ಮರಳಿ ಮಣ್ಣಿಗೆ ಇರ್ಫಾನ್ ಖಾನ್: ಅಂತಿಮ ವಿಧಿವಿಧಾನ ನಡೆಸಿದ ಪುತ್ರರು
ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್ ಅವರ ಅಂತ್ಯಕ್ರಿಯೆಯನ್ನು ಮಧ್ಯಾಹ್ನ ನೆರವೇರಿಸಲಾಯಿತು. ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಅಂತಿಮ ದರ್ಶನ ಪಡೆಯಲು, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಹೀಗಾಗಿ ಕುಟುಂಬದ ಕೆಲವೇ ಆಪ್ತರು, ಹಿತೈಷಿಗಳ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು.
Recommended Video
ಮುಂಬೈನ ವೆರ್ಸೋವಾ ರುದ್ರಭೂಮಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಇರ್ಫಾನ್ ಅವರ ಮಕ್ಕಳಾದ ಬಾಬಿಲ್ ಮತ್ತು ಅಯಾನ್ ಅಂತಿಮ ಕ್ರಿಯಾ ವಿಧಿಗಳನ್ನು ಪೂರೈಸಿದರು. ಅವರ ಕುಟುಂಬದ ಕೇವಲ ಐದು ಮಂದಿ ಈ ವೇಳೆ ಹಾಜರಿದ್ದರು.
ಅದಕ್ಕೂ ಮುನ್ನ ಕುಟುಂಬದ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಅಂತಿಮ ದರ್ಶನ ಪಡೆದರು. ಇರ್ಫಾನ್ ಖಾನ್ ಅವರ ಪಾರ್ಥಿವ ಶರೀರದ ಮೆರವಣಿಗೆ ಮತ್ತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ರುದ್ರಭೂಮಿಗೆ ತೆರಳಲು ಅವಕಾಶ ನೀಡಲಿಲ್ಲ. ಆದರೆ ನಿರ್ದೇಶಕ ವಿಶಾಲ್ ಭಾರದ್ವಾಜ್ ರುದ್ರಭೂಮಿಯಲ್ಲಿ ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.

ಖಬರಿಸ್ತಾನ ಪ್ರವೇಶದ್ವಾರದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಹೆಚ್ಚಿನ ಜನಜಂಗುಳಿ ಸೇರುವ ಸಾಧ್ಯತೆ ಇದ್ದಿದ್ದರಿಂದ ಇತರರಿಗೆ ಒಳಗೆ ಪ್ರವೇಶ ನೀಡಲಿಲ್ಲ.


Click it and Unblock the Notifications











