ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆಯೇ?: ಕರಾವಳಿ ಯುವತಿಯ ಅಮ್ಮ ಹೇಳಿದ್ದೇನು?
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೂ ಅದಕ್ಕೆ ಕೆಲವೇ ದಿನಗಳ ಮುಂಚೆ ನಡೆದ ದಿಶಾ ಸಾಲಿಯಾನ್ ಸಾವಿಗೂ ನಂಟು ಇದೆ ಎಂದು ಹೇಳಲಾಗುತ್ತಿದೆ. ವಿವಿಧ ಕಲಾವಿದರಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ದಿಶಾ ಸಾಲಿಯಾನ್, ಸುಶಾಂತ್ ಸಿಂಗ್ ರಜಪೂತ್ ಬಳಿಯೂ ಕೆಲಸ ಮಾಡಿದ್ದರು.
ಜೂನ್ 9ರಂದು ಮುಂಬೈನ ಮಲಾದ್ನ ಮನೆಯ 14ನೇ ಮಹಡಿಯಿಂದ ಬಿದ್ದಿದ್ದ ದಿಶಾ ಸಾಲಿಯಾನ್ ಮೃತಪಟ್ಟಿದ್ದರು. ಇದು ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಉಡುಪಿ ಮೂಲದವರಾದ ದಿಶಾ ಬಾಲಿವುಡ್ನಲ್ಲಿ ಅನೇಕರ ಜತೆ ಕೆಲಸ ಮಾಡಿದ್ದರೂ, ಅವರ ಆತ್ಮಹತ್ಯೆ ಬಳಿಕ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಎಂದೇ ಬಿಂಬಿಸಲಾಗಿತ್ತು. ದಿಶಾ ಸಾವಿನ ಕುರಿತು ಸರಿಯಾದ ತನಿಖೆ ನಡೆದಿಲ್ಲ. ಅವರ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆ. ದಿಶಾ ಸಾಯುವ ಹಿಂದಿನ ರಾತ್ರಿ ಪಾರ್ಟಿಯೊಂದು ನಡೆದಿತ್ತು. ಅಲ್ಲಿ ಏನೂ ಅಹಿತಕರ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಂಬೈನಲ್ಲಿರುವ ಬಿಹಾರ ಪೊಲೀಸರು ಕೂಡ ಈ ಎರಡೂ ಸಾವಿನ ಪ್ರಕರಣಗಳ ನಡುವೆ ಸಂಬಂಧ ಇರಬಹುದೇ ಎಂಬ ಆಯಾಮದಿಂದಲೇ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ದಿಶಾ ಕುಟುಂಬ ಹೇಳಿಕೆಯೊಂದನ್ನು ನೀಡಿದೆ. ಮುಂದೆ ಓದಿ...

ವದಂತಿಗಳೆಲ್ಲ ಸುಳ್ಳು
ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ದಿಶಾ ಕುಟುಂಬ, ಆಕೆಯ ಸಾವಿನ ಸುತ್ತ ಅನಗತ್ಯ ರೂಮರ್ಗಳು, ಸಂಚಿನ ಥಿಯರಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿವೆ. ಈ ರೀತಿ ಸುದ್ದಿಗಳನ್ನು ಹರಡುತ್ತಿರುವವರಿಗೆ ದಿಶಾ ಅಥವಾ ನಾವು ವೈಯಕ್ತಿಕವಾಗಿ ತಿಳಿದಿಲ್ಲ. ಆಕೆಯ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇವೆ. ಆಕೆಯ ಸಾವಿನ ಕುರಿತು ಕೇಳಿಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಕಳೆದ ತಿಂಗಳು ಹೇಳಿತ್ತು.

ಸುಶಾಂತ್ ಸಾವಿಗೆ ಸಂಬಂಧವಿಲ್ಲ
ಈಗ ಸಂದರ್ಶನವೊಂದರಲ್ಲಿ ಮಾತನಾಡಿದರುವ ದಿಶಾ ತಾಯಿ ವಾಸಂತಿ ಸಾಲಿಯಾನ್, ಮಗಳ ಸಾವಿಗೂ ಮತ್ತು ಸುಶಾಂತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ವದಂತಿಗಳನ್ನು ನಿರಾಕರಿಸಿದ್ದಾರೆ. ಸುಶಾಂತ್ ಜತೆ ಕೆಲಸ ಮಾಡುತ್ತಿರುವುದಾಗಿ ಎಂದೂ ದಿಶಾ ಹೇಳಿಲ್ಲ. ಹಾಗೆ ಅವರೊಂದಿಗೆ ಕೆಲಸ ಮಾಡಿದ್ದರೂ ಅದೇನೂ ದೊಡ್ಡ ಕೆಲಸವಾಗಿರಲಿಕ್ಕಿಲ್ಲ. ಒಂದೆರಡು ಬಾರಿ ಸಣ್ಣ ಭೇಟಿಯಾಗಿರಬಹುದಷ್ಟೇ ಎಂದಿದ್ದಾರೆ.

ಸಂಚು ನಡೆದಿದೆ ಎನ್ನಲಾಗದು
ದಿಶಾ ಬಹಳ ಲವಲವಿಕೆಯ ಹುಡುಗಿ. ಸದಾ ಕೆಲಸ, ಸ್ನೇಹಿತರು ಮತ್ತು ಕುಟುಂಬ ಎಂದು ತನ್ನನ್ನು ತೊಡಗಿಸಿಕೊಂಡಿರುತ್ತಿದ್ದಳು. ದಿಶಾ ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಆದರೂ ಹೇಗೋ ಬದುಕುತ್ತಿದ್ದೇವೆ. ದಿಶಾ ಬದುಕಿನಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದಳೇ ಎನ್ನುವುದೂ ತಿಳಿದಿಲ್ಲ. ಏಕೆಂದರೆ ಆಕೆ ಅದನ್ನು ಎಂದಿಗೂ ತೋರಿಸಿಕೊಂಡವಳಲ್ಲ. ಆದರೆ ಈ ಸಾವಿನ ಹಿಂದೆ ಯಾವುದೋ ಸಂಚು ನಡೆದಿದೆ ಎನ್ನುವುದನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಸತ್ಯ ಹೇಳಲು ಯಾವ ಭಯವೂ ಇಲ್ಲ
ತಾವು ಯಾರ ಬಗ್ಗೆಯೂ ಭಯ ಪಡುವ ಅಗತ್ಯವೇ ಇಲ್ಲ. ಏಕೆಂದರೆ ತಮಗೆ ಇದ್ದ ಏಕೈಕ ದೌರ್ಬಲ್ಯವೆಂದರೆ ಅದು ಮಗಳ ದಿಶಾ ಮಾತ್ರ. ಈಗ ಆಕೆಯೇ ಇಲ್ಲ ಎಂದು ವಾಸಂತಿ ಹೇಳಿದ್ದಾರೆ. ದಿಶಾ ಸಾವಿಗೆ ಇಂತಹವರೇ ಹೊಣೆಗಾರರು ಎಂಬ ಅನುಮಾನ ಮೂಡಿದರೆ ಅದನ್ನು ಬಹಿರಂಗವಾಗಿ ಹೇಳಲು ಒಂದೆರಡು ಸಲ ಯೋಚಿಸುವುದೂ ಕೂಡ ಬೇಕಿಲ್ಲ. ಆದರೆ ಯಾರ ಮೇಲಾದರೂ ಆಪಾದನೆ ಹೊರಿಸಲು ಬಯಸುವುದಿಲ್ಲ. ಆಕೆಯ ಸ್ನೇಹಿತರು, ಫಿಯಾನ್ಸಿ ಮತ್ತು ಆಕೆಗೆ ಹತ್ತಿರವಿದ್ದ ಪ್ರತಿಯೊಬ್ಬರೂ ಚೆನ್ನಾಗಿ ತಮಗೆ ತಿಳಿದಿದ್ದಾರೆ ಎಂದು ತಿಳಿಸಿದ್ದಾರೆ.

ರಣಬೀರ್ ಜತೆ ಕೆಲಸ ಮಾಡಬೇಕಿತ್ತು
ಜಜ್ಬಾ ಮತ್ತು ಏ ದಿಲ್ ಹೇ ಮುಷ್ಕಿಲ್ ಚಿತ್ರಗಳ ಸಂದರ್ಭದಲ್ಲಿ ಐಶ್ವರ್ಯಾ ರೈ ಜತೆಗೂ ದಿಶಾ ಕೆಲಸ ಮಾಡಿದ್ದಳು. ಆಕೆ ವಿವಿಧ ಕಲಾವಿದರ ಜತೆಗೆ ಕೆಲಸ ಮಾಡುವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಳು. ರಣಬೀರ್ ಕಪೂರ್ ಜತೆ ಕೂಡ ಕೆಲಸ ಮಾಡುವ ಸಾಧ್ಯತೆ ಇತ್ತು. ಆದರೆ ಈ ಅವಕಾಶ ಕೈತಪ್ಪಿದ್ದರಿಂದ ಆಕೆ ಬೇಸರಗೊಂಡಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ.

ಕುಗ್ಗಿ ಹೋಗಿದ್ದರೇ ಸುಶಾಂತ್?
ದಿಶಾ ಸಾಲಿಯಾನ್ ಸಾವಿನ ಬಳಿಕ ಅನೇಜ ವದಂತಿಗಳು ಹರಡಿದ್ದವು. ಸೂರಜ್ ಪಾಂಚೋಲಿ ಜತೆಗೆ ದಿಶಾ ಸಂಬಂಧವಿತ್ತು ಎಂದೆಲ್ಲ ಹೇಳಲಾಗಿತ್ತು. ಇವುಗಳನ್ನು ದಿಶಾ ಕುಟುಂಬ ನಿರಾಕರಿಸಿತ್ತು. ದಿಶಾ ಸಾವಿನ ನಂತರ ಸುಶಾಂತ್ ತೀವ್ರ ಗಾಸಿಗೊಂಡಿದ್ದರು. ಆಕೆಗೆ ಸಂತಾಪ ಸೂಚಿಸಿ ಟ್ವೀಟ್ ಕೂಡ ಮಾಡಿದ್ದರು. ಆದರೆ ಸಹೋದರಿ ಮೀತು ಸಿಂಗ್ ಜತೆ ಮಾತನಾಡುವಾಗ ಸುಶಾಂತ್, ಇನ್ನು ಆ ಜನರು ನನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದರು ಎಂಬುದಾಗಿ ಸುಶಾಂತ್ ಸಂಬಂಧಿ ತಿಳಿಸಿದ್ದಾರೆ. ದಿಶಾ ಸಾವಿನಲ್ಲಿ ತಮ್ಮ ಹೆಸರು ಬಳಕೆಯಾಗುತ್ತಿರುವುದು ಸುಶಾಂತ್ರನ್ನು ಕಂಗೆಡಿಸಿತ್ತು. ಇದರಿಂದ ಅವರು ಕುಗ್ಗಿ ಹೋಗಿದ್ದರು ಎಂದೂ ಹೇಳಲಾಗುತ್ತಿದೆ.


Click it and Unblock the Notifications











