ಪಾಕಿಸ್ತಾನದ ಏಜೆಂಟ್ನಿಂದ 5 ಕೋಟಿ ರೂ. ಪಡೆದಿದ್ದರೇ ದೀಪಿಕಾ ಪಡುಕೋಣೆ?: ಏನಿದು ಆರೋಪ?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆ, ಬಾಲಿವುಡ್ ಮತ್ತು ಭೂಗತ ಜಗತ್ತಿನ ಮಾಫಿಯಾ ನಡುವೆ ನಂಟಿನ ಆರೋಪವನ್ನೂ ಮುನ್ನೆಲೆಗೆ ತಂದಿದೆ. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರಿಗೆ ಟೋನಿ ಅಶೈ ಎಂಬ ಕಾಶ್ಮೀರ ಪ್ರತ್ಯೇಕತಾವಾದಿ ಜತೆಗೆ ನಂಟು ಇದೆ ಎಂಬ ಆರೋಪ ಕೇಳಿಬಂದಿತ್ತು. ಅವರ ನಡುವೆ ಹಣಕಾಸಿನ ವ್ಯವಹಾರ ಕೂಡ ನಡೆದಿದೆ ಎನ್ನಲಾಗಿತ್ತು.
Recommended Video
ಈಗ ನಟಿ ದೀಪಿಕಾ ಪಡುಕೋಣೆ ವಿರುದ್ಧವೂ ಈ ರೀತಿಯ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಏಜೆಂಟ್ ಜತೆಗೆ ದೀಪಿಕಾ ಸಂಪರ್ಕ ಇದ್ದು, ಆತನಿಂದ 5 ಕೋಟಿ ರೂ ಹಣ ಪಡೆದುಕೊಂಡಿದ್ದಾರೆ ಎಂದು 'ರಾ'ದ ಮಾಜಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಇದು ತೀವ್ರ ಸಂಚಲನ ಉಂಟುಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಮುಂದೆ ಓದಿ...

ಎನ್ಐಎ ತನಿಖೆ ಆರಂಭ?
ಬಾಲಿವುಡ್ಗೆ ಪಾಕಿಸ್ತಾನದ ಐಎಸ್ಐ ಮತ್ತು ಭೂಗತ ಜಗತ್ತಿನ ನಂಟು ಇದೆ ಎಂದು ಹಲವು ಆರೋಪಗಳನ್ನು ಮಾಡಿರುವ 'ರಾ' ಮಾಜಿ ಅಧಿಕಾರಿ ಎನ್ಕೆ ಸೂದ್, ಬಾಲಿವುಡ್ನ ಪಾಕಿಸ್ತಾನ ಸಂಬಂಧದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಒಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲಿಯೇ ತನಿಖೆ ಆರಂಭವಾಗಲಿದೆ ಎಂದು ತಿಳಿಸಿದ್ದರು.

ದೀಪಿಕಾ ವಿರುದ್ಧ ತನಿಖೆ?
ಬಾಲಿವುಡ್ ಕುರಿತು ಅನೇಕ ವಿಡಿಯೋಗಳನ್ನು ಮಾಡಿರುವ ಸೂದ್, ಬಹುತೇಕ ವಿಡಿಯೋಗಳಲ್ಲಿ ದೀಪಿಕಾ ಪಡುಕೋಣೆ ಹೆಸರು ಪ್ರಸ್ತಾಪಿಸಿದ್ದಾರೆ. ವಿದೇಶದಲ್ಲಿ ಆಸ್ತಿ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರುತಿಸಿ ಅವುಗಳ ಕುರಿತು ತನಿಖೆ ನಡೆಸಲು ಈಗಾಗಲೇ ಜಾರಿ ನಿರ್ದೇಶನಾಲಯ ಕಾರ್ಯ ಆರಂಭಿಸಿದೆ. ಜತೆಗೆ ದೀಪಿಕಾ ಪಡುಕೋಣೆ ಅವರ ಕುರಿತು ಕೂಡ ಇ.ಡಿ. ತನ್ನ ತನಿಖೆ ಆರಂಭಿಸಿದೆ ಎಂದು ಸೂದ್ ಹೇಳಿದ್ದಾರೆ.

5 ಕೋಟಿ ರೂ ಪಡೆದ ಆರೋಪ
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರಿಗೆ ಬೆಂಬಲ ಸೂಚಿಸಲು ದೀಪಿಕಾ ಪಡುಕೋಣೆ, ಪಾಕಿಸ್ತಾನದ ಏಜೆಂಟ್ ಅನೀಲ್ ಮುಸರತ್ನಿಂದ 5 ಕೋಟಿ ರೂ ಹಣ ಪಡೆದುಕೊಂಡಿದ್ದಾರೆ ಎಂದು ಸೂದ್ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಆಪ್ತ ಮುಸರತ್
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ನೇಹಿತನಾಗಿರುವ ಬ್ರಿಟಿಷ್-ಪಾಕಿಸ್ತಾನಿ ಉದ್ಯಮಿ ಅನೀಲ್ ಮುಸರತ್, ಬಾಲಿವುಡ್ನ ಅನೇಕ ಖ್ಯಾತನಾಮರೊಂದಿಗೆ ಸಂಪರ್ಕ ಹೊಂದಿದ್ದಾನೆ. ಇಮ್ರಾನ್ ಖಾನ್ ಪಕ್ಷ ಪಿಟಿಐ ಹಾಗೂ ಅವರ ಕ್ಯಾನ್ಸರ್ ಆಸ್ಪತ್ರೆಗೆ ಸಾಕಷ್ಟು ಹಣ ನೀಡಿದ್ದಾನೆ. ಲಂಡನ್ಗೆ ಬರುವ ಐಎಸ್ಐ ಮತ್ತು ಪಾಕ್ ಸೇನೆಯ ಸಿಬ್ಬಂದಿಗೆ ಆತಿಥ್ಯ ನೀಡಿದ್ದಾನೆ ಎಂದು ಹೇಳಲಾಗಿದೆ.

ಮುಸರತ್ ಮಗಳ ಮದುವೆಯಲ್ಲಿ ಸೆಲೆಬ್ರಿಟಿಗಳು
2017ರಲ್ಲಿ ಅನೀಲ್ ಮುಸರತ್ನ ಮಗಳ ಮದುವೆ ನಡೆದಿತ್ತು. ಅದರಲ್ಲಿ ರಣವೀರ್ ಸಿಂಗ್, ಹೃತಿಕ್ ರೋಷನ್, ಸೋನಮ್ ಕಪೂರ್, ಅನಿಲ್ ಕಪೂರ್, ಸುನಿಲ್ ಶೆಟ್ಟಿ ಮತ್ತು ಕರಣ್ ಜೋಹರ್ ಭಾಗವಹಿಸಿದ್ದರು. ಅನಿಲ್ ಕಪೂತ್ ಮತ್ತು ಅನೀಲ್ ಮುಸರತ್ ಅವರದು 25 ವರ್ಷಗಳ ಬಾಂಧವ್ಯ. ಅವರಿಗೆ ಕೌಟುಂಬಿಕ ನೆಂಟಸ್ತನವೂ ಇದೆ. ಭಾರತ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಅನೀಲ್, ಲಂಡನ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗೆ ಹಣ ನೀಡಿದ್ದಾನೆ ಎಂದು ಸೂದ್ ಆರೋಪಿಸಿದ್ದಾರೆ.

ದೀಪಿಕಾರನ್ನು ಹೊಗಳಿದ್ದ ಪಾಕ್ ಸೇನಾಧಿಕಾರಿ
ದೀಪಿಕಾ ಪಡುಕೋಣೆ ನಟನೆಯ 'ಚಪಾಕ್' ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಅದರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ದೀಪಿಕಾ, ದೆಹಲಿಯಲ್ಲಿ ಪ್ರಚಾರ ನಡೆಸುವ ವೇಳೆ ಜೆಎನ್ಯುಗೆ ತೆರಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು. ಪ್ರತಿಭಟನೆಗೆ ದೀಪಿಕಾ ಬೆಂಬಲ ನೀಡಿದ್ದಕ್ಕಾಗಿ ಪಾಕಿಸ್ತಾನದ ನಿವೃತ್ತ ಮೇಜರ್ ಜನರಲ್ ಆಸಿಫ್ ಗಫೂರ್ ಅವರನ್ನು ಶ್ಲಾಘಿಸಿದ್ದರು ಎಂದು ಸೂದ್ ಹೇಳಿದ್ದಾರೆ.

ಸೋನಂ ಕಪೂರ್ ವಿರುದ್ಧವೂ ಅನುಮಾನ
ಸಿಎಎ ವಿರೋಧಿ ಪ್ರತಿಭಟನೆಯ ಪರವಾಗಿ ಸೋನಮ್ ಕಪೂರ್ ಕೂಡ ಟ್ವೀಟ್ ಮಾಡಿದ್ದರು. ಅಂದರೆ ಉದ್ಯಮಿ ಅನೀಲ್ ಮುಸರತ್ ಸೂಚನೆಯಂತೆ ಸೋನಮ್ ಸಹ ನಡೆದುಕೊಂಡಿದ್ದಾರೆ. ಸುಶಾಂತ್ ಸಾವಿನ ಹಿಂದೆ ಭೂಗತ ಜಗತ್ತಿನ ಕೈವಾಡ ಇರುವ ಶಂಕೆ ಇದೆ ಎಂದೂ ಸೂದ್ ಹೇಳಿದ್ದಾರೆ.


Click it and Unblock the Notifications











