ಭಾರಿ ವಿರೋಧದ ಬಳಿಕ ರೈತರ ಪ್ರತಿಭಟನೆ ಬಗ್ಗೆ ಉಲ್ಟಾ ಹೊಡೆದ ಕಂಗನಾ
ರೈತರ ಪ್ರತಿಭಟನೆ ಬಗ್ಗೆ ನಟಿ ಕಂಗನಾ ರಣೌತ್ ತಮ್ಮ ವರಸೆ ಬದಲಿಸಿದ್ದಾರೆ. ಇಷ್ಟು ದಿನ ರೈತರನ್ನು ಹಿಯಾಳಿಸಿ ಟ್ವೀಟ್ಗಳನ್ನು ಮಾಡಿದ್ದ ಕಂಗನಾ, ಇಂದು 'ನಾನು ರೈತರ ಪರ ಇದ್ದೇನೆ' ಎಂದಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನ ಉಗ್ರರು, ಕಾಂಗ್ರೆಸ್ ರೈತರು ಎನ್ನಲಾಗಿತ್ತು. ಕಂಗನಾ ರಣೌತ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಯಸ್ಸಾದ ರೈತ ಮಹಿಳೆಯನ್ನು 'ಈಕೆ 100 ರೂ.ಗೆ ಎಲ್ಲಿರಗೂ ಸಿಗುತ್ತಾಳೆ' ಎಂದಿದ್ದರು.
ಕಂಗನಾರ ಕೀಳು ಮಟ್ಟದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು, ಇಬ್ಬರು ವಕೀಲರು ಪ್ರತ್ಯೇಕವಾಗಿ ನೊಟೀಸ್ ಸಹ ಕಳಿಸಿದ್ದರು. ಪಂಜಾಬ್ ಮೂಲದ ನಟ ದಿಲ್ಜಿತ್, ಗಾಯಕ ಮಿಕ್ಕಾ ಸಿಂಗ್ ಅವರುಗಳು ಕಂಗನಾ ರನ್ನು ಸಾಮಾಜಿಕ ಜಾಲತಾಣದಲ್ಲಿ ತೀಕ್ಷಣವಾಗಿ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲದೆ, ಸಾವಿರಾರು ನೆಟ್ಟಿಗರಿಂದ ನಿಂದನೆಗೆ ಒಳಗಾಗಿದ್ದರು ಕಂಗನಾ ರಣೌತ್.

ರೈತರ ಪ್ರತಿಭಟನೆ ಬಗ್ಗೆ ಉಲ್ಟಾ ಹೊಡೆದ ಕಂಗನಾ
ಇದೀಗ ರೈತರ ಪ್ರತಿಭಟನೆ ಬಗ್ಗೆ ಉಲ್ಟಾ ಹೊಡೆದಿರುವ ಕಂಗನಾ ರಣೌತ್, 'ನಾನು ರೈತರ ಪರವಾಗಿದ್ದೇನೆ' ಎಂದಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಕಂಗನಾ ರಣೌತ್, ಕಳೆದ ವರ್ಷ ನಾನು ಕೃಷಿಅರಣ್ಯೀಕರಣವನ್ನು ಪ್ರಚಾರ ಮಾಡಿದ್ದೆ ಮತ್ತು ದಾನ ಸಹ ನೀಡಿದ್ದೆ' ಎಂದಿದ್ದಾರೆ.

ಕೃಷಿಕರ ಸಮಸ್ಯೆ ಬಗ್ಗೆ ನನಗೆ ಚಿಂತೆ ಇದೆ: ಕಂಗನಾ
'ಕೃಷಿಕರ ಕಲ್ಯಾಣದ ಬಗ್ಗೆ ನಾನು ಸದಾ ಮಾತನಾಡಿದ್ದೇನೆ. ಕೃಷಿ ವಿಭಾಗದಲ್ಲಿರುವ ಸಾಕಷ್ಟು ಸಮಸ್ಯೆಗಳು ಬಗೆಹರಿಯಬೇಕು ಎಂಬುದೇ ನನ್ನ ಆಸೆ. ಈಗ ಕೇಂದ್ರ ತಂದಿರುವ ಕ್ರಾಂತಿಕಾರಿ ಕಾಯ್ದೆಯು ಆ ಎಲ್ಲಾ ಸಮಸ್ಯೆಗಳನ್ನನು ಬಗೆಹರಿಸಲಿದೆ' ಎಂದಿದ್ದಾರೆ.

ಕೇಂದ್ರದ ಕಾಯ್ದೆಯು ರೈತರ ಬದುಕು ಹಸನು ಮಾಡಲಿದೆ: ಕಂಗನಾ
'ಕೇಂದ್ರ ಸರ್ಕಾರ ಈಗ ತಂದಿರುವ ಕಾಯ್ದೆಯು ರೈತರ ಬದುಕನ್ನು ಹಸನು ಮಾಡಲಿದೆ. ರೈತರ ಜೀವನವನ್ನು ಉದ್ಧಾರ ಮಾಡಲಿದೆ. ಸಾಕಷ್ಟು ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳು ರೈತರನ್ನು ಉದ್ರೇಕಗೊಳಿಸಿವೆ. ಆದರೆ ಸರ್ಕಾರವು ಎಲ್ಲ ಅನುಮಾನವನ್ನೂ ಪರಿಹರಿಸಲಿದೆ' ಎಂದಿದ್ದಾರೆ ಕಂಗನಾ.
Recommended Video

'ಕಮ್ಯುನಿಸ್ಟರು, ಖಲಿಸ್ತಾನ ಉಗ್ರರು ನುಸುಳದಂತೆ ನೋಡಿಕೊಳ್ಳಿ'
ಯಾವುದೇ ಕಮ್ಯುನಿಸ್ಟರು, ಖಲಿಸ್ತಾನ ಉಗ್ರರು ನಿಮ್ಮ ಪ್ರತಿಭಟನೆಯನ್ನು ಹೈಜಾಕ್ ಮಾಡದಂತೆ ನೋಡಿಕೊಳ್ಳಿ ಎಂದಿರುವ ಕಂಗನಾ ರಣೌತ್, ಸರ್ಕಾರವು ಈಗ ರೈತರೊಂದಿಗೆ ಮಾತುಕತೆಗೆ ಮುಂದಾಗಿದ್ದು, ಮಾತುಕತೆ ಮೂಲಕ ಎಲ್ಲ ಅನುಮಾನಗಳೂ ಸಹ ಬಗೆಹರಿಯಲಿವೆ ಎಂದಿದ್ದಾರೆ.


Click it and Unblock the Notifications











