ರೈತ ವಿರೋಧಿ ಟ್ವೀಟ್: ರಾಜ್ಯ ಹೈಕೋರ್ಟ್ನಲ್ಲಿ ಕಂಗನಾಗೆ ಹಿನ್ನಡೆ
ರೈತ ವಿರೋಧಿ ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಅಂತೆಯೇ ಕರ್ನಾಟಕದಲ್ಲಿಯೂ ಸಹ ಕಂಗನಾ ವಿರುದ್ಧ ದೂರು ದಾಖಲಾಗಿತ್ತು.
ದೆಹಲಿಯ ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದ ನಟಿ ಕಂಗನಾ ರಣೌತ್, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಇದರ ವಿರುದ್ಧ ತುಮಕೂರು, ಬೆಂಗಳೂರು, ಬೆಳಗಾವಿಯಲ್ಲಿ ದೂರು ದಾಖಲಾಗಿತ್ತು.
ಬೆಂಗಳೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನ್ಯಾಯಾಧೀಶರು, ಕಂಗನಾ ರಣೌತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಆದರೆ ಇದರ ವಿರುದ್ಧ ಕಂಗನಾ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, 'ಮೊದಲು ನೀವು ಆಕ್ಷೇಪಣೆ ಸಲ್ಲಿಸಿರಿ ಆಮೇಲಷ್ಟೆ ನಿಮ್ಮ ವಾದವನ್ನು ಪರಿಗಣಿಸಲು ಸಾಧ್ಯ' ಎಂದು ಕಂಗನಾ ಪರ ವಕೀಲರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದರು.

ಮುಂದಿನ ವಿಚಾರಣೆ ಮಾರ್ಚ್ 18ಕ್ಕೆ
ಹೈಕೋರ್ಟ್ನಲ್ಲಿ ನಟಿ ಕಂಗನಾ ರಣೌತ್ ಪರವಾಗಿ ರಿಜ್ವಾನ್ ಸಿದ್ಧಿಕಿ ವಾದ ಮಂಡಿಸುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಕಂಗನಾ ಪರ ವಕೀಲರಿಗೆ ಒಂದು ವಾರದ ಕಾಲಾವಕಾಶ ನೀಡಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 18 ಕ್ಕೆ ನಡೆಯಲಿದೆ.

ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾ
'ಈ ಹಿಂದೆ ಸಿಎಎ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಜನರೇ ಈಗ ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಜನ ದೇಶದಲ್ಲಿ ಭಯ ಹುಟ್ಟಿಸುವ ಭಯೋತ್ಪಾದಕರಾಗಿದ್ದಾರೆ' ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ವೃದ್ಧ ರೈತ ಮಹಿಳೆ ಬಗ್ಗೆ ಅಸಭ್ಯ ಟ್ವೀಟ್
ಅದಕ್ಕೂ ಮುನ್ನಾ ವೃದ್ಧ ರೈತ ಮಹಿಳೆಯ ಬಗ್ಗೆ ಅಸಭ್ಯವಾಗಿ ಟ್ವೀಟ್ ಮಾಡಿದ್ದರು ನಟಿ ಕಂಗನಾ. ಈ ಟ್ವೀಟ್ ಸಹ ಭಾರಿ ಕಿಡಿ ಹತ್ತಿಸಿತ್ತು. 'ಇಂಥಹಾ ಮಹಿಳೆಯರು ನೂರು ರುಪಾಯಿ ಆಸೆಗೆ ಎಲ್ಲಿಗೆ ಬೇಕಾದರೂ ಬರುತ್ತಾರೆ' ಎಂದು ಹೇಳಿದ್ದರು ಕಂಗನಾ.
Recommended Video

ಮಾನನಷ್ಟ ಮೊಕದ್ದಮೆ ಹೂಡಿರುವ ಜಾವೇದ್ ಅಖ್ತರ್
ಕಂಗನಾ ವಿರುದ್ಧ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳು ಅವರ ಟ್ವೀಟ್ನಿಂದಲೇ ಆಗಿವೆ. ಖ್ಯಾತ ಚಿತ್ರಸಾಹಿತಿ, ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಅವರು ಸಹ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.


Click it and Unblock the Notifications











