ ಮಾಡಲಾಗಿದೆ ಎಂಬ ಆರೋಪವನ್ನೂ ಮಾಡಲಾಯ್ತು. ಸಿನಿಮಾ ಪ್ರದರ್ಶನವಾಗುತ್ತಿದ್ದ ಮಾಲ್ ಅಲ್ಪಸಂಖ್ಯಾತ ಕೋಮಿನ ವ್ಯಕ್ತಿಯ ಮಾಲೀಕತ್ವದ್ದಾಗಿದ್ದರಿಂದ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿದೆ ಎಂದು ಗಲಾಟೆ ಎಬ್ಬಿಸಿದರು. ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ತೀವ್ರವಾಗಿ ಹರಡಿತು. ಗಲಾಟೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಸೆಕ್ಟರ್ 39 ಠಾಣೆಯ ಪೊಲೀಸರು ಆಗಮಿಸಿ ಸಿನಿಮಾ ವೀಕ್ಷಕರನ್ನು ಸಮಾಧಾನಪಡಿಸಿದರು. ಕೆಟ್ಟು ಹೋಗಿದ್ದ ಸೆಂಟ್ರಲ್ ಎಸಿಯನ್ನು ರಿಪೇರಿ ಮಾಡಿ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆಸಲಾಯಿತು.
ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ''ಮಾಲ್ನ ಎಸಿ ವ್ಯವಸ್ಥೆಯಲ್ಲಿ ಸಮಸ್ಯೆ ಆಗಿತ್ತು ಹಾಗಾಗಿ ಸಿನಿಮಾ ಪ್ರದರ್ಶನವನ್ನು ಕೆಲ ಕಾಲ ಬಂದ್ ಮಾಡಲಾಗಿತ್ತೇ ವಿನಃ ಬೇರೆ ಕಾರಣಕ್ಕಾಗಿ ಸಿನಿಮಾವನ್ನು ಬಂದ್ ಮಾಡಲಾಗಿರಲಿಲ್ಲ. ಎಸಿ ಸರಿಮಾಡಿದ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆಸಲಾಗಿಯಿತು'' ಎಂದಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಶ್ಮೀರಿ ಪಂಡಿತರ ಮೇಲೆ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಅನುಪಮ್ ಖೇರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ.
ಕರ್ನಾಕಟ ಸೇರಿದಂತೆ ಇನ್ನೂ ಕೆಲವು ಬಿಜೆಪಿ ಆಡಳಿತವುಳ್ಳ ರಾಜ್ಯಗಳಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ನಿನ್ನೆ ಬಿಜೆಪಿ ಸಂಸದೀಯ ಇದೇ ಸಿನಿಮಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ''ಯಾರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಾವುಟ ಹಿಡಿದು ಓಡಾಡುತ್ತಿದ್ದರೊ ಅವರೇ ಕಳೆದ ಐದಾರು ದಿವಸಗಳಿಂದ ಆವೇಶದಿಂದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಸತ್ಯ ಹಾಗೂ ಕಲೆಯ ಆಧಾರದಲ್ಲಿ ಸಿನಿಮಾವನ್ನು ವಿಮರ್ಶೆ ಮಾಡುವುದು ಬಿಟ್ಟು ಸಿನಿಮಾದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ'' ಎಂದಿದ್ದಾರೆ. ಅಲ್ಲದೆ, ''ಯಾರು ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಇತಿಹಾಸವನ್ನು ಅದುಮಿಡುವ ಯತ್ನ ಮಾಡಿದ್ದರೊ ಅವರನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕೆರಳಿಸಿದೆ'' ಎಂದಿದ್ದಾರೆ. ಇದರಿಂದಾಗ ಜನ ಸಿನಿಮಾವನ್ನು ಮತ್ತಷ್ಟು ಧರ್ಮೀಯ ಹಾಗೂ ರಾಜಕೀಯ ಕೋನದಿಂದ ನೋಡಲು ಆರಂಭಿಸಿದ್ದಾರೆ.


Click it and Unblock the Notifications











